ರಮೇಶ್ ಜಾರಕಿಹೊಳಿ ರಾಜೀನಾಮೆ ಹಿಂಪಡೆಯುವಂತೆ ಆಗ್ರಹಿಸಿ ಅಭಿಮಾನಿಗಳ ಪ್ರತಿಭಟನೆ
ಬೆಳಗಾವಿ, ಮಾರ್ಚ್ 3: ರಾಸಲೀಲೆ ಸಿಡಿ ಬಹಿರಂಗದಿಂದ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ರಮೇಶ್ ಜಾರಕಿಹೊಳಿ ಅಭಿಮಾನಿಗಳು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದರು.
ರಮೇಶ್ ಜಾರಕಿಹೊಳಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆಗೆ ನೊಂದು ಅಭಿಮಾನಿಗಳು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿ ನಡೆದಿದೆ.
ಜಾರಕಿಹೊಳಿ ರಾಜೀನಾಮೆ: ಸಿಎಂಗೆ ಅಭಿನಂದನೆ ಸಲ್ಲಿಸಿದ ದೂರುದಾರ
ಈ ವೇಳೆ ಅಭಿಮಾನಿಗಳು ಮೈಮೇಲೆ ಡೀಸೆಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಮುಂದಾದರು. ರಮೇಶ್ ಜಾರಕಿಹೊಳಿ ಆಪ್ತರು ಒತ್ತಾಯಪೂರ್ವಕವಾಗಿ ಗೋಕಾಕ್ ಬಂದ್ ಮಾಡಲು ಮುಂದಾಗಿದ್ದರು.
ಅಂಗಡಿ, ಮುಗ್ಗಟ್ಟು ಮುಚ್ಚಿಸಿ ಬಂದ್ಗೆ ಬೆಂಬಲಿಸುವಂತೆ ಜಾರಕಿಹೊಳಿ ಅಭಿಮಾನಿಗಳು ಪಟ್ಟು ಹಿಡಿದಿದ್ದು, ಒತ್ತಾಯಪೂರ್ವಕ ಬಂದ್ಗೆ ಪ್ರಚೋದಿಸಿದ ಅಭಿಮಾನಿಗಳನ್ನು ಪೊಲೀಸರ ವಶಕ್ಕೆ ಪಡೆದರು.
ಪ್ರತಿಭಟನಾನಿರತರನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ಯುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಎಎಸ್ಪಿ ಅಮರನಾಥ ರೆಡ್ಡಿ ನೇತೃತ್ವದಲ್ಲಿ ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
"ಸಿಡಿ ಬಿಡುಗಡೆ ಮಾಡಿದವರ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹಾಕಲು ಚಿಂತನೆ ಮಾಡಿದ್ದೇವೆ. ವಕೀಲರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ'' ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
"ಈ ವಿಡಿಯೋ ರಷ್ಯಾ, ಸಿಂಗಾಪುರ್ ನಲ್ಲಿ ಅಪಲೋಡ್ ಅಗಿದೆ, ಇದರ ಹಿಂದೆ ರಾಜಕೀಯ ಪ್ರಭಾವಿಗಳಿದ್ದಾರೆ. ತನಿಖೆಯಾದರೆ ಓರಿಜನಲ್ ಅಥವಾ ಫೇಕ್ ಅನ್ನುವುದು ಗೊತ್ತಾಗಲಿದೆ. ನನಗೆ ಇರುವ ಮಾಹಿತಿ ಪ್ರಕಾರ ಇದು ಫೇಕ್ ವಿಡಿಯೋ'' ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.