ಬೆಳಗಾವಿ; ನದಿಯಲ್ಲಿ ಸಿಕ್ಕ ಶವದೊಂದಿಗೆ ಇತ್ತು 1.5 ಕೆಜಿ ಚಿನ್ನ!
ಬೆಳಗಾವಿ, ಅಕ್ಟೋಬರ್ 08: ಕೃಷ್ಣಾ ನದಿಯಲ್ಲಿ ತೇಲಿ ಬಂದ ಶವದೊಂದಿಗೆ 1.5 ಕೆಜಿ ಚಿನ್ನ ಸಿಕ್ಕಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಅಥಣಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆಯನ್ನು ನಡೆಸಿದರು.
ಅಕ್ಟೋಬರ್ 4ರಂದು ಅಥಣಿ ತಾಲೂಕಿನ ಅವರಖೋಡ ಗ್ರಾಮದ ಬಳಿಯಲ್ಲಿ ಕೃಷ್ಣಾ ನದಿಯಲ್ಲಿ ಪುರುಷನ ಶವವೊಂದು ಪತ್ತೆಯಾಗಿತ್ತು. ಸ್ಥಳೀಯರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪೊಲೀಸರು ಬಂದು ಪರಿಶೀಲನೆ ನಡೆಸಿದಾಗ ಶವದ ಜೊತೆ 1.5 ಕೆಜಿ ಚಿನ್ನ ಸಹ ಇರುವುದು ಪತ್ತೆಯಾಗಿದೆ. ಮೃತಪಟ್ಟ ವ್ಯಕ್ತಿ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಸಾಗರ ಪಾಟೀಲ (30) ಎಂಬ ಗುರುತು ಸಿಕ್ಕಿದೆ.

ಸಾಂಗ್ಲಿ ಜಿಲ್ಲೆಯ ಮಿರಜ ತಾಲೂಕಿನ ಪಾಟಗಾಂವ ಗ್ರಾಮದ ನಿವಾಸಿ ಎಂಬುದನ್ನು ಪತ್ತೆ ಹಚ್ಚಿದ ಪೊಲೀಸರು ಕುಟುಂಬದವರಿಗೆ ಈ ಕುರಿತು ಮಾಹಿತಿ ನೀಡಿದರು. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣವಣವನ್ನು ದಾಖಲು ಮಾಡಿಕೊಂಡರು.
ಶವದ ಮೇಲೆ ಗಾಯದ ಗುರುತುಗಳಿದ್ದು ಸಾಗರ ಪಾಟೀಲ ಮೃತಪಟ್ಟಿದ್ದು ಹೇಗೆ? ಎಂದು ತನಿಖೆ ನಡೆಯುತ್ತಿದೆ. ಶವದ ಜೊತೆ ಚಿನ್ನ ಸಿಕ್ಕಿರುವುದು ಕಂಡು ಪೊಲೀಸರು ಸಹ ಅಚ್ಚರಿಗೊಂಡಿದ್ದಾರೆ.
ಅಥಣಿ ಪೊಲೀಸರು ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಕುಟುಂಬದವರಿಗೆ ಶವವನ್ನು ಹಸ್ತಾಂತರ ಮಾಡಿದರು. ಇದು ಕೊಲೆಯೇ?, ಆತ್ಮಹತ್ಯೆಯೇ? ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.












Click it and Unblock the Notifications