Muda Scam: ಸಿಎಂ ಸ್ಥಾನಕ್ಕೆ ಕುತ್ತು- ಸವದತ್ತಿ ಯಲ್ಲಮ್ಮನ ಮೊರೆ ಹೋದ ಸಿದ್ದರಾಮಯ್ಯ
ಬೆಳಗಾವಿ ಅಕ್ಟೋಬರ್ 13: ಮುಡಾ ಹಗರಣದ ತನಿಖೆ ಮುಂದುವರೆದಿದ್ದು ಕೈ ಪಾಳಯದಲ್ಲಿ ಸಿಎಂ ಖುರ್ಚಿ ಬಡಿದಾಟ ಜೋರಾಗಿದೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಬೆಳಗಾವಿಯ ಸವದತ್ತಿ ಯಲ್ಲಮ್ಮನ ಮೊರೆ ಹೋಗಲು ನಿರ್ಧರಿಸಿದ್ದಾರೆ. ಬೆಳಗಾವಿಯಲ್ಲಿರುವ ಶಕ್ತಿ ದೇವತೆ ಸವದತ್ತಿ ಯಲ್ಲಮ್ಮನ ದರ್ಶನವನ್ನು ಇಂದು ಸಿಎಂ ಸಿದ್ದರಾಮಯ್ಯ ಪಡೆಯಲಿದ್ದಾರೆ.
ವಿವಿಧ ಕಾಮಗಾರಿಗಳ ಲೋಕಾರ್ಪಣೆ ಕಾರ್ಯಕ್ರಮಗಳು ಜರುಗಲಿದ್ದು, ಇದಕ್ಕಾಗಿ ಇಂದು ಮಧ್ಯಾಹ್ನ 1.30ಕ್ಕೆ ಸಿಎಂ ಸವದತ್ತಿಗೆ ಪ್ರಯಾಣ ಮಾಡಲಿದ್ದಾರೆ. ಇದೇ ವೇಳೆ ಮುಡಾ ಸಂಕಷ್ಟದಿಂದ ಪಾರಾಗಲು ಶಕ್ತಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆಂದು ತಿಳಿದು ಬಂದಿದೆ. ದಸರಾ ಹಬ್ಬದ ಪ್ರಯುಕ್ತ ಮೈಸೂರಿಗೆ ತೆರಳಿದ್ದ ಸಿಎಂ ಅಲ್ಲಿಂದ ವಿಮಾನ ಮೂಲಕ ಹುಬ್ಬಳ್ಳಿಗೆ ತೆರಲಿದ್ದಾರೆ. ಅಲ್ಲಿಂದ ರಸ್ತೆ ಮಾರ್ಗವಾಗಿ ಸವದತ್ತಿಗೆ ಭೇಟಿ ನೀಡಲಿದ್ದಾರೆ.

ಇನ್ನೂ ವಿಜಯದಶಮಿ ದಿನವೇ ಕೇಂದ್ರ ವಿರುದ್ಧ ಸಿದ್ದು ತೆರಿಗೆ ಸಮರ ಕರೆ ಕೊಟ್ಟಿದ್ದಾರೆ. 'ಕೇಂದ್ರ ಸರ್ಕಾರವು ತೆರಿಗೆ ಪಾಲಿನಲ್ಲಿ ರಾಜ್ಯಕ್ಕೆ ಮತ್ತೊಮ್ಮೆ ತೀವ್ರ ಅನ್ಯಾಯ ಮಾಡಿದೆ. ಈ ಅನ್ಯಾಯದ ವಿರುದ್ಧ ಪ್ರತಿಬ್ಬ ಕನ್ನಡಿಗನೂ ಜಾತಿ-ಧರ್ಮ, ಪಕ್ಷ-ಪಂಥ ಭೇದವಿಲ್ಲದೆ ದನಿ ಎತ್ತುವ ಶಪಥ ಮಾಡಬೇಕು' ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ವಿಜಯದಶಮಿ ದಿನವೇ ಕರೆ ನೀಡಿದ್ದಾರೆ.
ಮುಡಾ ಹಗರಣದ ಪ್ರಕರಣದಲ್ಲಿ ಸಿಎಂ ರಾಜೀನಾಮೆಗೆ ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ. ಇದರ ನಡುವೆ ಕೈ ಪಾಳಯದಲ್ಲಿ ಸಿಎಂ ಖುರ್ಚಿ ಗುದ್ದಾಟ ಶುರುವಾಗಿದೆ. ಆದರೆ ಸಿದ್ದರಾಮಯ್ಯ ಮಾತ್ರ ನಿತ್ಯ ದೇವರ ಮೊರೆ ಹೋಗಿ ಶಾಂತವಾಗಿದ್ದಾರೆ. ಹೌದು... ಕಳೆದ ದಿನ ಮೈಸೂರು ಚಾಮುಂಡಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಸಿಎಂ ತಮ್ಮ ಮೇಲೆ ಚಾಮುಂಡೇಶ್ವರಿ ಆಶೀರ್ವಾದ ಇದೆ ಎಂದಿದ್ದರು.

ಕಳೆದ ದಿನ ಮೈಸೂರಿನಲ್ಲಿ ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ತಾಯಿ ಚಾಮುಂಡೇಶ್ವರಿ ದೇವಿಯ ಆಶೀರ್ವಾದ ಇರುವುದರಿಂದಲೇ ನಾನು ಇಷ್ಟು ವರ್ಷ ರಾಜಕೀಯದಲ್ಲಿ ಇದ್ದೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೊಗಳುವವರು ತೆಗಳುವವರು ಇಬ್ಬರೂ ಇರುತ್ತಾರೆ. ಆದರೆ ಆರೋಗ್ಯಕರ ಚರ್ಚೆ ಆಗಬೇಕು ಎಂದರು.
ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ರಾಜ್ಯದ ಪ್ರಮುಖ ಜಲಾಶಯಗಳು ತುಂಬಿವೆ. ಅದ್ಧೂರಿಯಾಗಿ ದಸರಾ ಆಚರಿಸಲಾಗಿದೆ. ಉತ್ತಮ ಮಳೆ, ಬೆಳೆಯಾಗಿ, ರೈತರು, ಸಾರ್ವಜನಿಕರು ಸುಖ, ಸಮೃದ್ಧಿಯಿಂದ ಇರಲಿ ಎಂದು ದೇವಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದರು.
ಒಂದು ಕಡೆ ಡಿಸೆಂಬರ್ನಲ್ಲಿ ರಾಜ್ಯ ರಾಜಕಾರಣದಲ್ಲಿ ಕ್ರಾಂತಿ ನಡೆಯಲಿದೆ, ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಾರೆ ಎಂಬ ಚರ್ಚೆ ನಡೆದರೆ, ಮತ್ತೊಂದು ಕಡೆ ಸಿದ್ದರಾಮಯ್ಯ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಸಚಿವರ ಗೌಪ್ಯ ಸಭೆಗಳು ನಡೆಯುತ್ತಿವೆ. ಇವುಗಳ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಹೇಳುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.
ಡಿಸಿಎಂ ಸ್ಥಾನಕ್ಕೂ ಮುನ್ನ ಡಿಕೆ ಶಿವಕುಮಾರ್ ಅವರು ಸಿಎಂ ಆಕಾಂಕ್ಷಿಯಾಗಿದ್ದರು. ಇವರೊಂದಿಗೆ ಸತೀಶ್ ಜಾರಕಿಹೊಳಿ, ಶೋಭಾ ಕರಂದ್ಲಾಜೆ, ಜಿ ಪರಮೇಶ್ವರ್ ಸಿಎಂ ರೇಸ್ನಲ್ಲಿ ಇದ್ದಾರೆ. ಆದರೀಗ ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಆಗಿ ಮುಂದುವರೆಯುತ್ತಾರೆಂದು ಹೇಳಿದ್ದಾರೆ. ಆದರೂ ವಿರೋಧ ಪಕ್ಷಗಳು ಮುಡಾ ಹಗರಣ ಪ್ರಕರಣದ ತನಿಖೆಗೆ ಸಹಕರಿಸಿ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿವೆ. ಹಾಗಾದರೆ ಸಿಎಂ ರಾಜೀನಾಮೆ ನೀಡ್ತಾರಾ ಕಾದು ನೋಡಬೇಕಿದೆ.












Click it and Unblock the Notifications