ಕರ್ನಾಟಕ ಬಂದ್: ಬೆಳಗಾವಿಯಲ್ಲಿ ಗೃಹ ಸಚಿವ ಬೊಮ್ಮಾಯಿ ಮಹತ್ವದ ಹೇಳಿಕೆ!
ಬೆಂಗಳೂರು, ಡಿ. 05: ಮರಾಠ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ ಕನ್ನಡ ಒಕ್ಕೂಟ ಕರೆ ನೀಡಿದ್ದ ಕರ್ನಾಟಕ ಬಂದ್ಗೆ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ್ ಕುರಿತು ಬೆಳಗಾವಿಯಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಮಹತ್ವದ ಹೇಳಿಕೆ ಕೊಟ್ಟಿದ್ದಾರೆ.
ನಿರೀಕ್ಷೆಯಂತೆ ರಾಜ್ಯದ ಜನರು ಬಂದ್ ಕರೆಗೆ ಸಹಕಾರ ಕೊಟ್ಟಿಲ್ಲ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜನಜೀವನ, ಬಸ್ ಸಂಚಾರ ಎಂದಿನಂತಿದೆ. ಕೆಲವೆಡೆ ಒತ್ತಾಯ ಪೂರ್ವಕವಾಗಿ ಬಂದ್ ಮಾಡುತ್ತಿದ್ದವರ ಮೇಲೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ. ಇದೇ ಸಂದರ್ಭದಲ್ಲಿ ಪೊಲೀಸ್, ಸಾರಿಗೆ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಬಸವರಾಜ್ ಬೊಮ್ಮಾಯಿ ಅವರು ಹೇಳಿದರು.
ಹೊಸ ವರ್ಷಾಚಾರಣೆ ಸಂದರ್ಭದಲ್ಲಿ ರಾತ್ರಿ ಕರ್ಫ್ಯೂ ಹಾಕುವ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ. ಈ ಬಗ್ಗೆ ಸಂಬಂಧಿಸಿದ ಎಲ್ಲ ಅಧಿಕಾರಿಗಳ ಸಭೆ ನಡೆಸಿ, ಆರೋಗ್ಯ ಸಚಿವರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇನೆ. ಹೀಗಾಗಿ ಹೊಸ ವರ್ಷಾಚರಣೆಗೆ ಅವಕಾಶ ಕೊಡುವ ಕುರಿತು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ತಿಳಿಸಿದ್ದಾರೆ.
ಗೋಹತ್ಯೆ ನಿಷೇಧ ಕಾಯ್ದೆ: ಗೋಹತ್ಯೆ ನಿಷೇಧ ಕಾಯ್ದೆಯನ್ನು ಈ ಸಲ ಜಾರಿಗೆ ತರುತ್ತೇವೆ. ಹಿಂದೆ ನಮ್ಮ ಬಿಜೆಪಿ ಸರ್ಕಾರವಿದ್ದಾಗ ಕಾಂಗ್ರೆಸ್ ಪಕ್ಷದ ರಾಜ್ಯಪಾಲರು ಕಾನೂನಿಗೆ ಅಂಕಿತ ಹಾಕಿರಲಿಲ್ಲ. ಆಗ ದಿ. ಮಾಜಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಗೌರ್ನರ್ ಆಗಿದ್ದರು. ಈ ಭಾರಿ ಗೋಹತ್ಯೆ ನಿಷೇಧ ಕಾನೂನು ಜಾರಿ ತರುವ ಗುರಿ ಹೊಂದಿದ್ದೇವೆ.
ಅದರೊಂದಿಗೆ ವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಬಾರದು ಎಂಬ ಉದ್ದೇಶದಿಂದ ಲವ್ ಜಿಹಾದ್ ನಿಷೇಧದ ಬಗ್ಗೆಯೂ ಕಾಯಿದೆ ಜಾರಿಗೆ ತರುತ್ತೇವೆ.
ಇಷ್ಟೇ ಅಲ್ಲ ಡ್ರಗ್ಸ್ ಪ್ರಕರಣದಲ್ಲಿ ಈಗಾಗಲೇ ಚಾರ್ಜ್ ಶೀಟ್ ಹಾಕಿದ್ದೇವೆ. ಕಳೆದ 10 ವರ್ಷದಲ್ಲಿ ಎಷ್ಟು ಡ್ರಗ್ ಸೀಜ್ ಆಗಿತ್ತೊ ಅದಕ್ಕೂ ಹೆಚ್ಚಿನಷ್ಟು ಡ್ರಗ್ಸ್ನ್ನು ಕೇವಲ 10 ತಿಂಗಳಲ್ಲಿ ಸೀಜ್ ಮಾಡಿದ್ದೇವೆ. ಡ್ರಗ್ಸ್ ವಿರುದ್ಧ ಸಮರ ಮುಂದುವರೆಯಲಿದೆ ಎಂದು ಗೃಹ ಸಚಿವರು ಎಚ್ಚರಿಸಿದ್ದಾರೆ. ಹೊಸ ಹೊಸ ವಿಧಾನದಲ್ಲಿ ಕೊರಿಯರ್, ಡಾರ್ಕ್ನೆಟ್ ಮೂಲಕ ಡ್ರಗ್ ಬರುತ್ತಿದೆ. ಅದರ ವಿರುದ್ಧವೂ ಕ್ರಮ ಕೈಗೊಂಡಿದ್ದೇವೆ. ಅದರಲ್ಲಿ ಶಾಮಿಲಾಗಿದ್ದ ಅಧಿಕಾರಿಗಳ ಮೇಲೂ ಈಗಾಗಲೇ ಕ್ರಮ ಕೈಗೊಂಡಿದ್ದೇವೆ ಎಂದು ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಹೇಳಿಕೆ ನೀಡಿದ್ದಾರೆ.