ತುಮಕೂರು, ಚಿತ್ರದುರ್ಗ, ಬೆಳಗಾವಿ, ಧಾರವಾಡದಲ್ಲಿ ಎಸಿಬಿ ದಾಳಿ
ಬೆಳಗಾವಿ, ಮಾರ್ಚ್ 20: ಬೆಳ್ಳಂಬೆಳಿಗ್ಗೆ ಭ್ರಷ್ಟರಿಗೆ ಎಸಿಬಿ ಅಧಿಕಾರಿಗಳು ಆಘಾತ ನೀಡಿದ್ದಾರೆ. ದಾವಣಗೆರೆ, ತುಮಕೂರು, ಚಿತ್ರದುರ್ಗ, ಬೀದರ್, ಕಲಬುರ್ಗಿ, ಬೆಳಗಾವಿ, ಬೆಂಗಳೂರು ನಗರ, ಉತ್ತರ ಕನ್ನಡ, ಧಾರವಾಡ, ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಒಟ್ಟು ರಾಜ್ಯದ 6 ಅಧಿಕಾರಿಗಳಿಗೆ ಸೇರಿದ 24 ಸ್ಥಳಗಳಲ್ಲಿ ಹರಡಿಕೊಂಡ ಆಸ್ತಿ-ಪಾಸ್ತಿಗಳ ಮೇಲೆ ಎಸಿಬಿ ಅಧಿಕಾರಿಗಳು ಮಿಂಚಿನ ದಾಳಿ ನಡೆಸಿದ್ದಾರೆ. ಬಲ್ಲ ಮೂಲಗಳಿಗಿಂತ ಅಧಿಕಾರಿಗಳು ಆದಾಯ ಮೀರಿ ಅಕ್ರಮ ಆಸ್ತಿ-ಪಾಸ್ತಿಗಳನ್ನು ಹೊಂದಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ, ಅವರ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳನ್ನು ದಾಖಲಿಸಿ ಇಂದು ಬೆಳಿಗ್ಗೆ ದಾಳಿ ನಡೆಸಲಾಗಿದೆ.
ಎಸಿಬಿ ದಾಳಿ : ಸರ್ಕಾರಿ ನೌಕರರ ಬಳಿ ಸಿಕ್ಕದ್ದು ಕೋಟ್ಯಾಂತರ ಹಣ-ಆಸ್ತಿ
ಅಧಿಕಾರಿಗಳ ಮನೆಯಲ್ಲಿ ಶೋಧ ಕಾರ್ಯ ಮುಂದುವರೆದಿದ್ದು ಈವರೆಗೆ ಶೋಧ ನಡಸಲಾದ ಜಾಗಗಳ ಮಾಹಿತಿ ಈ ಕೆಳಕಂಡಂತಿದೆ.
1. ಗೋಪಾಲಕೃಷ್ಣ, ಜಂಟಿ ನಿರ್ದೇಶಕರು, ದಾವಣಗೆರೆ ಹರಿಹರ ನಗರ ನಗರಾಭಿವೃದ್ಧಿ ಪ್ರಾಧಿಕಾರ, ಹೆಚ್ಚುವರಿ ಪ್ರಭಾರ ಆಯುಕ್ತರು ದಾವಣಗೆರೆ ನಗರ ಮಹಾನಗರ ಪಾಲಿಕೆ, ದಾವಣಗೆರೆ
ಇವರ ದಾವಣಗೆರೆಯಲ್ಲಿನ ವಾಸದ ಮನೆ ಹಾಗೂ ಇವರು ಕರ್ತವ್ಯ ನಿರ್ವಹಿಸುತ್ತಿರುವ ಎರಡು ಕಚೇರಿಗಳ ಮೇಲೆ ದಾಳಿ.
2. ತಿಪ್ಪೇಸ್ವಾಮಿ, ಸಹಾಯಕ ಆಯುಕ್ತರು, ತುಮಕೂರು ಉಪ ವಿಭಾಗ, ತುಮಕೂರು ಜಿಲ್ಲೆ.
ಇವರ ತುಮಕೂರಿನಲ್ಲಿನ ಕಛೇರಿ ಮತ್ತು ನಿವಾಸ, ಚಿತ್ರದುರ್ಗದ ಬೆಳಘಟ್ಟದಲ್ಲಿರುವ ಮನೆ ಮತ್ತು ತೋಟದ ಮನೆ, ಚಿತ್ರದುರ್ಗದ ಡಿ.ಎಸ್ ಹಳ್ಳಿಯಲ್ಲಿನ ಮನೆ ಮೇಲೆ ದಾಳಿ, ಪರಿಶೀಲನೆ.
3. ವಿಜಯಕುಮಾರ್ ಮಾಶೆಟ್ಟಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಕಾರಾಂಜ ಕಾಲುವೆ ಯೋಜನೆ ಉಪ ವಿಭಾಗ ಸಂಖ್ಯೆ-04, ಭಾಲ್ಕಿ ಕ್ಯಾಂಪ್ ಹುಮ್ನಾಬಾದ್ ಬೀದರ್ ಜಿಲ್ಲೆ,
ಇವರ ಹುಮ್ನಾಬಾದ್ನಲ್ಲಿನ ಕಛೇರಿ, ಕಲಬುರ್ಗಿಯಲ್ಲಿನ ಮನೆ, ಬೀದರ್ ನ ಮುಚಾಳಾಂಬದ ಮನೆ ಮೇಲೆ ಎಸಿಬಿ ರೇಡ್.
4. ಕಿರಣ್ ಸುಬ್ಬಾರಾವ್ ಭಟ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಬೆಳಗಾವಿ ಮಹಾನಗರ ಪಾಲಿಕೆ, ಹಾಲಿ ಕರ್ತವ್ಯ ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆ, ಬೆಳಗಾವಿ.
ಇವರ ಬೆಳಗಾವಿಯಲ್ಲಿನ ಕಛೇರಿ, ಬೆಳಗಾವಿ ನಗರದಲ್ಲಿನ ಎರಡು ಮನೆಗಳು, ಬನಶಂಕರಿ ಬೆಂಗಳೂರಿನಲ್ಲಿನ ಮನೆ ಮತ್ತು ಉತ್ತರಕನ್ನಡದಲ್ಲಿನ ಹಸುರುಗೋಡು ಮನೆಗೆ ಎಸಿಬಿ ತಂಡ ಭೇಟಿ ಪರಿಶೀಲನೆ.
5. ಶ್ರೀಪತಿ ದೊಡ್ಡಲಿಂಗಣ್ಣನವರ್, ಉಪ ಮುಖ್ಯ ಭದ್ರತೆ ಮತ್ತು ಜಾಗೃತಾಧಿಕಾರಿ, ಎನ್ಇಕೆಆರ್ ಟಿಸಿ ಕಲಬುರಗಿ.
ಇವರ ಕಲಬುರಗಿಯಲ್ಲಿನ ಎನ್ಇಕೆಆರ್ ಟಿಸಿ ಕಛೇರಿ ಮತ್ತು ವಾಸವಿರುವ ಗೆಸ್ಟ್ ಹೌಸ್, ಹಾಗೂ ಧಾರವಾಡದಲ್ಲಿನ ಎರಡು ಮನೆಗಳಿಗೆ ಎಸಿಬಿ ಅಧಿಕಾರಿಗಳಿಂದ ದಾಳಿ.
6. ಕೀರ್ತಿ ಜೈನ್, ಕಂದಾಯ ನಿರೀಕ್ಷಕರು, ಕಳಸಾ ಹೋಬಳಿ, ಪ್ರಭಾರ ಉಪ ತಹಶೀಲ್ದಾರ್ ಕಳಸ, ಚಿಕ್ಕಮಗಳೂರು ಜಿಲ್ಲೆ.
ಇವರ ಕಳಸಾದಲ್ಲಿನ ಕಛೇರಿ ಮತ್ತು ನಿವಾಸ, ದಕ್ಷಿಣ ಕನ್ನಡದ ಉಜಿರೆಯಲ್ಲಿರುವ ಮನೆ ಹಾಗೂ ಮೂಡಿಗೆರೆ ತಾಲ್ಲೂಕು ಸಂಸೆಯಲ್ಲಿರುವ ಮನೆ ಮೇಲೆ ಎಸಿಬಿ ದಾಳಿ ನಡೆದಿದೆ.
ಕರ್ನಾಟಕ ರಾಜ್ಯದ ವಿವಿಧ ಎಸಿಬಿ ಪೊಲೀಸ್ ಠಾಣೆಯ ತಂಡಗಳಿಂದ ಈ ಆರೋಪಿ ಸರ್ಕಾರಿ ಸಿಬ್ಬಂದಿಗಳ ಮನೆ, ಕಚೇರಿಗಳ ಮೇಲೆ ದಾಳಿ ಮುಂದುವರೆದಿದ್ದು, ಇವರು ಹೊಂದಿರುವ ಆಸ್ತಿ-ಪಾಸ್ತಿಗಳ ಮೂಲದ ಬಗ್ಗೆ ತನಿಖೆ ಹಾಗೂ ದಾಖಲೆಗಳ ಪರಿಶೀಲನಾ ಕಾರ್ಯ ಮುಂದುವರೆದಿದೆ.