ದಲಿತರ ವಿರುದ್ಧ ಅಸಂಬದ್ಧ ಹೇಳಿಕೆ: ಉಮೇಶ್ ಕತ್ತಿ ವಿರುದ್ಧ ಎಫ್ಐಆರ್
ಬೆಳಗಾವಿ, ಡಿಸೆಂಬರ್ 16: ಕಳೆದೊಂದು ತಿಂಗಳಿನಿಂದ ಭಾರೀ ಸುದ್ದಿಯಲ್ಲಿರುವ ಹುಕ್ಕೇರಿ ಬಿಜೆಪಿ ಶಾಸಕ ಉಮೇಶ್ ಕತ್ತಿ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಾಗಿದ್ದು, ಎಫ್ಐಆರ್ ಹಾಕಲಾಗಿದೆ.
ಉಮೇಶ್ ಕತ್ತಿ ಹೇಳಿಕೆಗೆ ವಿರೋಧ: ಚಿಕ್ಕೋಡಿ, ಹುಕ್ಕೇರಿ ಬಂದ್
ಶಾಸಕ ಉಮೇಶ ಕತ್ತಿ ದಲಿತರ ವಿರುದ್ಧ ಅಸಂವಿದಾನಿಕ ಹೇಳಿಕೆಯನ್ನು ಖಂಡಿಸಿ IPC ಸೆಕ್ಷನ್ 504, 3(1) SC ST ಆಕ್ಟ್ ದಡಿಯಲ್ಲಿ ಸುನಿಲ್ ಕಲ್ಲಪ್ಪ ಖಾತೆದಾರ ಎಂಬುವರು ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇತ್ತೀಚೆಗೆ ಶಾಸಕ ಉಮೇಶ ಕತ್ತಿ ದಲಿತರ ವಿರುದ್ದ ಅಸಂವಿದಾನಿಕ ಹೇಳಿಕೆಯನ್ನು ನೀಡಿದ್ದರು. ಇದರಿಂದ ಕೆರಳಿದ ದಲಿತ ಸಂಘಟನೆಗಳು ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣ, ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣ ಬಂದ್ ಕರೆ ಕೊಟ್ಟು ಉಮೇಶ ಕತ್ತಿ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ಮಾಡಿದ್ದವು.
ಲಿಂಗಾಯತ ಪ್ರತ್ಯೇಕ ಧರ್ಮ ಸಮಾವೇಶದಲ್ಲಿ ಉಮೇಶ್ ಕತ್ತಿ ಅವರು ಮಾತನಾಡುವ ಭರದಲ್ಲಿ ದಲಿತರ ವಿರುದ್ಧ ಅಸಂವಿಧಾನಿಕ ಪದ ಬಳಕೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಚಿಕ್ಕೋಡಿ ದಲಿತ ಮುಖಂಡರು ಡಿಸೆಂಬರ್ 18ರಂದು ಬೆಳಗಾವಿ ಜಿಲ್ಲಾ ಬಂದ್ ಗೆ ಕರೆ ಕೊಟ್ಟಿದ್ದಾರೆ.