ತೀವ್ರ ಕುತೂಹಲ: ಶಾಸಕ ಯತ್ನಾಳ್ ಪರ ಪ್ರಭಾವಿ ಸಚಿವರ ಬ್ಯಾಟಿಂಗ್
ಬೆಳಗಾವಿ, ಫೆಬ್ರವರಿ 13: ಸಿಎಂ ಯಡಿಯೂರಪ್ಪ ಹಾಗೂ ಅವರ ನಾಯಕತ್ವದ ವಿರುದ್ಧ ಪದೇ ಪದೇ ಧ್ವನಿ ಎತ್ತುತ್ತಿರುವ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ಬಿಜೆಪಿ ಹೈಕಮಾಂಡ್ ನೋಟಿಸ್ ನೀಡಿದೆ.
ಈ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪರವಾಗಿ ಬೆಳಗಾವಿಯ ಪ್ರಭಾವಿ ಸಚಿವರಾದ ರಮೇಶ್ ಜಾರಕಿಹೊಳಿ ಹಾಗೂ ಉಮೇಶ್ ಕತ್ತಿ ಬ್ಯಾಟಿಂಗ್ ಮಾಡಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಬೆಳಗಾವಿಯಲ್ಲಿ ಶನಿವಾರ ಉಭಯ ಸಚಿವರು ಮಾತನಾಡಿ, ಬಸನಗೌಡ ಪಾಟೀಲ್ ಯತ್ನಾಳ್ ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿಲ್ಲ. ಯತ್ನಾಳ್ ನನ್ನ ಸ್ನೇಹಿತ, ತಿಳಿಸಿ ಹೇಳುತ್ತೇವೆ. ಸಮಾಜದ ಬಗ್ಗೆ ಮಾತನಾಡೋದು ತಪ್ಪಲ್ಲ, ಇತಿಮಿತಿಯಲ್ಲಿ ಮಾತನಾಡಿ ಅಂತಾ ಮನವಿ ಮಾಡುತ್ತೇವೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.

ಬಸನಗೌಡ ಪಾಟೀಲ್ ಯತ್ನಾಳ್ ಅವನು ಸೀನಿಯರ್ ಇದ್ದಾರೆ, ಪ್ರಮುಖ ಸಮಾಜದ ಶಾಸಕರಾಗಿದ್ದಾರೆ. ಯತ್ನಾಳ್ ಒಳ್ಳೆಯ ಮಿತ್ರ, ಮುಂದೆ ಒಳ್ಳೆಯ ಭವಿಷ್ಯ ಇದೆ. ಸಮಾಜಕ್ಕಾಗಿ ಹೋರಾಟ ಮಾಡಲಿ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿರುವುದು ಬಿಜೆಪಿಯಲ್ಲಿ ಅಚ್ಚರಿಗೆ ಕಾರಣವಾಗಿದೆ.
ಇನ್ನು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಉಮೇಶ ಕತ್ತಿ ಕೂಡಾ ವಿಜಯಪುರ ಶಾಸಕ ಯತ್ನಾಳ್ ಪರವಾಗಿ ಮಾತನಾಡಿದರು. ರಮೇಶ್ ಜಾರಕಿಹೊಳಿ, ಯತ್ನಾಳ್ ನಾವೆಲ್ಲಾ ಸ್ನೇಹಿತರು.

ಪಕ್ಷ ನೀಡಿರುವ ಶೋಕಾಸ್ ನೋಟಿಸ್ ಗೆ ಲವ್ ಲೆಟರ್ ಎಂದ ಸಚಿವ ಉಮೇಶ್ ಕತ್ತಿ, ನೋಟೀಸ್ ಬರುತ್ತವೆ. ಲವ್ ಲೆಟರ್ ಬೇಡ ಅಂದ್ರೂ ಬರ್ತಿರುತ್ತವೆ ಎಂದರು. ಬಸನಗೌಡ ಪಾಟೀಲ್ ಯತ್ನಾಳ್ ಪಕ್ಷ ವಿರೋಧಿ ಮಾಡುತ್ತಿಲ್ಲ ಎಂದು ಸಮರ್ಥಿಸಿಕೊಂಡರು.
ಮಂತ್ರಿಯಾಗಿದ್ದರೂ ಉತ್ತರ ಕರ್ನಾಟಕಕ್ಕೆ ಅನ್ಯಾಯ ಆದಾಗ ಪ್ರತಿಭಟನೆ ಮಾಡುತ್ತೇನೆ. ಅನ್ಯಾಯವಾದಾಗ ನಾನು ಪ್ರತಿಭಟನೆ ಮಾಡುವುದನ್ನು ಬಿಡಲ್ಲ. ಊಟ ಮಾಡಲು ಎನೂ ಬೇಕು ಅದನ್ನ ನಮ್ಮ ಸರ್ಕಾರ ಮಾಡಿದೆ. ಅಕ್ಕಿ ಕಡಿತ ಮಾಡಿಲ್ಲ, ಅಕ್ಕಿ ಜೊತೆಗೆ ಜೋಳ, ರಾಗಿ ಕೊಡುತ್ತಿದ್ದೇವೆ.ಜನರು ಪ್ರತಿಭಟನೆ ಮಾಡಿದರೆ, ಬೇಡ ಅಂದ್ರೆ ಮತ್ತೆ ಅಕ್ಕಿ ಕೊಡುತ್ತೇವೆ ಎಂದು ಉಮೇಶ್ ಕತ್ತಿ ಹೇಳಿದರು.












Click it and Unblock the Notifications