ರಾಜ್ಯೋತ್ಸವದ ಹೊತ್ತಲ್ಲೇ ಬಾಲ ಬಿಚ್ಚಿದ ಎಂಇಎಸ್ಗೆ ತಕ್ಕ ಉತ್ತರ ಕೊಟ್ಟ ಬೆಳಗಾವಿ ಜಿಲ್ಲಾಡಳಿತ
ಬೆಳಗಾವಿ, ಅಕ್ಟೋಬರ್ 30: ಕರ್ನಾಟಕ ರಾಜ್ಯೋತ್ಸವ ಸಮೀಪಿಸುತ್ತಿದ್ದಂತೆ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮತ್ತೆ ಬಾಲಬಿಚ್ಚಲಾರಂಭಿಸಿದೆ. ಅತ್ತ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಕರಾಳ ದಿನಾಚರಣೆಗೆ ನಮ್ಮ ಪ್ರತಿನಿಧಿ ಬರುತ್ತಾರೆ ಎಂದು ಹೇಳುವ ಮೂಲಕ ಉರಿಯೋ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಹೀಗಾಗಿ ಬೆಳಗಾವಿ ಜಿಲ್ಲಾಡಳಿತ ಕರಾಳ ದಿನಾಚರಣೆಗೆ ಅನುಮತಿ ನಿರಾಕರಿಸಿದೆ.
ನಾಡದ್ರೋಹಿ ಎಂಇಎಸ್ ಪದೇ ಪದೇ ಮುಖಭಂಗ ಅನುಭವಿಸಿದರೂ ಮತ್ತದೆ ತನ್ನ ಹಳೆ ಚಾಳಿಯನ್ನು ಮುಂದುವರೆಸಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕರ್ನಾಟಕ ರಾಜ್ಯೋತ್ಸವಕ್ಕೆ ಪರ್ಯಾಯವಾಗಿ ಕರಾಳ ದಿನಾಚರಣೆಗೆ ಮುಂದಾಗಿದೆ. ಕರಾಳ ದಿನಾಚಣೆಗೆ ಅನುಮತಿ ಕೇಳಿದ್ದ ನಾಡದ್ರೋಹಿಗಳಿಗೆ ಮುಖಭಂಗವಾಗಿದೆ.

ಬೆಳಗಾವಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕರಾಳ ದಿನಾಚಣೆಗೆ ಅನುಮತಿ ನಿರಾಕರಿಸಿದ್ದು, ನಾಡದ್ರೋಹಿಗಳ ನಿದ್ದೆಗೆಡಿಸಿದೆ. ಆದರೂ ಶತಾಯ ಗತಾಯ ರಾಜ್ಯೋತ್ಸವ ದಿನದಂದು ಕರಾಳ ದಿನಾಚರಣೆ ಮಾಡಲು ನಾಡದ್ರೋಹಿಗಳು ತೆರೆ ಮರೆಯಲ್ಲಿ ಕಸರತ್ತು ನಡೆಸಿದ್ದು, ಈ ಹಿನ್ನೆಲೆ ಸಭೆ ಕರೆದು ಕರಾಳ ದಿನಾಚರಣೆ ಕುರಿತು ಚರ್ಚೆ ನಡೆಸಿದ ಎಂಇಎಸ್ ಮುಖಂಡರು, ಸಭೆಯಲ್ಲಿ ಮಹಾರಾಷ್ಟ್ರದ ನಾಯಕರನ್ನು ಕರೆತರಲು ಮುಂದಾಗಿದ್ದಾರೆ ಎನ್ನಲಾಗಿದೆ.
ಇನ್ನು ಕರ್ನಾಟಕ ರಾಜ್ಯೋತ್ಸವ ಹೊಸ್ತಿಲ್ಲಲ್ಲಿ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಗಡಿ ಖ್ಯಾತೆ ತೆಗೆದಿದ್ದಾರೆ. ಗಡಿ ವಿವಾದ ಕೆದಕಿದ ಮಹಾ ಸಿಎಂ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಇದರಿಂದ ಬೆಳಗಾವಿಯ ಎಂಇಎಸ್ ಪುಂಡರಿಗೆ ಆನೆ ಬಲ ಬಂದಂತಾಗಿದೆ. ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಮಹಾರಾಷ್ಟ್ರ ಸರ್ಕಾರದ ಬೆಂಬಲವಿದೆ. ನವೆಂಬರ್ 1 ರಂದು ಎಂಇಎಸ್ನಿಂದ ಬೆಳಗಾವಿಯಲ್ಲಿ ಕರಾಳ ದಿನಾಚರಣೆ ಮಾಡಲಾಗ್ತಿದೆ. ಕರಾಳ ದಿನಾಚರಣೆಗೆ ಮಹಾರಾಷ್ಟ್ರ ಪ್ರತಿನಿಧಿ ಕಳುಹಿಸುವೆ ಎಂದು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಸಿಎಂ ಏಕನಾಥ ಸಿಂಧೆ ಹೇಳಿಕೆ ನೀಡಿದ್ದಾರೆ.
ಆದರೆ ಕರಾಳ ದಿನಾಚರಣೆಗೆ ಅನುಮತಿ ನಿರಾಕರಿಸಿರುವ ಬೆಳಗಾವಿ ಡಿಸಿ ನಿತೇಶ್ ಪಾಟೀಲ್, ಮಹಾರಾಷ್ಟ್ರ ನಾಯಕರಿಗೆ ಬೆಳಗಾವಿ ಜಿಲ್ಲೆ ಪ್ರವೇಶ ನಿರ್ಬಂಧ ವಿಧಿಸುವ ಎಚ್ಚರಿಕೆ ನೀಡಿದ್ದು, ಮಹಾ ನಾಯಕರಿಗೆ ನುಂಗಲಾರದ ತುತ್ತಾಗಿದೆ. ಇನ್ನು ಬೆಳಗಾವಿಯ ಎಂಇಎಸ್ ಪುಂಡರ ಜೊತೆಗೂಡಿ ಗಡಿ ಕ್ಯಾತೆ ತೆಗೆದಿರುವ ಏಕನಾಥ್ ಶಿಂಧೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.












Click it and Unblock the Notifications