ಬಿಜೆಪಿ ಸಖ್ಯ ಇಲ್ಲ, ಕಾಂಗ್ರೆಸ್ಸಿಗೆ ಅಡ್ಡಿ ಇಲ್ಲ-ದೇವೇಗೌಡ
ಬೆಂಗಳೂರು, ಸೆ.01: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮೇಯರ್ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇತ್ತ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮ್ಯಾಜಿಕ್ ನಂಬರ್ ಲೆಕ್ಕಾಚಾರದಲ್ಲಿ ತೊಡಗಿವೆ. ಜೆಡಿಎಸ್ ಕಾರ್ಪೊರೇಟರ್ ಗಳು ಕೊಚ್ಚಿಯಲ್ಲಿ 'ಸೇಫ್' ಆಗಿದ್ದಾರೆ. ಈ ಎಲ್ಲಾ ಬೆಳವಣಿಗೆ ಬಗ್ಗೆ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಮಂಗಳವಾರ ಮಧ್ಯಾಹ್ನ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
"ಬೆಂಗಳೂರಿನಲ್ಲಿದ್ದರೆ ಕಾರ್ಪೊರೇಟರ್ ಗಳು ಸೇಫ್ ಅಲ್ಲ, ಹೊರವಲಯದಲ್ಲಿ ನೆಲೆಸುವಂತೆ ಸೂಚಿಸಿದ್ದೆ. ಜೆಡಿಎಸ್ ಕಾರ್ಪೊರೇಟರ್ ಗಳು ಕೇರಳದ ರೆಸಾರ್ಟ್ ಗೆ ಹೋಗಿರುವುದು ಗೊತ್ತಿಲ್ಲ. ಅವರನ್ನು ಕರೆಸಿಕೊಳ್ಳುವುದು ಜೆಡಿಎಸ್ ಅಧ್ಯಕ್ಷ ಕುಮಾರಸ್ವಾಮಿ ಅವರ ಜವಾಬ್ದಾರಿ" ಎಂದು ಎಚ್ ಡಿ ದೇವೇಗೌಡ ಅವರು ಹೇಳಿದರು.[ಕಾಂಗ್ರೆಸ್ ಜೊತೆ 'ಕೈ' ಜೋಡಿಸಲು ಸಿದ್ಧ ಅಂದ್ರು ಎಚ್ಡಿಕೆ]
6 ಶಾಸಕರನ್ನು ಸೆಳೆಯಲು ಬಿಜೆಪಿ ನಾಯಕರು ತಂತ್ರ ರೂಪಿಸಿದ್ದರ ಬಗ್ಗೆ ಜೆಡಿಎಸ್ ಶಾಸಕರು ನನಗೆ ವಿಷಯ ತಿಳಿಸಿದರು. ಹೀಗಾಗಿ ನಮ್ಮ ಕಾರ್ಪೊರೇಟರ್ ಗಳನ್ನು ಸೇಫ್ ಮಾಡುವ ಉದ್ದೇಶದಿಂದ ನಗರದ ಹೊರವಲಯದಲ್ಲಿ ನೆಲೆಸುವಂತೆ ಸೂಚಿಸಿದ್ದೆ ಎಂದು ದೇವೇಗೌಡ ಅವರು ಕಾರ್ಪೊರೇಟರ್ ಗಳ ಕೊಚ್ಚಿ ಪ್ರವಾಸವನ್ನು ಸಮರ್ಥಿಸಿಕೊಂಡರು.
'ಹಿಂದೆ ಐದು ವರ್ಷ ಬಿಬಿಎಂಪಿಯಲ್ಲಿ ಆಡಳಿತ ನಡೆಸಿದ ಬಿಜೆಪಿಯ ದುರಾಡಳಿತ ಹಾಗೂ ಭ್ರಷ್ಟಾಚಾರದಿಂದಾಗಿ ನಗರದ ಅಭಿವೃದ್ಧಿ ಆಗಿಲ್ಲ. ಬಿಬಿಎಂಪಿಯ ಮೇಲೆ 9,600 ಕೋಟಿ ರೂ.ಗಳ ಸಾಲ ಹೆಚ್ಚಲು ಬಿಜೆಪಿಯ ದುರಾಡಳಿತವೇ ಕಾರಣ' ಎಂದು ಕುಮಾರಸ್ವಾಮಿ ಅವರು ಆರೋಪಿಸಿದ್ದಾರೆ.
ಮೇಯರ್ ಚುನಾವಣೆಯಲ್ಲಿ ಮತದಾನದ ಅಧಿಕಾರ ಹೊಂದಿದ ಪಾಲಿಕೇತರ ಸದಸ್ಯರ ಪಟ್ಟಿಯನ್ನು ಬಿಬಿಎಂಪಿ ಸಿದ್ಧಪಡಿಸಿದೆ. ಪಟ್ಟಿಯಂತೆ ಪಾಲಿಕೇತರ 62 ಸದಸ್ಯರು ಮತದಾನದ ಅವಕಾಶ ಪಡೆದಿದ್ದಾರೆ. ಒಟ್ಟು 260 ಸದಸ್ಯರು ಮತದಾನದ ಅವಕಾಶ ಪಡೆದಿದ್ದು ಬಹುಮತಕ್ಕೆ 131 ಮತಗಳ ಅಗತ್ಯವಿದೆ.
ಬಿಜೆಪಿ ಮತ್ತು ಪಕ್ಷೇತರ ಸದಸ್ಯರು ಸೇರಿದರೆ 127 ಸ್ಥಾನಗಳಾಗುತ್ತದೆ. ಕಾಂಗ್ರೆಸ್ ಮತ್ತು ಜೆಡಿಎಸ್, ಪಕ್ಷೇತರ ಮೈತ್ರಿಕೂಟ ಸೇರಿದರೆ 133 ಮತಗಳಾಗುತ್ತದೆ. ಬಹುಮತಕ್ಕೆ 131 ಮ್ಯಾಜಿಕ್ ನಂಬರ್ ಆಗಿದೆ.