ದಿ. ಸುರೇಶ್ ಅಂಗಡಿ ನಿವಾಸಕ್ಕೆ ಅಮಿತ್ ಶಾ ಭೇಟಿ
ಬೆಳಗಾವಿ, ಜನವರಿ 17: ಕೇಂದ್ರ ರೇಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿ.ಸುರೇಶ್ ಅಂಗಡಿಯವರ ನಿವಾಸಕ್ಕೆ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿದರು. ದಿ.ಸುರೇಶ್ ಅಂಗಡಿಯವರ ಪುಷ್ಪಾಲಂಕೃತ ಭಾವಚಿತ್ರಕ್ಕೆ ನಮನಗಳನ್ನು ಅರ್ಪಿಸಿದರು.
ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಳಗಾವಿ ಪ್ರವಾಸದಲ್ಲಿದ್ದಾರೆ. ದಿ. ಸುರೇಶ್ ಅಂಗಡಿ ಅವರ "ಸ್ಫೂರ್ತಿ" ನಿವಾಸಕ್ಕೆ ಅಮಿತ್ ಶಾ ಭೇಟಿ ನೀಡಿದರು. ಸುರೇಶ ಅಂಗಡಿಯವರು ಉತ್ತಮ ವ್ಯಕ್ತಿತ್ವ ಹೊಂದಿದ್ದರು. ಅವರು ಕೋವಿಡ್ನಿಂದ ಬಳಲುತ್ತಿರುವಾಗ ತಾವೂ ಸಹ ಅದೇ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದುದನ್ನು ನೆನಪಿಸಿಕೊಂಡರು. ಅವರ ನಿಧನ ದೊಡ್ಡ ನಷ್ಟ ಉಂಟುಮಾಡಿದೆ ಎಂದು ಸಂತಾಪ ವ್ಯಕ್ತಪಡಿಸಿದರು.
ದಿ.ಸುರೇಶ್ ಅಂಗಡಿಯವರ ಧರ್ಮಪತ್ನಿ ಮಂಗಲ್ ಅಂಗಡಿ, ಪುತ್ರಿಯರಾದ ಸ್ಫೂರ್ತಿ, ಶ್ರದ್ಧಾ, ಅಳಿಯಂದಿರಾದ ಡಾ. ರಾಹುಲ್ ಪಾಟೀಲ, ಸಂಕಲ್ಪ ಶೆಟ್ಟರ್, ಕಿರಿಯ ಸಹೋದರ ಮೋಹನ ಚ. ಅಂಗಡಿಯವರಿಗೆ ಸಾಂತ್ವನ ಹೇಳಿದರು.

ದುಃಖ ಸಹಿಸಿಕೊಳ್ಳುವ ಶಕ್ತಿ ಬರಲೆಂದು ತೀವ್ರ ಶೋಕ ವ್ಯಕ್ತಪಡಿಸಿದರು. ಅನಾರೋಗ್ಯದ ಹಿನ್ನೆಲೆಯಲ್ಲಿ ದಿ. ಸುರೇಶ ಅಂಗಡಿಯವರ ತಾಯಿ ಸೋಮವ್ವ ಚನ್ನಬಸಪ್ಪ ಅಂಗಡಿಯವರು ನಾಗೇರಹಾಳದ (ಕೊಂಡಸಕೊಪ್ಪ) ನಿವಾಸದಲ್ಲಿದ್ದರು.

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಭಾರತೀಯ ಜನತಾ ಪಕ್ಷದ ರಾಜ್ಯ ಉಸ್ತುವಾರಿ ಅರುಣಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವ ಜಗದೀಶ ಶೆಟ್ಟರ್ ಉಪಸ್ಥಿತರಿದ್ದರು.
ಬಿಗಿ ಭದ್ರತೆ; ಅಮಿತ್ ಶಾ ಭೇಟಿ ಹಿನ್ನೆಲೆಯಲ್ಲಿ ದಿ. ಸುರೇಶ್ ಅಂಗಡಿ ಅವರ ನಿವಾಸಕ್ಕೆ ತಲುಪುವ ಎಲ್ಲಾ ಮಾರ್ಗಗಳಲ್ಲಿ ಬಿಗಿ ಭದ್ರತೆ ಒದಗಿಸಲಾಗಿತ್ತು. ಕೋವಿಡ್ ನಿಯಂತ್ರಣಕ್ಕಾಗಿ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆಹಾರ ಸುರಕ್ಷತಾ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಉಪಹಾರ ಸಿದ್ಧಪಡಿಸಲಾಗಿತ್ತು.
ದಿ.ಸುರೇಶ್ ಅಂಗಡಿಯವರ ಆಪ್ತ ಸಿಬ್ಬಂದಿ ವರ್ಗದ ರಾಜು ಜೋಷಿ, ಶ್ರೀಕಾಂತ ಕಡಕೋಳ, ಸಂತೋಷ ತುಬಚಿ, ಶಿವಲಿಂಗಯ್ಯ ಅಲ್ಲಯ್ಯನವರ ಮಠ ಸೇರಿದಂತೆ ಕೆಲವೇ ಜನರಿಗೆ ಭೇಟಿ ಸಂದರ್ಭದಲ್ಲಿ ಅವಕಾಶ ಕಲ್ಪಿಸಲಾಗಿತ್ತು.
ಕೋವಿಡ್ ಸೋಂಕು ತಗುಲಿದ್ದ ಸುರೇಶ್ ಅಂಗಡಿ ಅವರು ಚಿಕಿತ್ಸೆ ಫಲಕಾರಿಯಾಗದೇ ಸೆಪ್ಟೆಂಬರ್ 23ರಂದು ಮೃತಪಟ್ಟಿದ್ದರು.











Click it and Unblock the Notifications