ಏನಿದು ಜಾರಕಿಹೊಳಿ ಬ್ರದರ್ಸ್ ವರ್ಸಸ್ ಲಕ್ಷ್ಮೀ ಹೆಬ್ಬಾಳ್ಕರ್ ಕದನ?
Recommended Video
ಬೆಳಗಾವಿ, ಆಗಸ್ಟ್ 28: ಶಾಸಕಿ ಆಗಿದ್ದೀನಿ ಅನ್ನೋ ಕಾರಣಕ್ಕೆ ಮೆರೆಯಬಾರದು. ನಾನು ಕೂಡ ಮೊದಲ ಬಾರಿಗೆ 50 ಸಾವಿರ ಮತಗಳ ಅಂತರದಿಂದ ಗೆದ್ದು, ಮೊನ್ನೆ ನಡೆದ ಚುನಾವಣೆಯಲ್ಲಿ 14 ಸಾವಿರ ಅಂತರಕ್ಕೆ ತಲುಪಿದ್ದೇನೆ. ಆದ್ದರಿಂದ ಮೆರೆಯುವುದು ಒಳ್ಳೆಯದಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಮಂಗಳವಾರ ಇಲ್ಲಿ ಹೇಳಿದರು.
ಕಾಂಗ್ರೆಸ್ ಶಾಸಕರೂ ಆಗಿರುವ ರಮೇಶ್ ಜಾರಕಿಹೊಳಿ, ತಮ್ಮದೇ ಪಕ್ಷದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ರನ್ನು ತರಾಟೆಗೆ ತೆಗೆದುಕೊಂಡ ಪರಿ ಇದು. ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಚುನಾವಣೆ ಮುಂದೂಡಿದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಬೆಳಗಾವಿ ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ನನ್ನ ಹಸ್ತಕ್ಷೇಪವಿಲ್ಲ. ಅಧಿಕಾರಾರೂಢ ಪಕ್ಷದ ಶಾಸಕಿಯಾಗಿ ಧರಣಿ ಮಾಡುವುದು ಸರಿಯಲ್ಲ ಎಂದರು.
ಗಡಿ ಜಿಲ್ಲೆ ಬೆಳಗಾವಿ ಕಾಂಗ್ರೆಸ್ ನಲ್ಲಿ ಮತ್ತೆ ಭುಗಿಲೆದ್ದ ಭಿನ್ನಮತ
ಸತೀಶ ಜಾರಕಿಹೊಳಿ ಅವರು ನನ್ನ ರಾಜಕೀಯ ಗುರುಗಳು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರಲ್ಲಾ ಎಂದು ಸಚಿವರನ್ನು ಮಾಧ್ಯಮಗಳು ಪ್ರಶ್ನೆ ಮಾಡಿದಾಗ, ಏಕವಚನದಲ್ಲಿ ವಾಗ್ದಾಳಿ ನಡೆಸಿದ ರಮೇಶ ಜಾರಕಿಹೊಳಿ, ಅವಳು ಸತೀಶ ಜಾರಕಿಹೊಳಿ ಕಾಲು ಕಸಕ್ಕೂ ಸಮವಲ್ಲ ಎಂದರು.
ಲಕ್ಷ್ಮೀ ಹೆಬ್ಬಾಳ್ಕರ್ ರಿಂದ ಸದಸ್ಯರಿಗೆ ಆಮಿಷ
ಪಿಎಲ್ ಡಿ ಬ್ಯಾಂಕ್ ಚುನಾವಣೆ ವಿಚಾರದ ಬಗ್ಗೆಯೇ ಮಾತನಾಡಿದ್ದ ಶಾಸಕ ಸತೀಶ್ ಜಾರಕಿಹೊಳಿ, ಈ ಚುನಾವಣೆ ನಮಗೆ ಪ್ರತಿಷ್ಠೆಯಾಗಿದೆ. ಈ ಹಿಂದೆ ನಡೆದುಕೊಂಡು ಬಂದ ಪರಂಪರೆಯಂತೆ ಅವಿರೋಧವಾಗಿ ಆಯ್ಕೆಯಾಗುತ್ತಿದೆ. ಈಗ ಹೊಸ ಬೆಳವಣಿಗೆ ನಡೆದಿದೆ. ಇದರಲ್ಲಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಭಾಗವಹಿಸಿದ್ದಾರೆ. ಸದಸ್ಯರಿಗೆ ಆಮಿಷ ಒಡ್ಡಿ, ತಮ್ಮ ಬಣದಲ್ಲಿ 9 ನಿರ್ದೇಶಕರು ಇದ್ದಾರೆ ಎಂಬ ಮಾತು ಹೇಳುತ್ತಿದ್ದಾರೆ. ಇದರಲ್ಲಿ ನಮ್ಮ ಸದಸ್ಯರು ಕಿಡ್ನಾಪ ಆಗಿದ್ದಾರೆ. ಆ ದೂರು ಆಧರಿಸಿ ಚುನಾವಣೆ ಮುಂದೂಡಲಾಗಿದೆ. ಈ ಚುನಾವಣೆಯಲ್ಲಿ ನಾನು ಭಾಗಿಯಾಗಿದ್ದೇನೆ. ಕಳೆದ ಇಪ್ಪತ್ತು ವರ್ಷದ ಪರಂಪರೆಯಂತೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಆಗಬೇಕು. ನನ್ನ ವಿರುದ್ಧ ರಾಜಕೀಯ ಆರೋಪ ಸಹಜ. ಚುನಾವಣೆ ಮುಂದೂಡಲು ಯಾವುದೇ ಒತ್ತಡವಿಲ್ಲ. ನಮ್ಮ ವಿರೋಧಿಗಳು ಇದ್ದರೂ ನಾವು ಚುನಾವಣೆ ಮಾಡುತ್ತಿದ್ದೇವೆ. ಈಗಿರುವ 14 ಸದಸ್ಯರ ನೇತೃತ್ವದಲ್ಲಿ ಚುನಾವಣೆ ಆಗಬೇಕು. ಇದರಲ್ಲಿ ಗ್ರಾಮೀಣ ಶಾಸಕಿ ಬಾಗವಹಿಸಿದ್ದಾರೆ. ಈಗ ಅವರೇ ಹಿಂದೆ ಹೆಜ್ಜೆ ಇರಿಸಬೇಕು ಎಂದು ಸತೀಶ್ ಜಾರಕಿಹೊಳಿ ಅವರು ಹೇಳಿದ್ದರು.
ಚುನಾವಣೆಗಾಗಿ ಹೋರಾಟ ಮಾಡ್ತೀನಿ ಎಂದ ಹೆಬ್ಬಾಳ್ಕರ್
ಈ ಮಧ್ಯೆ ಬೆಳಗಾವಿಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸುದ್ದಿಗೋಷ್ಠಿ ನಡೆಸಿ, ಸತೀಶ ಜಾರಕಿಹೊಳಿ ನನ್ನ ಗುರುಗಳು. ಅವರಿಂದ ನಾನು ರಾಜಕೀಯ ಕಲಿಯುತ್ತಿದ್ದೇನೆ. ನನ್ನ ರಾಜಕೀಯ ಅನುಭವಕ್ಕಿಂತ 30 ವರ್ಷ ಹೆಚ್ಚಿನ ಅನುಭವ ಅವರಿಗಿದೆ. ಪಿಎಲ್ ಡಿ ಬ್ಯಾಂಕ್ ಚುನಾವಣೆಯಲ್ಲಿ ರಾಜಕೀಯ ಅವರು ಆರಂಭಿಸಿದ್ದಾರೆ. ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಹೋರಾಟ ಮಾಡ್ತಿನಿ. ಯಾವುದೇ ಕಾರಣಕ್ಕೆ ನಾನು ಹೋರಾಟದಿಂದ ಹಿಂದೆ ಸರಿಯಲ್ಲ. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಜಿಲ್ಲಾಡಳಿತದ ಜೊತೆ ಸಂಪರ್ಕದಲ್ಲಿ ಇದ್ದೇನೆ. ತಹಶೀಲ್ದಾರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಸತೀಶ ಜಾರಕಿಹೊಳಿ ರೆಸಾರ್ಟ್ ಗೆ ಕರೆದೊಯ್ದಿದ್ದಾರೆ
ಸತೀಶ ಜಾರಕಿಹೊಳಿ ಅವರು ತಾವೇ ಡ್ರೈವ್ ಮಾಡಿಕೊಂಡು ಎಪಿಎಂಸಿ ಚುನಾವಣೆಯಲ್ಲಿ ಎಂಟು ಸದಸ್ಯರನ್ನು ರೆಸಾರ್ಟ್ ಗೆ ಕರೆದೊಯ್ದಿದ್ದಾರೆ. ನಾನೇನೂ ಲಿಂಗಾಯತ ರಾಜಕಾರಣ ಮಾಡುತ್ತಿಲ್ಲ. ಯಾರು ಜಾತಿ ರಾಜಕಾರಣ ಮಾಡುತ್ತಾರೆ? ಸತೀಶ ಜಾರಕಿಹೊಳಿ ನನ್ನ ವಿರುದ್ಧ ಏನೇ ಮಾಡಿದರೂ ಸ್ವಾಗತಿಸುತ್ತೇನೆ. ಅವರು ದೊಡ್ಡವರು. ಏನೇ ಮಾಡಿದರೂ ನಾನು ಸ್ವಾಗತಿಸುತ್ತೇನೆ ಎಂದರು.
ರಾಜಕೀಯವಾಗಿ ಮುಗಿಸುವ ಹುನ್ನಾರ ನಡೆದಿದೆ
ಕ್ಷೇತ್ರದ ಅಭಿವೃದ್ಧಿ, ಆಡಳಿತ ಚುರುಕುಗೊಳಿಸಲು ಎಲ್ಲ ಶಾಸಕರು ಇದನ್ನೇ ಮಾಡುತ್ತಿದ್ದಾರೆ. ಸತೀಶ ಜಾರಕಿಹೊಳಿ ನನ್ನ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು ಎಲ್ಲರಿಗೂ ಗೊತ್ತು. ಕಿಡ್ನಾಪ್ ಪ್ರಕರಣ ಸುಳ್ಳು ಎಂದು ಬಿ ರಿಪೋರ್ಟ್ ಬಂದಿದೆ. ಚುನಾವಣಾ ಅಧಿಕಾರಿಗಳು ಚುನಾವಣೆಯಿಂದ ಹಿಂದೆ ಸರಿದಿದ್ದಾರೆ. ನಾನು ಯಾವುದೇ ನಿರ್ದೇಶಕರಿಗೆ ಆಮಿಷವೊಡ್ಡಿಲ್ಲ. ನನ್ನನ್ನು ರಾಜಕೀಯವಾಗಿ ಮುಗಿಸಲು ಪ್ರಯತ್ನ ನಡೆಯುತ್ತಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದರು.