ಕಳೆದ ಅಧಿವೇಶನದಲ್ಲಿ ಮೈತ್ರಿ ಸರ್ಕಾರದಿಂದ ದುಂದು ವೆಚ್ಚ; ಆರ್ ಟಿಐ ಕಾರ್ಯಕರ್ತ ಗಡಾದ್ ಆರೋಪ
ಬೆಳಗಾವಿ, ಅಕ್ಟೋಬರ್ 10: ಮೂರು ದಿನಗಳ ಅಸೆಂಬ್ಲಿ ಅಧಿವೇಶನ ಇಂದಿನಿಂದ ಆರಂಭವಾಗಿದೆ. ಈ ನಡುವೆಯೇ ಕಳೆದ ವರ್ಷ ಬೆಳಗಾವಿ ಸುವರ್ಣ ಸೌಧದಲ್ಲಿ ನಡೆದ ಅಧಿವೇಶನದಲ್ಲಿ ದೋಸ್ತಿ ಸರ್ಕಾರದಿಂದ ವೃಥಾ ಖರ್ಚು ಮಾಡಲಾಗಿದೆ ಎಂದು ಬೆಳಗಾವಿಯಲ್ಲಿ ಆರ್ ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ಆರೋಪ ಮಾಡಿದ್ದಾರೆ.
2018ರ ಬೆಳಗಾವಿ ಚಳಿಗಾಲ ಅಧಿವೇಶನಕ್ಕೆ ಮೈತ್ರಿ ಸರ್ಕಾರದಿಂದ ಅನವಶ್ಯಕವಾಗಿ ಹಣ ಪೋಲು ಮಾಡಲಾಗಿದೆ ಎಂದು ಅವರು ದೂರಿದ್ದಾರೆ. ಕಳೆದ ಅಧಿವೇಶನದಲ್ಲಿ 13 ಕೋಟಿ 85 ಲಕ್ಷ ವೆಚ್ಚವಾಗಿರುವುದಾಗಿ ಮಾಹಿತಿ ನೀಡಿದ್ದಾರೆ.
10 ದಿನಗಳ ಅಧಿವೇಶನದಲ್ಲಿ ಕೇವಲ 40 ಗಂಟೆ 26 ನಿಮಿಷ ಕಲಾಪ ನಡೆದಿದೆ. ವಸತಿಗಾಗಿ 4 ಕೋಟಿ 42 ಲಕ್ಷ 76 ಸಾವಿರ, ಪೆಂಡಾಲ್ ಗಾಗಿ 2 ಕೋಟಿ 33 ಲಕ್ಷ 70 ಸಾವಿರ, ಊಟ ಉಪಾಹಾರಕ್ಕಾಗಿ 3 ಕೋಟಿ ವೆಚ್ಚವಾಗಿರುವುದಾಗಿ ತಿಳಿಸಿದ್ದಾರೆ.

ಭತ್ಯೆಗಾಗಿ 2 ಕೋಟಿ 61 ಲಕ್ಷ 75 ಸಾವಿರ ಬಳಸಲಾಗಿದ್ದು, ಅಧಿವೇಶನ ಸಂದರ್ಭದಲ್ಲಿ ಶಾಸಕರ ಪ್ರತಿ ದಿನದ ವಾಹನ ಭತ್ಯೆಗೆ 2500 ರೂಪಾಯಿ ಖರ್ಚು ಮಾಡಿರುವುದಾಗಿ ಆರೋಪಿಸಿದ್ದಾರೆ. ಅಧಿವೇಶನಕ್ಕಾಗಿ ಜಿಲ್ಲಾಡಳಿತದಿಂದ ಪ್ರತಿಷ್ಠಿತ ಹೊಟೇಲ್ ಗಳಿಗೆ 4 ಕೋಟಿ 42 ಲಕ್ಷ 76 ಸಾವಿರ ವೆಚ್ಚವಾಗಿದೆ.
ಪೊಲೀಸ್ ಇಲಾಖೆಯಿಂದ 2 ಕೋಟಿ 9 ಲಕ್ಷ ವೆಚ್ಚವಾಗಿದ್ದರೆ, ಭದ್ರತೆಗಾಗಿ ಸಿಸಿ ಟಿವಿ ಕ್ಯಾಮೆರಾ ಬಾಡಿಗೆಗೆ 21 ಲಕ್ಷ 58 ಸಾವಿರ ಖರ್ಚಾಗಿದೆ. ಲೋಕೋಪಯೋಗಿ ಇಲಾಖೆಯಿಂದ 5 ಕೋಟಿ 58 ಲಕ್ಷ ವೆಚ್ಚ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಆದರೆ ಇಷ್ಟೆಲ್ಲಾ ಕೋಟಿ ಕೋಟಿ ಖರ್ಚು ಮಾಡಿದರೂ ಜನರ ಸಮಸ್ಯೆಗೆ ಸ್ಪಂದನೆ ಸಿಕ್ಕಿಲ್ಲ ಎಂದು ಗಡಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಹತ್ತು ದಿವಸಗಳ ಅಧಿವೇಶನಕ್ಕೆ ವೆಚ್ಚವಾದ ಹಣದ ಮೊತ್ತವನ್ನು ಮತ್ತು ಅಧಿವೇಶನದ ಕಾರ್ಯಕಲಾಪ ನಡೆದ ಅವಧಿಯನ್ನು ಗಮನಿಸಿದರೆ ಅಧಿವೇಶನಕ್ಕೆ ಪ್ರತಿ ತಾಸಿಗೆ ಸರಾಸರಿ 3 ಲಕ್ಷ 37ಸಾವಿರ ರೂಗಳು ಖರ್ಚಾಗಿದೆ. ಅಧಿವೇಶನದಲ್ಲಿ ಯಾವುದೇ ಗಂಭೀರ ಚರ್ಚೆಗಳು ನಡೆದು ಸಮಸ್ಯೆಗಳಿಗೆ ಪರಿಹಾರ ದೊರೆಯದೇ ಇದ್ದರೂ ಸಾರ್ವಜನಿಕರಿಂದ ತೆರಿಗೆ ರೂಪದಲ್ಲಿ ಸಂಗ್ರಹಿಸಲಾದ ಖಜಾನೆಯಲ್ಲಿನ 13,85,38,155ರೂಗಳನ್ನು ಖರ್ಚು ಮಾಡಲಾಗಿದೆ. ಇದು ಕೇವಲ "ಸಾರ್ವಜನಿಕರ ತೆರಿಗೆ ನುಂಗುವ ಅಧಿವೇಶನ" ಎಂದರೆ ತಪ್ಪಾಗಲಾರದು" ಎಂದು ಹೇಳಿದ್ದಾರೆ.












Click it and Unblock the Notifications