ಎಫ್ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ; ಬೆಳಗಾವಿ ಮೂಲದ ಶಿಕ್ಷಕನ ಬಂಧನ
ಬೆಳಗಾವಿ, ಫೆಬ್ರವರಿ 12: ಪ್ರಥಮ ದರ್ಜೆ ಸಹಾಯಕರ ನೇಮಕಾತಿಗಾಗಿ ನಡೆಯಬೇಕಿದ್ದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಬೆಳಗಾವಿಯಲ್ಲಿ ದೈಹಿಕ ಶಿಕ್ಷಕರೊಬ್ಬರನ್ನು ಬಂಧಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ವೆಂಕಟೇಶ್ ಬಂಧಿತ ಆರೋಪಿ. ಕೊರಟಗೆರೆ ತಾಲೂಕಿನ ಡಾ. ಬಿ. ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ದೈಹಿಕ ಶಿಕ್ಷಕರಾಗಿ ವೆಂಕಟೇಶ್ ಕೆಲಸ ಮಾಡುತ್ತಿದ್ದರು.
ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ಈಗಾಗಲೇ ಬಂಧಿತನಾಗಿರುವ ಆರೋಪಿ ರಾಚಪ್ಪ ನೀಡಿದ ಮಾಹಿತಿ ಅನ್ವಯ ವೆಂಕಟೇಶ್ ಬಂಧಿಸಲಾಗಿದೆ. ಸರ್ಕಾರಿ ನೌಕರಿ ಪಡೆಯಬೇಕು ಎಂದು ಕನಸು ಕಾಣುತ್ತಿದ್ದ ವೆಂಕಟೇಶ್ ಪರೀಕ್ಷೆಗಾಗಿ ತಯಾರಿ ಮಾಡಿಕೊಳ್ಳುತ್ತಿದ್ದ.

ಆರೋಪಿ ರಾಚಪ್ಪನಿಗೆ ವೆಂಕಟೇಶ್ ದೊಡ್ಡಪ್ಪನ ಮಗ. ಪರೀಕ್ಷೆ ದಿನಾಂಕ ಘೋಷಣೆಗೂ ಮೊದಲೇ ಕರೆ ಮಾಡಿದ್ದ ರಾಚಪ್ಪ ನನಗೆ ಪ್ರಶ್ನೆ ಪತ್ರಿಕೆ ಸಿಗಲಿದೆ. ಅದನ್ನು ನಿನಗೆ ಕೊಡುವೆ ಅಭ್ಯರ್ಥಿಗಳನ್ನು ಒಟ್ಟುಗೂಡಿಸು, ಪ್ರತಿಯೊಬ್ಬರಿಂದ 10 ಲಕ್ಷ ಹಣ ಸಂಗ್ರಹ ಮಾಡು ಎಂದು ಹೇಳಿದ್ದ.
ರಾಚಪ್ಪ ಮಾತನ್ನು ನಂಬಿದ್ದ ವೆಂಕಟೇಶ್ ಸ್ಥಳೀಯ ಅಭ್ಯರ್ಥಿಗಳನ್ನು ಸೇರಿಸಿ ಪ್ರಶ್ನೆ ಪತ್ರಿಕೆಗಾಗಿ ಕಾಯುತ್ತಿದ್ದ. ಪರೀಕ್ಷೆ ಹಿಂದಿನ ದಿನ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಕೆಲವು ಆರೋಪಿಗಳ ಬಂಧನವಾಗುತ್ತಿದ್ದಂತೆ ವೆಂಕಟೇಶ್ ತಲೆಮರೆಸಿಕೊಂಡಿದ್ದ.
ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣ ಜನವರು 24ರಂದು ನಡೆಯಬೇಕಿದ್ದ ಎಫ್ಡಿಎ ಪರೀಕ್ಷೆಯನ್ನು ಮುಂದೂಡಲಾಗಿತ್ತು.
ಫೆಬ್ರವರಿ 28ರಂದು ಪರೀಕ್ಷೆ ನಡೆಸುವುದಾಗಿ ಕರ್ನಾಟಕ ಲೋಕಸೇವಾ ಆಯೋಗ ಈಗಾಗಲೇ ಘೋಷಣೆ ಮಾಡಿದೆ.












Click it and Unblock the Notifications