ಲಾಡ್ಜ್ ನಿಂದ ರಂಧ್ರ ಕೊರೆದು ಆಭರಣ ಅಂಗಡಿಗೆ ಕನ್ನ ಹಾಕಿದ್ದ ಆರೋಪಿ ಬಂಧನ
ಬೆಳಗಾವಿ, ಜುಲೈ 11 : ಬೆಂಗಳೂರಿನ ಕಾಟನ್ ಪೇಟ್ ನಲ್ಲಿರುವ ಪ್ಲಾಟೀನಂ ಡಿಲಕ್ಸ್ ಲಾಡ್ಜ್ ಕೊಠಡಿಯನ್ನು ಕೊರೆದು ನೆಲಮಹಡಿಯಲ್ಲಿದ್ದ ಆಭರಣ ಅಂಗಡಿಯಿಂದ ಚಿನ್ನ, ಬೆಳ್ಳಿಗಳನ್ನು ದರೋಡೆ ಮಾಡಿ ಪರಾರಿಯಾಗಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ.
ಗುಜರಾತ್ ಮೂಲದ ಮಹಮ್ಮದ್ ಹುಸೇನ್ (32) ನನ್ನು ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಬೆಂಗಳೂರಿನ ಪಶ್ಚಿಮ ವಲಯ ಪೊಲೀಸರು ಬಂಧಿಸಿ, 1.3 ಕೆ.ಜಿ ಚಿನ್ನ, 14 ಕೆ.ಜಿ ಬೆಳ್ಳಿ ಹಾಗೂ 2 ಸಾವಿರು ರು. ನಗದು ವಶಪಡಿಸಿಕೊಂಡಿದ್ದಾರೆ.

ಶನಿವಾರ ರಾತ್ರಿ ಬೆಂಗಳೂರಿನ ಕಾಟನ್ ಪೇಟ್ ನಲ್ಲಿರುವ ಪ್ಲಾಟೀನಂ ಡಿಲಕ್ಸ್ ಲಾಡ್ಜ್ ಕೊಠಡಿಯನ್ನು ಕೊರೆದು ನೆಲಮಹಡಿಯಲ್ಲಿದ್ದ ಕಾಂಚನಾ ಜ್ಯುವೆಲ್ಲರಿ ಶಾಪ್ ಒಳಗೆ ನುಗ್ಗಿ ಆಭರಣಗಳನ್ನು ಕದ್ದು ಭಾನುವಾರ ಬೆಳಿಗ್ಗೆ ಕೆಎಸ್ ಆರ್ಟಿಸಿ ಬಸ್ನಲ್ಲಿ ಧಾರವಾಡಕ್ಕೆ ಪ್ರಯಾಣ ಬೆಳೆಸಿದ್ದಾನೆ. ನಂತರ ಸಂಜೆ ಧಾರವಾಡದಿಂದ ಅಹಮದಾಬಾದ್ಗೆ ಪ್ರಯಾಣ ಬೆಳೆಸಲು ಖಾಸಗಿ ಬಸ್ ಹತ್ತಿದ್ದಾನೆ.
ಆದರೆ, ಅಷ್ಟರಲ್ಲಾಗಲೇ ಪಶ್ಚಿಮ ವಲಯದ ಪೊಲೀಸರು ಅಹಮಾದಾಬಾದ್ ಹಾಗೂ ಮುಂಬೈಗೆ ಸಂಚರಿಸುವ ಸರ್ಕಾರಿ ಸೇರಿದಂತೆ ಖಾಸಗಿ ಬಸ್ಗಳ ಸಿಬ್ಬಂದಿಗೆ ಆರೋಪಿಯ ಪೋಟೊ ಸಮೇತ ಮಾಹಿತಿ ತಲುಪಿಸಿ ಮಾಹಿತಿ ನೀಡುವಂತೆ ತಿಳಿಸಿದ್ದರು.
ಅದರಂತೆ ಹುಸೇನ್ ಪ್ರಯಾಣಿಸುತ್ತಿದ್ದ ಖಾಸಗಿ ಬಸ್ ಚಾಲಕ ಪೊಲೀಸರನ್ನು ಸಂಪರ್ಕಿಸಿದ್ದು, ಅವರ ಅಣತಿಯಂತೆ ಕಿತ್ತೂರಿನ ರಾಷ್ಟ್ರೀಯ ಹೆದ್ದಾರಿ-4ರ ಪಕ್ಕದಲ್ಲಿರುವ ಸೆವೆನ್ ಹಿಲ್ಸ್ ಹೋಟೆಲ್ನಲ್ಲಿ ಊಟಕ್ಕೆ ನಿಲ್ಲಿಸಿದ್ದಾನೆ. ಸ್ವಲ್ಪ ಸಮಯದ ನಂತರ ಬಂದ ಪೊಲೀಸರು ಹುಸೇನನ್ನು ಬಂಧಿಸಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ.
ಗುಜರಾತಿನ ಅಹಮದಾಬಾದ್ ನಿವಾಸಿಯಾಗಿರುವ ಈತ ಸುಲಭವಾಗಿ ಸಂಪಾದನೆ ಮಾಡುವ ಉದ್ದೇಶದಿಂದ ಒಂಟಿಯಾಗಿ ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದ ಎಂದು ತನಿಖೆ ವೇಳೆ ಬಹಿರಂಗವಾಗಿದೆ.












Click it and Unblock the Notifications