ಕಾಂಗ್ರೆಸ್ ಸೋಲಿಗೆ ಸಿದ್ದರಾಮಯ್ಯ ಅವರೇ ಸಾಕು : ಪಿ.ರಮೇಶ್
ಬೆಂಗಳೂರು, ಏಪ್ರಿಲ್ 15 : 'ಕಾಂಗ್ರೆಸ್ನಲ್ಲಿ ತುಘಲಕ್ ದರ್ಬಾರ್ ನಡೆಯುತ್ತಿದೆ. ಸಿದ್ದರಾಮಯ್ಯ ಅವರು ತುಘಲಕ್' ಎಂದು ಜೆಡಿಎಸ್ ನಾಯಕರ ಪಿ.ರಮೇಶ್ ಆರೋಪ ಮಾಡಿದ್ದಾರೆ. ಸಿ.ವಿ.ರಾಮನ್ ನಗರದ ಕಾಂಗ್ರೆಸ್ ನಾಯಕ ಪಿ.ರಮೇಶ್ ಶುಕ್ರವಾರ ಜೆಡಿಎಸ್ ಸೇರಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಹರಸಾಹಸ ಪಡುತ್ತಿದೆ. ಇದೇ ಮೊದಲ ಬಾರಿಗೆ ಕಾಂಗ್ರೆಸ್ ಪಟ್ಟಿ ಬಿಡುಗಡೆಗೆ ಮುನ್ನವೇ ಭಿನ್ನಮತ ಸ್ಫೋಟಗೊಂಡಿದೆ. ಹಲವು ನಾಯಕರು ಪಕ್ಷದ ನಾಯಕರ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಟಿಕೆಟ್ ರಾಜಕೀಯ
'ಸಿ.ವಿ.ರಾಮನ್ ನಗರದಿಂದ ನಾನು ಜೆಡಿಎಸ್ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲಿದ್ದೇನೆ. ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಸಿದ್ದರಾಮಯ್ಯ ಅವರೇ ಕಾರಣವಾಗುತ್ತಾರೆ' ಎಂದು ಪಿ.ರಮೇಶ್ ಹೇಳಿದ್ದಾರೆ.
ಕಾಂಗ್ರೆಸ್ನ ಹಿನ್ನಡೆ : ಸಿ.ವಿ.ರಾಮನ್ ನಗರದ ಪಿ.ರಮೇಶ್ ಜೆಡಿಎಸ್ಗೆ ಸೇರ್ಪಡೆ
'ಸಿ.ವಿ.ರಾಮನ್ ನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಾನು ಬಯಸಿದ್ದೆ. ಆದರೆ, ಸಿದ್ದರಾಮಯ್ಯ ಅವರು ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಅವಕಾಶ ಮಾಡಿಕೊಡುವಂತೆ ಕೇಳಿದ್ದರು' ಎಂದು ಪಿ.ರಮೇಶ್ ಹೇಳಿದರು.
ಸಿ.ವಿ.ರಾಮನ್ ನಗರದಲ್ಲಿ ಕಾಂಗ್ರೆಸ್ಗೆ ಬಂಡಾಯದ ಬಿಸಿ?
ಇಂದಿರಾ ಗಾಂಧಿ ಅವರ ಕಾಂಗ್ರೆಸ್ ಅಲ್ಲ
'ಇದು ಇಂದಿರಾ ಗಾಂಧಿ ಅವರ ಕಾಂಗ್ರೆಸ್ ಅಲ್ಲ. ತುಘಲಕ್ ಆಡಳಿತ ನಡೆಯುತ್ತಿದೆ. ಸಿದ್ದರಾಮಯ್ಯ ಅವರೇ ತುಘಲಕ್ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಸಿದ್ದರಾಮಯ್ಯ ಅವರು ಕಾರಣವಾಗುತ್ತಾರೆ' ಎಂದು ಪಿ.ರಮೇಶ್ ಆರೋಪ ಮಾಡಿದರು.
ಪಿ.ರಮೇಶ್ ಸಿ.ವಿ.ರಾಮನ್ ನಗರದ ಕಾಂಗ್ರೆಸ್ ಮುಖಂಡರು. ಈ ಬಾರಿಯ ಚುನಾವಣೆಯಲ್ಲಿ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಎಚ್.ಸಿ.ಮಹದೇವಪ್ಪ ಅವರು ಕ್ಷೇತ್ರದಿಂದ ಸ್ಪರ್ಧಿಸುವ ಹಿನ್ನಲೆಯಲ್ಲಿ ಅಸಮಾಧಾನಗೊಂಡು ಶುಕ್ರವಾರ ಜೆಡಿಎಸ್ ಸೇರಿದ್ದಾರೆ.
ಸಿದ್ದರಾಮಯ್ಯ ಅವಕಾಶ ನೀಡಲು ಹೇಳಿದರು
'ಸಿ.ವಿ.ರಾಮನ್ ನಗರ ಕ್ಷೇತ್ರದಲ್ಲಿಎಚ್.ಸಿ.ಮಹದೇವಪ್ಪ ಅವರಿಗೆ ಅವಕಾಶ ಮಾಡಿಕೊಡಿ ಎಂದು ಸಿದ್ದರಾಮಯ್ಯ ಹೇಳಿದರು' ಎಂದು ಪಿ.ರಮೇಶ್ ಆರೋಪಿಸಿದ್ದಾರೆ.
'ಕ್ಷೇತ್ರದ ಅಭಿವೃದ್ಧಿಗಾಗಿ ಹಲವಾರು ಕೆಲಸಗಳನ್ನು ಮಾಡಿದ್ದೇನೆ. ಸುಮಾರು 16 ಸಾವಿರ ಜನರಿಗೆ ಕೆಲಸ ಸಿಗುವಂತೆ ಮಾಡಿದ್ದೇನೆ. ಎಸಿ ಕಚೇರಿಗಳಲ್ಲಿ ಕುಳಿತ ನಾಯಕರು ತೀರ್ಮಾನ ತೆಗೆದಕುಕೊಳ್ಳುತ್ತಾರೆ. ಇಂದಿನ ಪರಿಸ್ಥಿತಿ ಹೇಗಿದೆಯೆಂದರೆ ರಾಹುಲ್ ಗಾಂಧಿ ಅವರು ಸಹ ಕಣ್ಣೀರು ಹಾಕಿಕೊಂಡು ಸಿದ್ದರಾಮಯ್ಯ ಹೇಳಿದಂತೆ ಕೇಳಬೇಕು' ಎಂದು ರಮೇಶ್ ದೂರಿದರು.
ಬಿ.ಪ್ರಸನ್ನ ಕುಮಾರ್ ಜೆಡಿಎಸ್ಗೆ?
ಕಾಂಗ್ರೆಸ್ನ ಮತ್ತೊಬ್ಬ ನಾಯಕ ಬಿ.ಪ್ರಸನ್ನ ಕುಮಾರ್ ಅವರು ಜೆಡಿಎಸ್ ಸೇರುವ ಸಾಧ್ಯತೆ ಇದೆ. 2013ರ ಚುನಾವಣೆಯಲ್ಲಿ ಪುಲಿಕೇಶಿ ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿ.ಪ್ರಸನ್ನ ಕುಮಾರ್ 38,769 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದಿದ್ದರು. ಈ ಬಾರಿಯ ಚುನಾವಣೆಯಲ್ಲಿಯೂ ಅವರು ಟಿಕೆಟ್ ಆಕಾಂಕ್ಷಿ.
ಜೆಡಿಎಸ್ ಪಕ್ಷದಲ್ಲಿದ್ದ ಅಖಂಡ ಶ್ರೀನಿವಾಸಮೂರ್ತಿ ಅವರು ಕಾಂಗ್ರೆಸ್ ಸೇರಿದ್ದಾರೆ. ಆದ್ದರಿಂದ, ಅವರಿಗೆ ಟಿಕೆಟ್ ನೀಡಲಾಗುತ್ತದೆ ಎಂಬ ಸುದ್ದಿ ಹಬ್ಬಿದೆ. ಇದರಿಂದಾಗಿ ಪ್ರಸನ್ನ ಕುಮಾರ್ ಅವರಿಗೆ ಟಿಕೆಟ್ ಕೈ ತಪ್ಪಲಿದೆಯೇ? ಎಂಬ ಪ್ರಶ್ನೆ ಎದ್ದಿದೆ. ಪ್ರಸನ್ನ ಕುಮಾರ್ ಅವರನ್ನು ಸೆಳೆಯಲು ಜೆಡಿಎಸ್ ತಂತ್ರ ರೂಪಿಸುತ್ತಿದೆ.
ಸಿ.ವಿ.ರಾಮನ್ ನಗರದ ಚಿತ್ರಣ
ಬೆಂಗಳೂರಿನ ಸಿ.ವಿ.ರಾಮನ್ ಕ್ಷೇತ್ರ ಸದ್ಯ ಬಿಜೆಪಿಯ ವಶದಲ್ಲಿದೆ. ಬಿಜೆಪಿಯ ಎಸ್.ರಾಘು 2013ರ ಚುನಾವಣೆಯಲ್ಲಿ 53,444 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ನ ಪಿ.ರಮೇಶ್ 44,982ಮತಗಳನ್ನು ಪಡೆದಿದ್ದರು. ಜೆಡಿಎಸ್ನ ಜೆ.ಹೇಮಲತಾ ಸುರೇಶ್ ರಾಜ್ 3,179 ಮತಗಳನ್ನು ಪಡೆದಿದ್ದರು.
ಈ ಬಾರಿ ಪಿ.ರಮೇಶ್ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಎಚ್.ಸಿ.ಮಹದೇವಪ್ಪ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ.