ಬೆಂಗಳೂರು: ವಾಸ್ತುದೋಷ ಕಾರಣ, ನೇರಳೆ ಮರದ ಜೀವ ಹರಣ?
ಬೆಂಗಳೂರು, ನವೆಂಬರ್. 04: ಬೆಂಗಳೂರಿನ ಮರಗಳು ಸ್ವಚ್ಛ ಗಾಳಿ ನೀಡುವುದರೊಂದಿಗೆ ಜಾಹೀರಾತು ಫಲಕಗಳಾಗಿ ಕಾರ್ಯ ಮಾಡುತ್ತಿರುವುದನ್ನು ನಾವೆಲ್ಲರೂ ಒಪ್ಪಿಕೊಂಡಿದ್ದೇವೆ. ಯಾವುದೋ ಇಂಟರ್ ನೆಟ್ ಆಫರ್, ಕೆಲಸಕ್ಕೆ ಹುಡುಗರು ಬೇಕಾಗಿದ್ದಾರೆ ಎಂಬ ಫಲಕಗಳನ್ನು ತನ್ನ ಎದೆಯ ಮೇಲೆ ಹೊತ್ತುಕೊಳ್ಳುವ ಮರ ಅದೆಷ್ಟು ಸಂಕಟ ಪಡುತ್ತದೆಯೋ ನಮಗೇನು ಗೊತ್ತು.
ಆದರೆ ಇಲ್ಲೊಬ್ಬ ಪುಣ್ಯಾತ್ಮ ಅದ್ಯಾವ ಜ್ಯೋತಿಷಿ ಮಾತು ಕೇಳಿ ಇಂಥ ಕೆಲಸ ಮಾಡಿದ್ದಾನೆಯೋ ಗೊತ್ತಿಲ್ಲ. ವಾಸ್ತು ದೋಷದ ಕಾರಣ ನೀಡಿ ನೆರಳೆ ಮರಕ್ಕೆ ವಿಷವಿಕ್ಕಿದ್ದಾನೆ. ಸಾವು ಬದುಕಿನ ನಡುವೆ ಹೋರಾಡುತ್ತಿರುವ ಮರವನ್ನು ಸಂರಕ್ಷಿಸಲು ವಿಜಯ್ ನಿಶಾಂತ್ ಎಂಬುವರು ಪಣತೊಟ್ಟಿದ್ದು ತಮ್ಮ ಎಲ್ಲ ಕೆಲಸ ಬದಿಗೊತ್ತಿ ಮರದ ಆರೈಕೆಯಲ್ಲಿ ತೊಡಗಿದ್ದಾರೆ.[ಮರ ಕಡಿದರೆ ಯಾರಿಗೆ ದೂರು ನೀಡಬೇಕು?]
ಬೆಂಗಳೂರಿನ ವಿಜಯನಗರದಲ್ಲಿ ಹಸಿರಾಗಿ ಕಂಗೊಳಿಸುತ್ತಿದ್ದ ನೇರಳೆ ಮರ ತನ್ನಷ್ಟಕ್ಕೆ ತಾನೆ ಒಣಗಿದೆ. ಮರಗಳು ಚಳಿಗಾಲದ ಆರಂಭದಲ್ಲಿ ಎಲೆ ಉದುರಿಸುವುದು ಸಾಮಾನ್ಯ. ಆದರೆ ಮನೆಯ ಮಾಲೀಕರೊಬ್ಬರು ವಾಸ್ತು ದೋಷ ಎಂಬ ಕಾರಣವಿಟ್ಟುಕೊಂಡು ನೇರಳೆ ಮರಕ್ಕೆ ವಿಷ ಪ್ರಾಶನ ಮಾಡಿದ್ದಾರೆ ಎನ್ನಲಾಗಿದೆ.
ಮರ ಒಣಗುತ್ತಿರುವುದನ್ನು ಕಂಡ ಪರಿಸರ ಪ್ರೇಮಿ ವಿಜಯ್ ನಿಶಾಂತ್ ಆರೈಕೆಗೆ ಮುಂದಾಗಿದ್ದಾರೆ. ಬರಗಾಲದಿಂದ ಮಾನವನನ್ನು ಕಾಪಾಡಿ, ಸ್ವಚ್ಛ ಗಾಳಿ ನೀಡುವ ಗಿಡ ಮರಗಳಿಗೆ ಬಂದ ಸಂಕಷ್ಟ ನೋಡಿ ಮರುಗದೆ ಇರಲು ಸಾಧ್ಯವೇಇಲ್ಲ.[ಈ ಮರ ಕಡಿಯುವುದೋ? ಬಿಡುವುದೋ? ನೀವೇ ಹೇಳಿ]
ಸಾಮಾಜಿಕ ಜಾಲತಾಣ ಫೇಸ್ ಬುಕ್ ನ ಫ್ರೆಂಡ್ಸ್ ಆಫ್ ವೈಲ್ಡ್ ಲೈಫ್ ಪೇಜ್ ನಲ್ಲಿ ಈ ಬಗ್ಗೆ ಅಪ್ ಡೇಟ್ ಮಾಡಲಾಗಿದೆ. ಇಂಥ ಅಂಶಗಳನ್ನು ಅರಣ್ಯ ಇಲಾಖೆ ಮತ್ತು ಬಿವಿಎಂಪಿ ಗಂಭೀರವಾಗಿ ತೆಗೆದುಕೊಂಡು ನಿಜ ಅಪರಾಧಿಗಳಿಗೆ ತಕ್ಕ ಶಿಕ್ಷೆ ನೀಡಬೇಕಿದೆ.[ಬೆಂಗಾಡಾಗಲಿದೆ ಬೆಂಗಳೂರು]