ನಮ್ಮ ಮೆಟ್ರೋದಲ್ಲಿ ಕನ್ನಡಿಗರಿಗೆ ಉದ್ಯೋಗ: ಗಡುವು
ಬೆಂಗಳೂರು, ಜೂನ್ 19- ರಾಜ್ಯದ ರಾಜಧಾನಿ ಬೆಂಗಳೂರಿನ ಹೆಮ್ಮೆಯ ಕೊಡುಗೆಗಳಲ್ಲಿ ನಮ್ಮ ಮೆಟ್ರೋ ರೈಲ್ವೆ ಸಂಚಾರ ವ್ಯವಸ್ಥೆಯೂ ಒಂದು. ಆದರೆ ನಮ್ಮ ಮೆಟ್ರೋದಲ್ಲಿ ನಮ್ಮ ಕನ್ನಡಿಗರಿಗೇ ಉದ್ಯೋಗವಿಲ್ಲ ಎಂಬುದು ಆರಂಭದಿಂದಲೂ ಕೇಳಿಬಂದಿರುವ ಮಾತು. ಗಮನಾರ್ಹವೆಂದರೆ ಇಂದಿಗೂ ಕನ್ನಡಿಗರ ಅನಾದರಣೆ ಮುಂದುವರಿದೇ ಇದೆ.
ಕನ್ನಡಿಗರಿಗೆ ಇಲ್ಲಿ ಮೊದಲ ಪ್ರಾಶಸ್ತ್ಯ ನೀಡಬೇಕು. ನಮ್ಮವರಿಗೂ ಉದ್ಯೋಗ ಕಲ್ಪಿಸಿ ಎಂದು ಅಂದಿನಿಂದಲೂ ನಿರಂತರ ಬೇಡಿಕೆ/ಪ್ರತಿಭಟನೆಗಳು ನಡೆಯುತ್ತಾ ಬಂದಿವೆ. ಆದರೆ ಅದು ಸಂಬಂಧಪಟ್ಟವರ ಕಿವಿಗೆ ಬಿದ್ದಿಲ್ಲ.
ಆದರೆ ಇಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ವೇದಿಕೆಯ ಅಧ್ಯಕ್ಷ ಟಿಎ ನಾರಾಯಣಗೌಡ ಅವರ ನೇತೃತ್ವದಲ್ಲಿ ಶಾಂತಿನಗರದ ಬಿಎಂಆರ್ ಸಿಎಲ್ ಕಚೇರಿ ಬಳಿ ಬೃಹತ್ ಪ್ರತಿಭಟನೆ ನಡೆಸಿದರು. 'ಕನ್ನಡಿಗರಿಗೆ ಉದ್ಯೋಗ ನೀಡಬೇಕು, ಕನ್ನಡ ಭಾಷೆಗೆ ಹೆಚ್ಚು ಪ್ರಾಶಸ್ತ್ಯ ನೀಡಬೇಕು' ಎಂಬುದು ವೇದಿಕೆಯ ಪ್ರಮುಖ ಬೇಡಿಕೆಯಾಗಿತ್ತು.
ಪ್ರತಿಭಟನೆಯ ನಂತರ ವೇದಿಕೆಯ ಕಾರ್ಯಕರ್ತರು ಬಿಎಂಆರ್ ಸಿಎಲ್ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಕರೋಲಾ ಅವರಿಗೆ ಮನವಿ ಸಲ್ಲಿಸಿ, ಕನ್ನಡಿಗರಿಗೆ ಹೆಚ್ಚು ಆದ್ಯತೆ ನೀಡುವಂತೆ ಒತ್ತಾಯಿಸಿದರು. ಮನವಿ ಸ್ವೀಕರಿಸಿದ ಪ್ರದೀಪ್ ಸಿಂಗ್ ಕರೋಲಾ ಒಂದು ವಾರ ಕಾಲಾವಕಾಶ ಕೋರಿದ್ದು, ಅಷ್ಟರಲ್ಲಿ ಮೆಟ್ರೋ ನಿಲ್ದಾಣಗಳಲ್ಲಿ ನಾಮಫಲಕಗಳನ್ನು ಕನ್ನಡದಲ್ಲಿ ಹಾಕುವುದಾಗಿ ಒಪ್ಪಿದ ನಂತರ ಪ್ರತಿಭಟನೆ ಕೈ ಬಿಡಲಾಯಿತು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಾರಾಯಣ ಗೌಡ ಅವರು 'ಹಿಂದಿ ಭಾಷೆಯನ್ನು ಸಂಪರ್ಕ ಭಾಷೆಯನ್ನಾಗಿ ಮಾಡಬಾರದು. 'ನಮ್ಮ ಮೆಟ್ರೋ' ನಿಲ್ದಾಣಗಳಲ್ಲಿ ಕನ್ನಡದಲ್ಲೇ ನಾಮಫಲಕ ಹಾಕಬೇಕು, ನಮ್ಮ ಮೆಟ್ರೋದಲ್ಲಿ ಕನ್ನಡಿಗರಿಗೆ ಹೆಚ್ಚು ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.
ಹೊರ ರಾಜ್ಯಗಳಿಂದ ಬಂದವರೇ ನಮ್ಮ ಮೆಟ್ರೋದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ನಮ್ಮ ಮೆಟ್ರೋ ಆಡಳಿತ ಮಂಡಳಿ ಕನ್ನಡಿಗರಿಗೆ ತಾರತಮ್ಯ ಮಾಡುತ್ತಿದೆ. ಕನ್ನಡದಲ್ಲಿ ನಾಮಫಲಕ ಹಾಕಿಲ್ಲ. ಕನ್ನಡಿಗರಿಗೆ ಉದ್ಯೋಗ ನೀಡಿಲ್ಲ ಎಂದು ವೇದಿಕೆಯ ಕಾರ್ಯಕರ್ತರು ಕಿಡಿಕಾರಿದರು.