ಬೆಳಗಾವಿ; ಕೊರೊನಾ ತೊಲಗಿಸಲು ಬಿಜೆಪಿ ಶಾಸಕನಿಂದ ಹೋಮ!
ಬೆಳಗಾವಿ, ಮೇ 25; ಗಾಳಿಯನ್ನು ಶುದ್ಧಗೊಳಿಸಲು ಮತ್ತು ಕೋವಿಡ್ ಹರಡುವಿಕೆ ತಡೆಯಲು ಬಿಜೆಪಿ ಶಾಸಕರೊಬ್ಬರು ಹೋಮದ ಮೊರೆ ಹೋಗಿದ್ದಾರೆ. ಮತಕ್ಷೇತ್ರದ ಗಲ್ಲಿಗಲ್ಲಿಯಲ್ಲಿ ಹೋಮ ಮಾಡುತ್ತಿದ್ದು, ದಟ್ಟವಾದ ಹೊಗೆ ಆವರಿಸಿದೆ.
ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ್ ಪಾಟೀಲ್ ನೇತೃತ್ವದಲ್ಲಿ ಹೋಮ ನಡೆಯುತ್ತಿದೆ. ಶಾಸಕರು, ಅವರ ಬೆಂಬಲಿಗರು ಲಾಕ್ಡೌನ್ ನಿಯಮ ಉಲ್ಲಂಘನೆ ಮಾಡಿ ಗಲ್ಲಿ, ಗಲ್ಲಿಯಲ್ಲಿ ಹೋಮವನ್ನು ಮಾಡುತ್ತಿದ್ದಾರೆ.
ಬಡಾವಣೆಗಳ ಮನೆಗಳ ಮುಂದೆ ಅಗ್ನಿಕುಂಡ ಸ್ಥಾಪನೆ ಮಾಡಿ, ಭೆರಣಿ, ಕರ್ಪೂರ, ತುಪ್ಪ, ಬೇವಿನ ಎಲೆ, ಅಕ್ಕಿ, ಲವಂಗ ಮುಂತಾದ ವಸ್ತುಗಳನ್ನು ಹಾಕಿ ಹೋಮ ಮಾಡಲಾಗುತ್ತಿದೆ. ಇದರಿಂದಾಗಿ ಬಡಾವಣೆಗಳಲ್ಲಿ ದಟ್ಟ ಹೊಗೆ ಆವರಿಸಿಕೊಂಡಿದೆ.

ಹೋಮ ಮಾಡುವುದರಿಂದ ವಾತಾವರಣ ಶುದ್ಧಿಯಾಗುತ್ತದೆ. ಇದರಿಂದಾಗಿ ಕೊರೊನಾ ಸೋಂಕು ನಿವಾರಣೆಯಾಗುತ್ತದೆ ಎಂದು ಶಾಸಕರು ಹೇಳಿದ್ದಾರೆ. ಒಂದೇ ದಿನ 50ಕ್ಕೂ ಹೆಚ್ಚು ಕಡೆ ಹೋಮಗಳನ್ನು ಮಾಡಲಾಗಿದೆ.
ಜೂನ್ 15ರ ತನಕ ಕ್ಷೇತ್ರದ ಪ್ರತಿ ಬಡಾವಣೆಗಳಲ್ಲಿ ಹೋಮ ಮಾಡಲಾಗುತ್ತದೆ ಎಂದು ಶಾಸಕರು ಹೇಳಿದ್ದಾರೆ. ಶಾಸಕರ ಬೆಂಬಲಿಗರು ಸಾಮಾಜಿಕ ಅಂತವನ್ನು ಮರೆತು ಹೋಮದಲ್ಲಿ ಪಾಲ್ಗೊಂಡಿದ್ದಾರೆ.
ಶಾಸಕರ ಸಮರ್ಥನೆ; ಹೋಮ ಮಾಡಿಸುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕರು, "ಇದನ್ನು ಮೌಢ್ಯ ಎಂದು ತಿಳಿದುಕೊಳ್ಳುವವರಿಗೆ ಅದು ಮೌಢ್ಯದಂತೆ ಕಾಣುತ್ತದೆ. ಹೋಮ ಮಾಡುವುದರಿಂದಿ ವಾತಾವತಣ ಶುದ್ಧಿಯಾಗುತ್ತದೆ. ಪರಿಸರ ಇಲಾಖೆಯವರಿಗೂ ಇದರ ಬಗ್ಗೆ ಕೇಳಿದ್ದೇನೆ" ಎಂದು ಹೇಳಿದ್ದಾರೆ.
"ಹೋಮ ಮಾಡಲು ಜನರೇ ಮುಂದೆ ಬರುತ್ತಿದ್ದಾರೆ. ಕ್ಷೇತ್ರದಲ್ಲಿ ಹೋಮ ಹವನ ಕಾರ್ಯ ಮುಂದುವರೆಯಲಿದೆ. ಮನೆಯಲ್ಲಿ ರೋಗಿಗಳು ಇದ್ದರೆ ಪರಿಣಾಮ ಏನಾಗಲಿದೆ? ಎಂಬುದನ್ನು ತಿಳಿದುಕೊಂಡೇ ಹೋಮ ಮಾಡಿದ್ದೇವೆ" ಎಂದು ತಿಳಿಸಿದ್ದಾರೆ.
ಸ್ಯಾನಿಟೈಸ್ ಮಾಡಿದ ಕಾರ್ಯಕರ್ತರು; ಶಾಸಕ ಅಭಯ್ ಪಾಟೀಲ್ ಶಿವಾಜಿ ಗಾರ್ಡನ್ ಸುತ್ತಮುತ್ತ ಹೋಮ ಮಾಡಿದರು. ಇದಾದ ಕೆಲವೇ ಗಂಟೆಗಳ ಬಳಿಕ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅಭಿಮಾನಿಗಳು ಸ್ಥಳಕ್ಕೆ ಆಗಮಿಸಿ ಔಷಧಿ ಸಿಂಪಡಣೆ ಮಾಡಿ ಸ್ಯಾನಿಟೈನ್ ಮಾಡಿದರು.












Click it and Unblock the Notifications