ರಾಜಕೀಯ ನಿವೃತ್ತಿ ಡಿಕ್ಷನರಿಯಲ್ಲೇ ಇಲ್ಲ: ಎಸ್ಸೆಂ ಕೃಷ್ಣ
ನಾನು ಅಲೆಯ ಜತೆಯಲ್ಲಿ ಬಂದ ರಾಜಕಾರಣಿ ಅಲ್ಲ, ಸುಮಾರು 46 ವರ್ಷಗಳ ಕಾಂಗ್ರೆಸ್ ಪಕ್ಷದ ಜತೆಗಿದ್ದೇನೆ. ಇದು ತೊರೆಯಬೇಕಾದ ಸಂದರ್ಭ ಬಂದಿದೆ : ಎಸ್ಸೆಂ ಕೃಷ್ಣ
ಬೆಂಗಳೂರು, ಜನವರಿ 29: 'ನಾನು ಅಲೆಯ ಜತೆಯಲ್ಲಿ ಬಂದ ರಾಜಕಾರಣಿ ಅಲ್ಲ, ಸುಮಾರು 46 ವರ್ಷಗಳ ಕಾಂಗ್ರೆಸ್ ಪಕ್ಷದ ಜತೆಗಿದ್ದೇನೆ. ಇದು ತೊರೆಯಬೇಕಾದ ಸಂದರ್ಭ ಬಂದಿದೆ' ಅದರೆ, ನೋವಿನಿಂದ ವಿದಾಯ ಹೇಳುತ್ತಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಿಷ್ಠಾವಂತ ನಾಯಕ ಎಸ್ಸೆಂ ಕೃಷ್ಣ ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸದಾಶಿವನಗರದ ತಮ್ಮ ಮನೆಯಲ್ಲಿ ಮಾತನಾಡಿದ ಎಸ್ಸೆಂ ಕೃಷ್ಣ ಅವರು ತಮ್ಮ ರಾಜಕೀಯ ಬದುಕು, ಕಾಂಗ್ರೆಸ್ ಜತೆಗಿನ ಒಡನಾಟದ ಬಗ್ಗೆ ಹೇಳಿಕೊಂಡರು. ನಾನು ಕಾಂಗ್ರೆಸ್ ಗೆ ಮಾತ್ರ ರಾಜೀನಾಮೆ ನೀಡಿದ್ದೇನೆ. ಸಕ್ರಿಯ ರಾಜಕೀಯಕ್ಕೆ ಅಲ್ಲ. ನಿವೃತ್ತಿ ಎಂಬುದು ನನ್ನ ಡಿಕ್ಷನರಿಯಲ್ಲಿಲ್ಲ. A politician never retires, he only fades away' ಎಂದು ಹೇಳಿದರು.[ಎಸ್ ಎಂ ಕೃಷ್ಣ ಗುಡ್ ಬೈ; ಯಾರ್ಯಾರು ಏನೇನು ಅಂದ್ರು?]

ವಯಸ್ಸಿನ ಕಾರಣಕ್ಕೆ ಮಾತ್ರ ಪಕ್ಷದ ನಿಷ್ಠಾವಂತರನ್ನು ಕಡೆಗಣಿಸುವುದು ಸರಿಯಲ್ಲ ಎಂದು ನೊಂದು ನುಡಿದರು. ಇಂದು ಕಾಂಗ್ರೆಸ್ ಪಕ್ಷ ದ್ವಂದ್ವ ಪರಿಸ್ಥಿತಿಯಲ್ಲಿದೆ. ರಾಜಕೀಯ ಮುಖಂಡರಿಗಿಂತ ಮ್ಯಾನೇಜರ್ ಗಳಿದ್ದರೆ ಪಕ್ಷ ನಡೆಸಬಹುದು ಎಂಬ ಮನಸ್ಥಿತಿ ಬಂದಿದೆ. ಹಿರಿತನಕ್ಕೆ ಬೆಲೆ ಇಲ್ಲದ್ದಂತಾಗಿರುವುದು ಬಹಳ ನೋವಿನ ಸಂಗತಿ ಎಂದರು.
* ಯುಎಸ್ ನಿಂದ ಬಂದ ಬಳಿಕ ಚುನಾವಣೆ ಎದುರಿಸಿ ಆಯ್ಕೆಯಾದವನು, ಅಲೆಯಿಂದ ಬಂದ ರಾಜಕಾರಣಿಯಲ್ಲ.
* ಇಂದಿರಾಗಾಂಧಿಜೀ ಹಾಗೂ ಪ್ರಜಾ ಸಮಾಜವಾದಿ ಪಕ್ಷದ ನಡುವೆ ರಾಯಭಾರಿಯಾಗಿದ್ದೆ.
* ರಾಜೀವ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರು ನನಗೆ ಉತ್ತಮ ಗೌರವ, ಅಧಿಕಾರ ನೀಡಿದ್ದಾರೆ. ನಾನು ಪಕ್ಷಕ್ಕೆ ಆಭಾರಿಯಾಗಿದ್ದೇನೆ.
* ಕಾಂಗ್ರೆಸ್ ನಲ್ಲಿ ಸಿಹಿಯುಂಡಿದ್ದೇನೆ, ಕಹಿಯನ್ನು ಜೀರ್ಣಿಸಿಕೊಂಡಿದ್ದೇನೆ.
* ನಾನು ಕಾಂಗ್ರೆಸ್ ತೊರೆಯುವ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ಈ ಬಗ್ಗೆ ಮತು ಚಿಂತನೆ ಅಗತ್ಯವಿಲ್ಲ.
* ನನಗೆ ವಯಸ್ಸಾಗಿದೆ ನಿಜ, ನಡೆದಾಡಲು ಕಷ್ಟವಾಗುತ್ತದೆ. ಆದರೆ, ಕೆಲವರು 46ವರ್ಷ ವಯಸ್ಸಿನಲ್ಲೇ ವಯಸ್ಸಾದಂತೆ ಆಡುತ್ತಾರೆ.
* ಪ್ರತಿಯೊಬ್ಬರಿಗೆ ಆತ್ಮಗೌರವ ಇರುತ್ತದೆ. ಸ್ವಾಭಿಮಾನಕ್ಕೆ ಧಕ್ಕೆ ಬಂದ ಮೇಲೆ ಇರುವುದು ಸರಿಯಲ್ಲ.
* ವಯಸ್ಸು ಎಂಬುದು ಮನಸ್ಥಿತಿ ಮೇಲೆ ಅವಲಂಬಿಸಿರುತ್ತದೆ.
* ಆದರೆ, ನಾನು ಕಾಂಗ್ರೆಸ್ ಉಪಾಧ್ಯಕ್ಷರ ಬಗ್ಗೆ ಮಾತನಾಡುವುದಿಲ್ಲ ಎಂದರು.
* ನಾನು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡುತ್ತಿಲ್ಲ. ಉಪರಾಷ್ಟ್ರಪತಿಯಾಗುತ್ತಾರಂತೆ ವರದಿಗಳು ಬಂದಿದ್ದರೆ ಅದೆಲ್ಲ ಸುಳ್ಳು.
* ರಾಜ್ಯ ಸರ್ಕಾರದ ಬಗ್ಗೆ ನಾನೇನು ಈಗ ಹೇಳಲಾರೆ. ಸಿದ್ದರಾಮಯ್ಯ ಅವರನ್ನು ಕರ್ನಾಟಕಕ್ಕೆ ಕರೆ ತರುವ ಸಭೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದನ್ನು ಸ್ಮರಿಸಿದರು.
ಮಾಧ್ಯಮ ಪ್ರತಿನಿಧಿಗಳು ಒಮ್ಮೆಗೆ ಅನೇಕ ಪ್ರಶ್ನೆಗಳನ್ನು ಎಸೆದಾಗ, ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಇದೇನು ಅಸೆಂಬ್ಲಿಯಲ್ಲ ಎಂದು ನಗುತ್ತಾ ಹೇಳಿದರು.












Click it and Unblock the Notifications