ಸುವರ್ಣ ಸೌಧದಲ್ಲಿ ಕುಮಾರಸ್ವಾಮಿ ಫೋಟೋ ಹಾಕಿ
ಬೆಳಗಾವಿ, ನ. 29 : ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಐದನೇ ದಿನದ ಕಲಾಪ ನಿಗದಿತ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿಯೇ 10 ಗಂಟೆಗೆ ಆರಂಭವಾಗಿದೆ. ಸದನದಲ್ಲಿ ಕೋಪ, ತಾಪಕ್ಕೆ ಅವಕಾಶವಿಲ್ಲದಂತೆ ಶಾಂತ ರೀತಿಯಿಂದ ಕಲಾಪ ನಡೆಯಿತು. ವಿಧಾನಸಭೆ ಕಲಾಪವನ್ನು ಮಧ್ಯಾಹ್ನ 2.30ಕ್ಕೆ ಮುಗಿಸಲಾಗಿದ್ದು, ಸೋಮವಾರಕ್ಕೆ ಮುಂದೂಡಲಾಗಿದೆ.
ವಾರದ ಕೊನೆಯ ದಿನವಾದ್ದರಿಂದ ಶಾಸಕರು ತಮ್ಮ-ತಮ್ಮ ಕ್ಷೇತ್ರಗಳಿಗೆ ತೆರಳುವ ಧಾವಂತದಲ್ಲಿದ್ದಾರೆ. ಆದ್ದರಿಂದ ಆಡಳಿತ ಮತ್ತು ಪ್ರತಿಪಕ್ಷಗಳ ಕೆಲವು ಶಾಸಕರು ಶುಕ್ರವಾರದ ಕಲಾಪಗಳಿಗೆ ಗೈರು ಹಾಜರಾಗಿದ್ದು, ಐದನೇ ದಿನದ ಕಲಾಪದಲ್ಲಿ ಹಾಜರಾತಿ ಕಡಿಮೆ ಇದೆ. ಪ್ರೇಕ್ಷಕರ ಗ್ಯಾಲರಿಯಲ್ಲಿ ಸಹ ಜನರ ಕೊರತೆ ಕಂಡುಬರುತ್ತಿದೆ. (ನಾಲ್ಕನೇ ದಿನದ ಕಲಾಪದಲ್ಲಿ ನಡೆದದ್ದೇನು)

ಸುವರ್ಣ ವಿಧಾನಸೌಧದಲ್ಲಿ ಎಚ್ಡಿಕೆ ಫೋಟೋ ಹಾಕಿ : ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣವಾಗಲು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಹಿತಾಸಕ್ತಿಯೇ ಕಾರಣ. ಆದ್ದರಿಂದ ಅವರ ಫೋಟೋವನ್ನು ಸುವರ್ಣವ ವಿಧಾನಸೌಧದಲ್ಲಿ ಹಾಕಬೇಕೆಂದು ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಒತ್ತಾಯಿಸಿದ್ದಾರೆ. ಶೂನ್ಯವೇಳೆಯಲ್ಲಿ ಮಾತನಾಡಿದ ಅವರು. ಬೆಂಗಳೂರಿನಲ್ಲಿ ವಿಧಾನಸೌಧ ನಿರ್ಮಿಸಿದ ಕೆಂಗಲ್ ಹನುಮಂತಯ್ಯ ಅದರಲ್ಲಿ ಕೆಲಸ ಮಾಡಲಿಲ್ಲ. ಆದರೆ, ಸುವರ್ಣ ಸೌಧಕ್ಕೆ ಅನುದಾನ ನೀಡಿದ ಯಡಿಯೂರಪ್ಪ ಇಲ್ಲಿ ಆಹೋರಾತ್ರಿ ಧರಣಿ ನಡೆಸಿದರು ಎಂದು ಯಡಿಯೂರಪ್ಪ ಅವರನ್ನು ಕಿಚಾಯಿಸಿದರು.
ಶಾಸಕರ ಕೈಗೆ ಐಪಾಡ್ : ಶಾಸಕರ ಕೈಗೆ ಶೀಘ್ರವೇ ಐಪಾಡ್ ನೀಡಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ. ಹಲವು ಶಾಸಕರು ನಮಗೆ ಐಪಾಡ್ ನೀಡಿಲ್ಲ ಎಂದು ಕೇಳುತ್ತಿದ್ದಾರೆ. ಶೀಘ್ರವೇ ಎಲ್ಲಾ ಶಾಸಕರ ಕೈಗೆ ಐಪಾಡ್ ನೀಡಲಾಗುವುದು ಎಂದು ತಿಳಿಸಿದರು.
ತಾಲೂಕುಗಳನ್ನು ಗುರುತಿಸಲು ಉಪ ಸಮಿತಿ : ರಾಜ್ಯದಲ್ಲಿ ಈಗಾಗಲೇ 66 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ. ಇನ್ನೂ ಹೆಚ್ಚಿನ ತಾಲೂಕುಗಳನ್ನು ಗುರುತಿಸುವಂತೆ ಒತ್ತಾಯ ಕೇಳಿಬರುತ್ತಿದೆ. ಆದ್ದರಿಂದ ಬರಪೀಡಿತ ತಾಲೂಕುಗಳನ್ನು ಗುರುತಿಸಲು ಸಂಪುಟ ಉಪ ಸಮಿತಿ ರಚಿಸಲಾಗುವುದು ಎಂದು ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ್ ವಿಧಾನಸಭೆಗೆ ತಿಳಿಸಿದರು. ಶೇ 20ರಷ್ಟು ಕಡಿಮೆ ಮಳೆಯಾಗಿದ್ದರೆ, ನಾಲ್ಕು ವಾರಗಳ ಕಾಲ ಶುಷ್ಕವಾತಾವರಣವಿದ್ದರೆ, ಶೇ 50ಕ್ಕಿಂತ ಕಡಿಮೆ ತೇವಾಂಶವಿರುವ ತಾಲೂಕುಗಳನ್ನು ಬರಪೀಡಿತ ತಾಲೂಕು ಎಂದು ಘೋಷಿಸಲಾಗುತ್ತದೆ ಎಂದು ಸಚಿವರು ಹೇಳಿದರು.
ಸದನಕ್ಕೆ ದತ್ತರ ಕಾಟ ಹೆಚ್ಚಾಗಿದೆ : ಐದನೇ ದಿನದ ಕಲಾಪ ಆರಂಭವಾಗುತ್ತಿದ್ದಂತೆ ಜೆಡಿಸ್ ನಾಯಕ ವೈ.ಎಸ್.ವಿ.ದತ್ತಾ ಹಾಗೂ ಎಚ್.ಡಿ.ರೇವಣ್ಣ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಕುರಿತು ನಿಲುವಳಿ ಸೂಚನೆ ಮಂಡಿಸಲು ಮುಂದಾದರು. ಈ ಸಂದರ್ಭದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಸದನಕ್ಕೆ ದತ್ತ ಅವರ ಕಾಟ ಹೆಚ್ಚಾಗಿದೆ ಎಂದು ಅವರನ್ನು ಕಿಚಾಯಿಸಿದರು.
ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಪ್ರಕರಣ : ವಿಧಾನಸಭೆ ಕಲಾಪದಲ್ಲಿ ಸಾರ್ವಜನಿಕರ ಲೆಕ್ಕಪತ್ರ ಸಮಿತಿಯ ಮೊದಲ ವರದಿಯನ್ನು ಶುಕ್ರವಾರ ಮಂಡಿಸಲಾಗಿದೆ. ಲೋಕೋಪಯೋಗಿ ಇಲಾಖೆ ಕಾಮಗಾರಿಗಳ ನಿರ್ವಹಣೆ ಮತ್ತು ಪರಿಶೀಲನೆಯನ್ನು ಸರಿಯಾಗಿ ಮಾಡದ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಸಮಿತಿ ಅಧ್ಯಕ್ಷ ಎಚ್.ಡಿ.ರೇವಣ್ಣ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.
ತೋಟಗಾರಿಕೆ, ಜಲಾನಯನ ಕೃಷಿ ಇಲಾಖೆಗೆ : ತೋಟಗಾರಿಕೆ ಮತ್ತ ಜಲಾನಯನ ಇಲಾಖೆಗಳನ್ನು ಕೃಷಿ ಇಲಾಖೆಯೊಂದಿಗೆ ವಿಲೀನಗೊಳಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಸದನಕ್ಕೆ ಮಾಹಿತಿ ನೀಡಿದ್ದಾರೆ. ಶಾಸಕ ಸಿ.ಟಿ.ರವಿ, ಅಪ್ಪಚ್ಚುರಂಜನ್ ಮುಂತಾದವರು ಮೂರು ಇಲಾಖೆಗಳು ಮಾಡುವುದು ಒಂದೇ ಕೆಲಸ ಅವುಗಳನ್ನು ವಿಲೀನ ಮಾಡಬಹುದು ಎಂದು ಸಲಹೆ ನೀಡಿದರು.












Click it and Unblock the Notifications