Vande Bharat; ಬೆಂಗಳೂರು-ಬೆಳಗಾವಿ ಪ್ರಾಯೋಗಿಕ ಸಂಚಾರ, ದಿನ ನಿಗದಿ
ಬೆಳಗಾವಿ, ನವೆಂಬರ್ 19: ಪ್ರಯಾಣಿಕರ ಬೇಡಿಕೆಯಂತೆ ಭಾರತೀಯ ರೈಲ್ವೆ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಬೆಳಗಾವಿಗೆ ರೈಲು ಸಂಚಾರ ಆರಂಭಕ್ಕೆ ದಿನಾಂಕ ಇನ್ನೂ ನಿಗದಿಯಾಗಿಲ್ಲ.
ಭಾರತೀಯ ರೈಲ್ವೆ ವಂದೇ ಭಾರತ್ ರೈಲು ಸಂಚಾರ ಆರಂಭಕ್ಕೂ ಮುನ್ನ ಪ್ರಾಯೋಗಿಕ ಸಂಚಾರ ನಡೆಸಲಿದೆ. ರೈಲ್ವೆ ಅಧಿಕಾರಿಗಳ ಮಾಹಿತಿ ಪ್ರಕಾರ ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲು ನವೆಂಬರ್ ಅಂತ್ಯಕ್ಕೆ ಸಂಚಾರ ಆರಂಭಿಸುವ ನಿರೀಕ್ಷೆ ಇದೆ.

ಕೆಎಸ್ಆರ್ ಬೆಂಗಳೂರು-ಬೆಳಗಾವಿ ಮಾರ್ಗದಲ್ಲಿ ವಂದೇ ಭಾರತ್ ರೈಲು ಸಂಚಾರಕ್ಕೆ ಮುನ್ನ ಪ್ರಾಯೋಗಿಕ ಸಂಚಾರ ನಡೆಸಲು ಭಾರತೀಯ ರೈಲ್ವೆ ತೀರ್ಮಾನಿಸಿದೆ. ನವೆಂಬರ್ 21ರ ಮಂಗಳವಾರ ಈ ಪ್ರಾಯೋಗಿಕ ಸಂಚಾರ ನಡೆಯಲಿದೆ.
ಅಧಿಕಾರಿಗಳಿಂದ ಸಂಚಾರ; ಕೆಎಸ್ಆರ್ ಬೆಂಗಳೂರು (ಮೆಜೆಸ್ಟಿಕ್) ನಿಲ್ದಾಣದಿಂದ ಹೊರಡುವ ವಂದೇ ಭಾರತ್ ಪ್ರಾಯೋಗಿಕ ರೈಲು ಬೆಳಗಾವಿ ತನಕ ಸಂಚಾರ ನಡೆಸಲಿದೆ. ಈ ರೈಲಿನಲ್ಲಿ ನೈಋತ್ಯ ರೈಲ್ವೆಯ ಹಿರಿಯ ಅಧಿಕಾರಿಗಳು, ನಿರ್ವಹಣೆ, ಮೆಕಾನಿಕಲ್, ಸಿವಿಲ್, ಎಲೆಕ್ಟ್ರಿಕಲ್ ವಿಭಾಗದ ಹಿರಿಯ ಅಧಿಕಾರಿಗಳು ಸಂಚಾರ ನಡೆಸಲಿದ್ದಾರೆ.
ಬೆಂಗಳೂರು-ಬೆಳಗಾವಿ ನಡುವಿನ ಮಾರ್ಗ 611 ಕಿ. ಮೀ. ಆಗಿದೆ. ಈ ಮಾರ್ಗ ಸಂಪೂರ್ಣ ವಿದ್ಯುದೀಕರಣಗೊಂಡಿದೆ. ವಂದೇ ಭಾರತ್ ರೈಲನ್ನು ಎಷ್ಟು ಕಿ. ಮೀ. ವೇಗದಲ್ಲಿ ಓಡಿಸಬಹುದು? ಎಂದು ಪ್ರಾಯೋಗಿಕ ಸಂಚಾರದ ಅವಧಿಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ.
ಮಾರ್ಗದ ಹಳಿಗಳಲ್ಲಿ ಸಿವಿಲ್, ಮೆಕಾನಿಕಲ್ ವಿಭಾಗದ ಬದಲಾವಣೆಗಳು ಅಗತ್ಯವಿದ್ದರೆ ಅದನ್ನು ಸಹ ಗುರುತು ಮಾಡಿಕೊಂಡು ಬದಲಾವಣೆ ಮಾಡಲಾಗುತ್ತದೆ. ಬಳಿಕ ವಿಸ್ತರಿತ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಾಗುತ್ತದೆ.
ರೈಲಿನ ವೇಳಾಪಟ್ಟಿ; ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವೆ ಈಗಾಗಲೇ ವಂದೇ ಭಾರತ್ ರೈಲು ಸಂಚಾರ ನಡೆಸುತ್ತಿದೆ. ಇದೇ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಲಾಗಿದೆ. ಭಾರತೀಯ ರೈಲ್ವೆ ವಿಸ್ತರಿತ ರೈಲಿನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ರೈಲು ಸಂಖ್ಯೆ 20661 ಮುಂಜಾನೆ 05.45ಕ್ಕೆ ಕೆಎಸ್ಆರ್ ಬೆಂಗಳೂರು ನಿಲ್ದಾಣದಿಂದ ಹೊರಟು ಮಧ್ಯಾಹ್ನ 01.30ಕ್ಕೆ ಬೆಳಗಾವಿ ತಲುಪಲಿದೆ. ರೈಲು ಸಂಖ್ಯೆ 20662 ಮಧ್ಯಾಹ್ನ 2ಕ್ಕೆ ಬೆಳಗಾವಿಯಿಂದ ಹೊರಟು ರಾತ್ರಿ 10.10ಕ್ಕೆ ಬೆಂಗಳೂರು ನಗರ ನಿಲ್ದಾಣ ತಲುಪಲಿದೆ.
ಬೆಂಗಳೂರು-ಧಾರವಾಡ ರೈಲು ಬೆಳಗಾವಿ ತನಕ ವಿಸ್ತರಣೆ ಮಾಡಿರುವುದರಿಂದ ರೈಲು ಪ್ರಯಾಣಿಕರು ಸುಮಾರು 2 ಗಂಟೆ ಹೆಚ್ಚುವರಿ ಸಂಚಾರ ನಡೆಸಬೇಕಿದೆ. ಈಗ ಬೆಳಗಾವಿ ಕಡೆ ಸಾಗುವ ಪ್ರಯಾಣಿಕರು ಹುಬ್ಬಳ್ಳಿ, ಧಾರವಾಡದಲ್ಲಿ ವಂದೇ ಭಾರತ್ ರೈಲುಇಳಿದು ಅಲ್ಲಿಂದ ಬಸ್ ಮಾರ್ಗವಾಗಿ ಸುಮಾರು 1 ಗಂಟೆಯಲ್ಲಿ ಬೆಳಗಾವಿಗೆ ತಲುಪುತ್ತಿದ್ದರು.
ಧಾರವಾಡ-ಬೆಳಗಾವಿ ನಡುವೆ ನೇರ ರೈಲು ಮಾರ್ಗ ಇಲ್ಲ. ಇದೇ ಕಾರಣಕ್ಕೆ ಭಾರತೀಯ ರೈಲ್ವೆ ಬೆಳಗಾವಿಗೆ ವಂದೇ ಭಾರತ್ ರೈಲು ಆರಂಭಿಸಿರಲಿಲ್ಲ. ಆದರೆ ಪ್ರಯಾಣಿಕರ ಬೇಡಿಕೆ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ರೈಲ್ವೆ ಸಚಿವರಿಗೆ ಪತ್ರವನ್ನು ಬರೆದ ಬಳಿಕ ಬೆಂಗಳೂರು-ಧಾರವಾಡ ರೈಲನ್ನು ಬೆಳಗಾವಿ ತನಕ ಮಾಡಿ ಆದೇಶ ಹೊರಡಿಸಲಾಗಿದೆ.
ಬೆಳಗಾವಿಗೆ ವಂದೇ ಭಾರತ್ ರೈಲು ವಿಸ್ತರಣೆ ಮಾಡಬೇಕು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿವಿ ವೈಷ್ಣವ್ಗೆ ಪತ್ರ ಬರೆದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ವಂದೇ ಭಾರತ್ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಿದರೆ ಬೆಳಗಾವಿ ಜಿಲ್ಲೆಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ವಿವರಣೆ ನೀಡಿದ್ದರು.
ವಂದೇ ಭಾರತ್ ರೈಲು ಬೆಳಗಾವಿ ಜಿಲ್ಲೆಯ ತನಕ ವಿಸ್ತರಣೆಯಾದರೆ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಗೂ ಉತ್ತಮ ಸಂಪರ್ಕ ಕಲ್ಪಿಸಲು ಅನುಕೂಲವಾಗಲಿದೆ. ಆದ್ದರಿಂದ ರೈಲ್ವೆ ಸಚಿವಾಲಯ ಈ ಕುರಿತು ಗಮನ ಹರಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದರು.












Click it and Unblock the Notifications