ಬಿರು ಬಿಸಿಲು, ಕೊರೊನಾ ಮಾರ್ಗಸೂಚಿ ಲೆಕ್ಕಕ್ಕಿಲ್ಲ: ಹಂಪಿಯಲ್ಲಿ ಜನವೋ ಜನ
ವಿಜಯನಗರ, ಏಪ್ರಿಲ್ 5: ಭಾನುವಾರ ರಜೆ ದಿನವಾಗಿದ್ದರಿಂದ ಕೊರೊನಾ ಕಠಿಣ ಮಾರ್ಗಸೂಚಿಗಳನ್ನು ಲೆಕ್ಕಿಸದೇ ಪ್ರವಾಸಿಗರು ವಿಶ್ವವಿಖ್ಯಾತ ಪ್ರವಾಸಿ ತಾಣ ಹಂಪಿಗೆ ಆಗಮಿಸಿದ್ದರು.
ರಾಜ್ಯದಲ್ಲಿ ಮತ್ತೆ ಕೊರೊನಾ ವೈರಸ್ 2ನೇ ಅಲೆ ಕಾಣಿಸಿಕೊಂಡಿದ್ದು, ಸೋಂಕು ಹರಡದಂತೆ ತಡೆಯಲು ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಬಿಡುಗಡೆಡ ಮಾಡಿದೆ. ಒಂದೇ ಕಡೆ ಹೆಚ್ಚು ಜನರು ಸೇರದಂತೆ ಸೂಚಿಸಿದ್ದರೂ, ಹಂಪಿಯಲ್ಲಿ ಜನಸಾಗರ ನೆರೆದಿತ್ತು.
ಕೊರೊನಾ ಸೋಂಕು ಹರಡುವುದನ್ನು ಲೆಕ್ಕಿಸದೇ, ಸಾಮಾಜಿಕ ಅಂತರವಿಲ್ಲದೆ, ಬಿರು ಬಿಸಿಲಿನ ನಡುವೆಯೂ ಪ್ರವಾಸಿ ತಾಣ ಹಂಪಿಗೆ ಪ್ರವಾಸಿಗರು ಆಗಮಿಸಿದ್ದರು.
ಪ್ರವಾಸಿಗರು ತಮ್ಮ ಕುಟುಂಬಗಳೊಂದಿಗೆ ಹಂಪಿಯ ಮನಮೋಹಕ ಸ್ಮಾರಕಗಳನ್ನು ಕಣ್ತುಂಬಿಕೊಂಡರು. ತೇರು ಬೀದಿ, ಕಲ್ಲಿನ ರಥ, ಸಾಸಿವೆ ಕಾಳು ಗಣೇಶ್, ಬಡವಿ ಲಿಂಗ ದೇವಸ್ಥಾನ, ಹಂಪಿ ವಿರೂಪಾಕ್ಷ ದೇವಾಲಯ, ವಿಜಯ ವಿಠ್ಠಲ ದೇವಸ್ಥಾನ ಹೀಗೆ ಹಲವು ದೇವಸ್ಥಾನ ಮತ್ತು ಸ್ಮಾರಕಗಳನ್ನು ನೋಡಿಕೊಂಡು ಹೋದರು
ವೀಕೆಂಡ್ ಆಗಿರುವ ಕಾರಣ ಹೆಚ್ಚಿನ ಜನರು ಹಂಪಿಗೆ ಆಗಮಿಸುತ್ತಿದ್ದು, ಕೊರೊನಾ ನಿಯಮಗಳನ್ನು ಗಾಳಿಗೆ ತೂರಲಾಗಿದ್ದು, ಇದರಿಂದ ಸ್ಥಳೀಯ ಜನರಲ್ಲಿ ಕೊರೊನಾ ಆತಂಕ ಮನೆ ಮಾಡಿದೆ.