ಡಿಸೆಂಬರ್ 6ರ ತನಕ ಸ್ಟೀಲ್ ಫ್ಲೈಓವರ್ ಕಾಮಗಾರಿ ಚಾಲನೆಗೆ ಬ್ರೇಕ್
ಕರ್ನಾಟಕ ಸರ್ಕಾರದ ಉದ್ದೇಶಿತ ಉಕ್ಕಿನ ಸೇತುವೆ ನಿರ್ಮಾಣ ಕಾಮಗಾರಿ ಮೇಲೆ ನೀಡಿರುವ ತಡೆಯಾಜ್ಞೆಯನ್ನು ಡಿಸೆಂಬರ್ 6ರ ತನಕ ವಿಸ್ತರಿಸಿ ಚೆನ್ನೈನಲ್ಲಿರುವ ರಾಷ್ಟ್ರೀಯ ಹಸಿರು ಪ್ರಾಧಿಕಾರ (ಎನ್ ಜಿಟಿ) ಶುಕ್ರವಾರ ಆದೇಶ ಹೊರಡಿಸಿದೆ.
ಬೆಂಗಳೂರು, ನವೆಂಬರ್ 25: ಕರ್ನಾಟಕ ಸರ್ಕಾರದ ಉದ್ದೇಶಿತ ಉಕ್ಕಿನ ಸೇತುವೆ ನಿರ್ಮಾಣ ಕಾಮಗಾರಿ ಮೇಲೆ ನೀಡಿರುವ ತಡೆಯಾಜ್ಞೆಯನ್ನು ಡಿಸೆಂಬರ್ 6ರ ತನಕ ವಿಸ್ತರಿಸಿ ಚೆನ್ನೈನಲ್ಲಿರುವ ರಾಷ್ಟ್ರೀಯ ಹಸಿರು ಪ್ರಾಧಿಕಾರ (ಎನ್ ಜಿಟಿ) ಶುಕ್ರವಾರ ಆದೇಶ ಹೊರಡಿಸಿದೆ.
ಕರ್ನಾಟಕ ಸರ್ಕಾರದ ಉದ್ದೇಶಿತ ಬಹುಕೋಟಿ ಉಕ್ಕಿನ ಸೇತುವೆ(Steel Flyover) ನಿರ್ಮಾಣ ಸದ್ಯಕ್ಕೆ ಕೈಗೆತ್ತಿಕೊಳ್ಳುತ್ತಿಲ್ಲ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ ವಕೀಲರು ನವೆಂಬರ್ 03ರಂದು ಹೈಕೋರ್ಟಿನಲ್ಲಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. [ಉಕ್ಕಿನ ಸೇತುವೆ ಬಗ್ಗೆ ಫೇಸ್ಬುಕ್ ಸ್ಟೇಟಸ್ ಎಸ್ಐ ಇನ್ ಟ್ರಬಲ್]
ಉಕ್ಕಿನ ಸೇತುವೆ ನಿರ್ಮಾಣಕ್ಕೆ ರಾಷ್ಟ್ರೀಯ ಹಸಿರು ಪ್ರಾಧಿಕಾರ ಈ ಮುಂಚೆ ನಾಲ್ಕುವಾರಗಳ ತಡೆ ನೀಡಿತ್ತು. ಎನ್ ಜಿಟಿ ನೀಡಿರುವ ತಡೆಯಾಜ್ಞೆ ತೆರವುಗೊಳಿಸುವಂತೆ ಕರ್ನಾಟಕ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು.
ಬೆಂಗಳೂರಿನ ನಾಗರಿಕರ ಕ್ರಿಯಾ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ರಾಷ್ಟ್ರೀಯ ಹಸಿರು ಪ್ರಾಧಿಕಾರ, ಡಿಸೆಂಬರ್ 6ರ ತನಕ ಯಾವುದೇ ಕಾಮಗಾರಿ ನಡೆಸದಂತೆ ಆದೇಶಿಸಿ, ವಿಚಾರಣೆಯನ್ನು ಮುಂದೂಡಿದೆ. ಸರ್ಕಾರದ ಪರವಾಗಿ ಅಡ್ವೋಕೇಟ್ ಜನರಲ್ ಮಧುಸೂದನ್ ನಾಯ್ಕ್ ಅವರು ಲಿಖಿತ ಮನವಿ ಸಲ್ಲಿಸಿ, ಉಕ್ಕಿನ ಸೇತುವೆಯಿಂದ ಪರಿಸರಕ್ಕೆ ಯಾವುದೇ ರೀತಿ ಹಾನಿಯಾಗುವುದಿಲ್ಲ ಎಂದಿದ್ದಾರೆ.
ಸುಮಾರು 6.7 ಕಿಲೋ ಮೀಟರ್ ಉದ್ದದ ಮೇಲ್ಸೇತುವೆ ನಿರ್ಮಾಣಕ್ಕೆ1,761 ಕೋಟಿ ರು ಎಂದು ಅಂದಾಜು ವೆಚ್ಚ ನಿಗದಿ ಮಾಡಲಾಗಿದೆ.ಸ್ಟೀಲ್ ಫ್ಲೈಓವರ್ ಬೇಕು ಹಾಗೂ ಬೇಡ ಎಂದು ನಾಗರಿಕರು ನಡೆಸಿದ ಪ್ರತಿಭಟನೆಗಳು, ಅಹವಾಲುಗಳನ್ನು ಪ್ರಾಧಿಕಾರ ಪರಿಶೀಲಿಸಿದೆ.