ಬೆಳಗಾವಿ: ಯುವಕರ ಸಮಯಪ್ರಜ್ಞೆಯಿಂದ ತಪ್ಪಿದ ರೈಲು ಅಪಘಾತ
ಬೆಳಗಾವಿ, ಜನವರಿ 12: ಯುವಕರಿಬ್ಬರ ಸಮಯಪ್ರಜ್ಞೆ ಮತ್ತು ಧೈರ್ಯ-ಸಾಹಸಗಳಿಂದಾಗಿ ಸಂಭವಿಸಬಹುದಾಗಿದ್ದ ರೈಲು ಅಪಘಾತವೊಂದು ತಪ್ಪಿದೆ.
ಬೆಳಗಾವಿಯ ಖಾನಾಪುರದಲ್ಲಿ ರಿಯಾಜ್ ಮತ್ತು ತೌಫೀಕ್ ಎಂಬ ಇಬ್ಬರು ಯುವಕರು ಬೈಕ್ನಲ್ಲಿ ಹೋಗುತ್ತಿದ್ದಾಗ ಖಾನಾಪುರದ ಗಾಂಧಿನಗರ ಬಳಿಯ ರೈಲ್ವೆ ಹಳಿಯ ಮೇಲೆ ಬೃಹತ್ ಮರ ಬಿದ್ದಿದ್ದು ಕಂಡಿದ್ದಾರೆ.

ಅದೇ ಸಮಯದಲ್ಲಿ ರೈಲು ವೇಗವಾಗಿ ಅತ್ತಕಡೆಗೇ ಬರುವುತ್ತಿರುವುದನ್ನು ಗಮನಿಸಿದ್ದಾರೆ. ಕೂಡಲೇ ಇಬ್ಬರು ಯುವಕರು ತಮ್ಮ ಅಂಗಿಗಳನ್ನು ಬಿಚ್ಚಿ ಹಳಿಯ ಮೇಲೆ ರೈಲಿಗೆ ಎದುರಾಗಿ ಅಂಗಿಗಳನ್ನು ಗಾಳಿಯಲ್ಲಿ ತೂರುತ್ತಾ ಓಡಿದಿದ್ದಾರೆ. ಯುವಕರ ಸೂಚನೆಯನ್ನು ಗಮನಿಸಿ ರೈಲು ಓಡಿಸುವಾತ ಬ್ರೇಕ್ ಹಾಕಿ ರೈಲು ನಿಲ್ಲಿಸಿದ್ದಾರೆ.
ರೈಲ್ವೆ ಸುರಂಗ ಪ್ರಾರಂಭವಾಗುವ ಸ್ಥಳದಲ್ಲಿಯೇ ಹಳಿಯ ಮೇಲೆ ಬೃಹತ್ ಮರ ಬಿದ್ದಿದ್ದೆ. ಅಕಸ್ಮಾತ್ ರೈಲು ಮರಕ್ಕೆ ಡಿಕ್ಕಿ ಹೊಡೆದಿದ್ದರೆ ಸುರಂಗದ ಗೋಡೆಗೆ ಡಿಕ್ಕಿ ಆಗಿ ಭಾರಿ ಅನಾಹುತವೇ ಸಂಭವಿಸುವ ಸಾಧ್ಯತೆ ಇತ್ತು. ಆದರೆ ಯುವಕರಿಬ್ಬರ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ.
ಯುವಕರಿಬ್ಬರ ಧೈರ್ಯಕ್ಕೆ ನೈರುಯತ್ಯ ರೈಲ್ವೆ ಇಲಾಖೆ ಶಹಭಾಸ್ ಹೇಳಿದ್ದು, ಶೌರ್ಯ ಪ್ರಶಸ್ತಿಗೆ ಶಿಫಾರಸ್ಸು ಮಾಡುವುದಾಗಿಯೂ ಹೇಳಿದೆ.












Click it and Unblock the Notifications