ಬಳ್ಳಾರಿ ವಿಮ್ಸ್ ದುರಂತ; 8 ವರ್ಷದ ಬಾಲಕನ ಸಾವಿನ ವಿಡಿಯೋ ವೈರಲ್
ಬಳ್ಳಾರಿ, ಸೆಪ್ಟೆಂಬರ್, 16: ಬಡವರ ಪಾಲಿಗೆ ಸಂಜೀವಿನಿ ಆಗಬೇಕಾದ ಬಳ್ಳಾರಿ ವಿಮ್ಸ್ ಆಸ್ಪತ್ರೆ ಇದೀಗ ನರಕವಾಗುತ್ತಿದೆ. ವೆಂಟಿಲೇಟರ್ಗೆ ವಿದ್ಯುತ್ ಸರಬರಾಜು ಅಭಾವದಿಂದ ಮೃತಪಟ್ಟವರ ಒಂದೊಂದೇ ವಿಡಿಯೋಗಳು ವೈರಲ್ ಆಗುತ್ತಿವೆ. ಇದರ ಮಧ್ಯೆ ಇಂದು ಕೂಡ ನಿಖಿಲ್ ಎಂಬ 8 ವರ್ಷದ ಬಾಲಕನ ಸಾವಿನ ವಿಡಿಯೋ ವೈರಲ್ ಆಗಿದೆ.
ಮತ್ತೊಂದೆಡೆ ಹೆರಿಗೆ ಬಳಿಕ ಮಗು ಸಮೇತ ಮಹಿಳೆ ಮೃತ ಪಟ್ಟಿರುವುದು ಕೂಡ ವಿದ್ಯುತ್ ಸಂಪರ್ಕ ಸ್ಥಗಿತದಿಂದ ಎನ್ನುವ ಆರೋಪ ಕೇಳಿ ಬರುತ್ತಿವೆ. ಇನ್ನು ತನಿಖಾ ಸಮಿತಿ ಇಂದು ಆಸ್ಪತ್ರೆಗೆ ಭೇಟಿ ನೀಡಿ ಘಟನೆಯ ಮಾಹಿತಿ ಪಡೆದುಕೊಂಡಿದೆ. ಗಣಿನಾಡು ಬಳ್ಳಾರಿಯ ವಿಮ್ಸ್ನಲ್ಲಿ ವಿದ್ಯುತ್ ಸ್ಥಗಿತಗೊಂಡ ಪರಿಣಾಮ ವೆಂಟಿಲೇಟರ್ ನಿಂತು ಹೋಗಿದೆ. ಇದರಿಂದ ಸಾವನ್ನಪ್ಪಿದವರ ಸಂಖ್ಯೆ 6ಕ್ಕೇರಿದೆ.
ವೈದ್ಯರ ನಿರ್ಲಕ್ಷ್ಯದಿಂದ ಬಾಲಕ ಸಾವು
ಸೆಪ್ಟೆಂಬರ್ 14ರಂದೇ ಡೆಂಗ್ಯೂನಿಂದ ಬಳಲುತ್ತಿದ್ದ ಸಿರಗುಪ್ಪದ 8 ವರ್ಷದ ನಿಖಿಲ್ ಮೃತಪಟ್ಟಿರುವ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ನಿಖಿಲ್ ಪೋಷಕರು ನೇರವಾಗಿ ವಿಮ್ಸ್ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ. ವಿದ್ಯುತ್ ಸ್ಥಗಿತಗೊಂಡ ಕೆಲವೇ ಹೊತ್ತಿನಲ್ಲಿ ಮಗನ ಸಾವಾಗಿದೆ ಎಂದು ಆರೋಪ ಮಾಡಿದ್ದಾರೆ.

ಬಾಲಕ ಮೃತಪಟ್ಟಿರುವ ವಿಡಿಯೋ ವೈರಲ್
ಇದರ ಮಧ್ಯೆ ವೈರಲ್ ಆಗಿರುವ ವಿಡಿಯೋದಲ್ಲಿ ನಿಖಿಲ್ ಪೋಷಕರೇ ಬಲೂನ್ ಸಹಾಯದಿಂದ ಕೃತಕ ಉಸಿರಾಟವನ್ನು ನೀಡುತ್ತಿರುವ ದೃಶ್ಯಗಳು ಇವೆ. ಇದು ವಿಮ್ಸ್ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿ ಆಗಿದೆ. ಈ ನಡುವೆ ಬಳ್ಳಾರಿ ತಾಲೂಕಿನ ಅಸುಂಡಿ ಗ್ರಾಮದ ಜ್ಯೋತಿ ಎನ್ನುವ ಹೆಸರಿನ ಗರ್ಭಿಣಿ ಮಹಿಳೆ ಹೆರಿಗೆ ವೇಳೆ ನವಜಾತ ಶಿಶು ಜೊತೆ ಮೃತ ಪಟ್ಟಿದ್ದಾರೆ. ವಿದ್ಯುತ್ ಸ್ಥಗಿತ ಆದಾಗ ಈ ದುರಂತ ಸಂಭವಿಸಿದೆ ಎಂದು ಪೋಷಕರು ಆರೋಪ ಮಾಡಿದ್ದಾರೆ. ಇನ್ನು ಈಗಾಗಲೇ ಸೆಪ್ಟೆಂಬರ್ 14ರಿಂದ ಇಂದಿನವರೆಗೂ 6 ಜನ ಸಾವನ್ನಪ್ಪಿದ್ದಾರೆ.
ಸಾವುಗಳ ತನಿಖೆಗೆ ಅಧಿಕಾರಿಗಳ ನೇಮಕ
ಮತ್ತೆ ಇಂದು ಬೆಳಗ್ಗೆ ಈ ಸಾವುಗಳ ತನಿಖೆಗೆ ಸರ್ಕಾರ ಅಧಿಕಾರಿಗಳನ್ನು ನೇಮಕ ಮಾಡಿತ್ತು. ಡಾ.ಸ್ಮಿತಾ ನೇತೃತ್ವದ ಐದು ಜನರ ತಂಡ ವಿಮ್ಸ್ಗೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿತ್ತು. ಈ ವೇಳೆ ಡೈರೆಕ್ಟರ್ ಗಂಗಾಧರಗೌಡ ಕ್ಯಾಬಿನ್ಗೆ ತೆರಳಿದ ತಂಡ ಅವರಿಂದ ಮಾಹಿತಿ ಕಲೆಹಾಕಿದೆ. ಹಾಗೆಯೇ ಐಸಿಯು ವಾರ್ಡ್ಗೆ ವಿದ್ಯುತ್ ಸಂಪರ್ಕ ಆಗಿರುವುದನ್ನೂ ಪರಿಶೀಲನೆ ನಡೆಸಿದರು. ನಂತರ ಐಸಿಯು ವಾರ್ಡ್ಗೆ ಭೇಟಿ ನೀಡಿ ಸಮಗ್ರವಾಗಿ ಪರಿಶೀಲನೆ ನಡೆಸಿತು. ಇದರ ನಡುವೆ ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ರಾಜೇಶ್ವರಿ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರು ವಿಮ್ಸ್ಗೆ ಭೇಟಿ ನೀಡಿ ಡೈರೆಕ್ಟರ್ ಗಂಗಾಧರಗೌಡ ಅವರ ವಿರುದ್ದ ಆಕ್ರೋಶ ಹೊರಹಾಕಿದರು. ಬಡಜನರ ಪಾಲಿನ ಸಂಜೀವಿನಿ ಆಗಬೇಕಿದ್ದ ವಿಮ್ಸ್, ಇದೀಗ ಅವರ ಪಾಲಿಗೆ ನರಕವಾಗುತ್ತಿರುವುದು ಜನರ ನಿದ್ದೆಗೆಡಿಸಿದೆ. ವಿಮ್ಸ್ನಲ್ಲಿ ನಡೆದ ಘನಘೋರ ದುರಂತದ ಬಗ್ಗೆ ಸಮಗ್ರ ತನಿಖೆ ನಡೆಯುತ್ತಿದ್ದು, ತನಿಖೆ ಬಳಿಕ ವಿಮ್ಸ್ ಆಡಳಿತ ಮಂಡಳಿ ನಿರ್ಲಕ್ಷ್ಯದ ಬಗ್ಗೆ ಇಂಚಿಂಚು ಮಾಹಿತಿ ಹೊರಬೀಳಲಿದೆ.
ಮೃತಪಟ್ಟ ರೋಗಿಗಳ ಕುಟುಂಬಗಳಿಗೆ ಪರಿಹಾರ
ವಿದ್ಯುತ್ ವ್ಯತ್ಯಯ ಉಂಟಾಗಿ ಆಕ್ಸಿಜನ್ ಪೂರೈಕೆ ಆಗದೇ ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಮೃತಪಟ್ಟ ಮೂವರು ರೋಗಿಗಳ ಕುಟುಂಬಕ್ಕೆ ಕರ್ನಾಟಕ ಸರ್ಕಾರ ತಲಾ 5 ಲಕ್ಷ ರೂ ಪರಿಹಾರ ಘೋಷಣೆ ಮಾಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದರು. ಬುಧವಾರ ವಿಮ್ಸ್ನಲ್ಲಿ ವಿದ್ಯುತ್ ಕೈಕೊಟ್ಟು, ಆಮ್ಲಜನಕ ಪೂರೈಕೆ ಆಗದೇ ತೀವ್ರ ನಿಗಾ ಘಟಕದಲ್ಲಿದ್ದ ಮೂವರು ರೋಗಿಗಳು ಮೃತಪಟ್ಟಿದ್ದರು. ಈ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ಭಾರಿ ವೈರಲ್ ಆಗಿತ್ತು. ನಂತರ ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ವಿಮ್ಸ್ ನಿರ್ದೇಶಕ ಗಂಗಾಧರ ಗೌಡ, ವಿದ್ಯುತ್ ಕೈಕೊಟ್ಟಿದ್ದರಿಂದ ರೋಗಿಗಳು ಸಾವನ್ನಪ್ಪಿಲ್ಲ, ವಿಮ್ಸ್ ಆಸ್ಪತ್ರೆಯಲ್ಲಿ ಆಗಿರುವ ಸಾವುಗಳು ವಿವಿಧ ತೀವ್ರತರದ ಆರೋಗ್ಯ ಸಮಸ್ಯೆಗಳಿಂದ ಸಂಭವಿಸಿವೆ ಎಂದಿದ್ದರು.












Click it and Unblock the Notifications