ನನ್ನ ಮುಖ್ಯಮಂತ್ರಿ ಮಾಡಿದ್ದು ಇವರೇ, ಪ್ಲೀಸ್ ಇವರಿಗೆ ವೋಟ್ ಹಾಕಿ!
ಬೆಳಗಾವಿ, ಡಿಸೆಂಬರ್.01: ಕಾಂಗ್ರೆಸ್ ನಾಯಕರು ಆಡುವುದಕ್ಕೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಡುವುದಕ್ಕೂ ಹೇಳಿ ಮಾಡಿಸಿದಂತಿದೆ. ಒಂದು ಕಡೆ ಕಾಂಗ್ರೆಸ್ಸಿಗರು ಬಿಜೆಪಿ ಋಣರಾಜಕಾರಣ ಮಾಡುತ್ತಿದೆ ಎಂದು ದೂಷಿಸುತ್ತಿದೆ.
ಇನ್ನೊಂದು ಕಡೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮೇಲಿಂದ ಮೇಲೆ ಅದೇ ರೀತಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಂದು ಬೆಳಗಾವಿ ಜಿಲ್ಲೆ ಗೋಕಾಕ್ ವಿಧಾನಸಭಾ ಕ್ಷೇತ್ರದ ಅಂಕಲಗಿಯಲ್ಲಿ ಆಗಿದ್ದೂ ಕೂಡಾ ಅದೆ. ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಪರ ಅಬ್ಬರದ ಪ್ರಚಾರ ನಡೆಸಿದ ಬಿಎಸ್ ವೈ ಮತ್ತದೆ ಹಳೆ ಹೇಳಿಕೆಗಳನ್ನು ರಿಪೀಟ್ ಮಾಡಿದರು.
ಏನಿದು ಹೊಸ ಗುಲ್ಲು: ಅನರ್ಹ ಶಾಸಕರು ಮುಂಬೈ ಹೊಟೇಲ್ ನಲ್ಲಿ ಹೆಣ್ಣು, ಹೆಂಡದ ಹಿಂದೆ ಬಿದ್ದಿದ್ದರೇ?
ಹೌದು, ಭಾವಿ ಸಚಿವ ರಮೇಶ್ ಜಾರಕಿಹೊಳಿಗೆ ಮತ ನೀಡಬೇಕು ಎನ್ನುವ ಮೂಲಕವೇ ಸಿಎಂ ಬಿ.ಎಸ್.ಯಡಿಯೂರಪ್ಪ ತಮ್ಮ ಭಾಷಣವನ್ನು ಶುರು ಮಾಡಿದರು. ಮುಖ್ಯಮಂತ್ರಿಗಳು ಅಷ್ಟಕ್ಕೆ ಸುಮ್ಮನೆ ಆಗಲಿಲ್ಲ. ಬದಲಿಗೆ ನಾನು ಮುಖ್ಯಮಂತ್ರಿ ಆಗುವುದಕ್ಕೆ ರಮೇಶ್ ಜಾರಕಿಹೊಳಿಯವರೇ ಕಾರಣ. ಅವರು ಇಲ್ಲದಿದ್ದರೆ ಇಂದು ನಾನು ಮುಖ್ಯಮಂತ್ರಿಯಾಗಿ ನಿಮ್ಮ ಮುಂದೆ ಬರುತ್ತಿರಲಿಲ್ಲ. ನಿಮ್ಮ ಅಮೂಲ್ಯವಾದ ಮತವನ್ನು ಅವರಿಗೇ ನೀಡಿ ಗೆಲ್ಲಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.

ಅನರ್ಹ ಶಾಸಕರನ್ನು ಒಗ್ಗೂಡಿಸಿದ್ದೇ ರಮೇಶ್ ಜಾರಕಿಹೊಳಿ:
17 ಮಂದಿ ಶಾಸಕರು ಬಿಜೆಪಿಗೆ ಬೆಂಬಲಿಸಲು ರಮೇಶ್ ಜಾರಕಿಹೊಳಿಯೇ ಮುಖ್ಯಕಾರಣ. ಅವರು ಎಲ್ಲ ಶಾಸಕರನ್ನು ಒಗ್ಗೂಡಿಸಿಕೊಂಡು ಗಟ್ಟಿಯಾಗಿ ನಿಲ್ಲದಿದ್ದರೆ ನಾನು ಮುಖ್ಯಮಂತ್ರಿ ಆಗುತ್ತಿರಲಿಲ್ಲ. ರಮೇಶ್ ಜಾರಕಿಹೊಳಿಗೆ ನೀಡುವ ಪ್ರತಿಯೊಂದು ಮತವೂ ಕೂಡಾ ನನಗೆ ನೀಡುವ ಮತದಂತೆ ಎಂದು ಬಿಎಸ್ ವೈ ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಖ್ಯಮಂತ್ರಿ ಯಡಿಯೂರಪ್ಪ ಗುಡುಗಿದರು. ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಏಕಾಂಗಿಯಾಗಿ ಬಿಟ್ಟಿದ್ದಾರೆ. ನಾನೇ ಮುಂದಿನ ಸಿಎಂ ಎಂದು ಅವರು ಹೇಳಿಕೊಂಡು ತಿರುಗುತ್ತಿದ್ದಾರೆ. ಆದರೆ, ಯಾವುದೇ ಕಾಂಗ್ರೆಸ್ ನಾಯಕರು ಅವರ ಬೆನ್ನಿಗೆ ನಿಂತಿಲ್ಲ ಎಂದು ಬಿಎಸ್ ವೈ ಕಿಡಿ ಕಾರಿದ್ದಾರೆ.












Click it and Unblock the Notifications