ಇಂದು ಹೆಬ್ಬಾಳ್ಕರ್ v/s ಜಾರಕಿಹೊಳಿ ಬ್ರದರ್ಸ್, ಗೆಲುವು ಯಾರಿಗೆ?
ಬೆಳಗಾವಿ, ಸೆಪ್ಟೆಂಬರ್ 07: ರಾಜ್ಯ ರಾಜಕೀಯದಲ್ಲಿ ವಿವಾದ ಎಬ್ಬಿಸಿರುವ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ ಸಹೋದರರ ನಡುವಿನ ಕಿತ್ತಾಟಕ್ಕೆ ಇಂದು ಅಗ್ನಿಪರೀಕ್ಷೆ ಇದೆ.
ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ ಸಹೋದರರ ನಡುವಿನ ರಾಜಕೀಯ ಕೆಸರೆರೆಚಾಟಕ್ಕೆ ಕಾರಣವಾಗಿದ್ದ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಇಂದು ನಡೆಯಲಿದೆ.
ಏನಿದು ಜಾರಕಿಹೊಳಿ ಬ್ರದರ್ಸ್ ವರ್ಸಸ್ ಲಕ್ಷ್ಮೀ ಹೆಬ್ಬಾಳ್ಕರ್ ಕದನ?
ಚುನಾವಣಾ ಪ್ರಕ್ರಿಯೆ ಇಂದು ಬೆಳಿಗ್ಗೆ 10 ಗಂಟೆಗೆ ಆರಂಭವಾಗಲಿದೆ. 10 ಗಂಟೆಯಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಮಧ್ಯಾಹ್ನ 1:20 ಕ್ಕೆ ನಾಮಪತ್ರ ಪರಿಶೀಲನೆ ಆರಂಭವಾಗುತ್ತದೆ. 1:50 ರ ವರೆಗೆ ನಾಮಪತ್ರ ವಾಪಸ್ ಪಡೆಯಲು ಕೊನೆಯ ಅವಕಾಶ ಇರುತ್ತದೆ.
ನಾಮಪತ್ರ ವಾಪಸ್ ಪಡೆಯುವ ಸಮಯ ಮುಗಿಯುತ್ತಿದ್ದಂತೆ ಮತದಾನ ಪ್ರಾರಂಭವಾಗುತ್ತದೆ. ಮಧ್ಯಾಹ್ನ ಮೂರು ಗಂಟೆಗೆ ಫಲಿತಾಂಶ ಪ್ರಕಟವಾಗುತ್ತದೆ. ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಜಾರಕಿಹೊಳಿ ಸಹೋದರರ ನಡುವಿನ ತಿಕ್ಕಾಟದಿಂದಾಗಿ ಈ ಚುನಾವಣೆ ಭಾರಿ ಕುತೂಹಲ ಕೆರಳಿಸಿದೆ.

ಲಕ್ಷ್ಮಿ ಬೆಂಬಲದಲ್ಲಿದ್ದಾರೆ 9 ನಿರ್ದೇಶಕರು
9 ನಿರ್ದೇಶಕರನ್ನು ಹೊಂದಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಮ್ಮ ಅಭ್ಯರ್ಥಿಯನ್ನೇ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಲು ಪಟ್ಟು ಹಿಡಿದಿದ್ದಾರೆ. 5 ನಿರ್ದೇಶಕರ ಬೆಂಬಲ ಹೊಂದಿರುವ ಜಾರಕಿಹೊಳಿ ಸಹೋದರರು ತಮ್ಮ ಅಭ್ಯರ್ಥಿಯನ್ನು ಅಧ್ಯಕ್ಷರನ್ನಾಗಿಸಲು ಹೋರಾಟಕ್ಕಿಳಿದಿದ್ದಾರೆ. ಒಟ್ಟು 14 ನಿರ್ದೇಶಕರ ಮತಗಳಿದ್ದು 9 ಮತ ಪಡೆದ ಅಭ್ಯರ್ಥಿಗೆ ಅಧ್ಯಕ್ಷ ಪಟ್ಟ ಒಲಿಯಲಿದೆ.

ಯಾರ ಕೈಗೂ ಸಿಗುತ್ತಿಲ್ಲ ನಿರ್ದೇಶಕರು
ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬೆಂಬಲದ 9 ನಿರ್ದೇಶಕರು ಯಾರ ಕೈಗೆ ಸಿಗದೆ ಕಾಣೆಯಾಗಿದ್ದಾರೆ. ಅವರ ಮೊಬೈಲ್ಗಳೂ ಸ್ವಿಚ್ ಆಫ್ ಆಗಿವೆ. ಅವರನ್ನು ಅಜ್ಞಾತಸ್ಥಳಕ್ಕೆ ಕರೆದುಕೊಂಡು ಹೋಗಲಾಗಿದೆ ಎನ್ನಲಾಗುತ್ತಿದೆ. ಚುನಾವಣೆ ನಡೆವ ವೇಳೆಗೆ ಅವರು ಸ್ಥಳಕ್ಕೆ ಆಗಮಿಸಲಿದ್ದಾರೆ.

ಚುನಾವಣೆಗೆ ಭಾರಿ ಪೊಲೀಸ್ ಬಂದೋಬಸ್ತ್
ಈಗಾಗಲೇ ಚುನಾವಣೆ ನಡೆಯುವ ಸುತ್ತಾ ಭಾರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. 200 ಕ್ಕೂ ಹೆಚ್ಚು ಮಂದಿ ಪೊಲೀಸರು ಸ್ಥಳದಲ್ಲಿದ್ದಾರೆ. ಚುನಾವಣೆ ನಡೆವ ಸ್ಥಳದಿಂದ 200 ಮೀಟರ್ ವ್ಯಾಸದಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ.

ಪಕ್ಷ ಬಿಡುವ ಬೆದರಿಕೆ
ಸತೀಶ್ ಜಾರಕಿಹೊಳಿ ಅಥವಾ ತಮಗೆ ಅವಮಾನವಾದರೆ ನಾವು ಬೇರೆ ದಾರಿಯನ್ನೇ ಹಿಡಿಯಬೇಕಾಗುತ್ತದೆ ಎಂದು ಸಚಿವ ರಮೇಶ್ ಜಾರಕಿಹೊಳಿ ಅವರು ಪರೋಕ್ಷವಾಗಿ ಪಕ್ಷ ತೊರೆಯುವ ಮಾತನ್ನಾಡಿದ್ದಾರೆ. ಇದು ಕಾಂಗ್ರೆಸ್ನಲ್ಲಿ ಆತಂಕ ಮೂಡಿಸಿದೆ. ಸಂಧಾನ ಮಾಡಿಕೊಳ್ಳುವಂತೆ ಹೇಳಿದ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಮಾತಿಗೂ ಜಾರಕಿಹೊಳಿ ಸಹೋದರರು ಬಗ್ಗಿಲ್ಲ.

ಹೈಕಮಾಂಡ್ ಗೆ ದೂರು ನೀಡಿರುವ ಲಕ್ಷ್ಮಿ
ಲಕ್ಷ್ಮಿ ಹೆಬ್ಬಾಳ್ಕರ್ ಸಹ ತಾವು ಸುಲಭಕ್ಕೆ ಮಣಿಯುವುದಿಲ್ಲ ಎಂದು ಜಾರಕಿಹೊಳಿ ಸಹೋದರರ ಮುಂದೆ ಸೆಟೆದು ನಿಂತಿದ್ದು. ವಿಷಯವನ್ನು ಹೈಕಮಾಂಡ್ ವರೆಗೂ ತೆಗೆದುಕೊಂಡು ಹೋಗಿದ್ದಾರೆ. ಇತ್ತೀಚೆಗೆ ರಾಜ್ಯಕ್ಕೆ ಬಂದಿದ್ದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರಿಗೂ ವಿಷಯ ಮುಟ್ಟಿಸಿದ್ದಾರೆ. ಜೊತೆಗೆ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರನ್ನೂ ತಮ್ಮ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ.












Click it and Unblock the Notifications