T Narasipura Accident: ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂಪಾಯಿಗಳ ಚೆಕ್ ವಿತರಣೆ
ಬಳ್ಳಾರಿ, ಜುಲೈ, 13: ಕಳೆದ ತಿಂಗಳು ಹೊಸಪೇಟೆಯ ವಡ್ಡರಹಳ್ಳಿ ಬ್ರಿಡ್ಜ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ಮೃತರಾದ ಬಳ್ಳಾರಿಯ ಕೌಲ್ ಬಜಾರ್ ಮತ್ತು ನಗರ ವ್ಯಾಪ್ತಿಯ ಮೃತರ ಕುಟುಂಬಗಳಿಗೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಮತ್ತು ಯುವಜನ ಸಬಲೀಕರಣ, ಕ್ರೀಡಾ ಇಲಾಖೆ ಹಾಗೂ ಬಳ್ಳಾರಿ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಪರಿಹಾರದ ಚೆಕ್ ವಿತರಣೆ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದಂತೆ ಸಿಎಂ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂಪಾಯಿಗಳ ಚೆಕ್ ವಿತರಿಸಲಾಯಿತು. ಅಪಘಾತದಲ್ಲಿ ಒಟ್ಟು 9 ಜನ ಮೃತರಾಗಿದ್ದು, ಈ ಪೈಕಿ ಕೌಲ್ ಬಜಾರ್ ವ್ಯಾಪ್ತಿಯ 7 ಜನರು ಮೃತರಾಗಿದ್ದರು. ಸದ್ಯ 7 ಜನರಿಗೆ ಮಾತ್ರ ಚೆಕ್ ವಿತರಣೆ ಮಾಡಲಾಗಿದೆ. ಇನ್ನುಳಿದ ಇಬ್ಬರ ಕುಟುಂಬಗಳಿಗೆ ಶೀಘ್ರದಲ್ಲೇ ಶಾಸಕ ನಾರಾ ಭರತ್ ರೆಡ್ಡಿ ಚೆಕ್ ವಿತರಿಸುವರು ಎಂದು ಸಚಿವ ಬಿ.ನಾಗೇಂದ್ರ ತಿಳಿಸಿದರು. ಇದೇ ವೇಳೆ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಅಪಾರ ಜಿಲ್ಲಾಧಿಕಾರಿ ಹಾಗೂ ಬಳ್ಳಾರಿ ತಹಶೀಲ್ದಾರ್, ಕಾಂಗ್ರೆಸ್ ಮುಖಂಡ ಬಿ.ವೆಂಕಟೇಶ್ ಪ್ರಸಾದ್, ಮೇಯರ್ ಡಿ.ತ್ರಿವೇಣಿ, ಉಪ ಮೇಯರ್ ಶ್ರೀಮತಿ ಜಾನಕಮ್ಮ, ಮಾಜಿ ಮೇಯರ್ ಶ್ರೀಮತಿ ರಾಜೇಶ್ವರಿ ಸುಬ್ಬರಾಯ್ಡು, ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಸುಕ್ಕುಂ, ನಾಜು, ಎನ್.ಎಂ.ಡಿ ಆಸೀಫ್ ಭಾಷಾ ಇದ್ದರು.
ಜೊತೆಗೆ ಈ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡರು ಅಯಾಜ್, ರಿಯಾಜ್, ಅಲ್ಲಭಕಾಷ್, ಕೆ.ಹೊನ್ನಪ್ಪ, ನಾಗಲಕೆರೆ ಗೋವಿಂದ, ಗುಜರಿ ಬಸವರಾಜ್, ಮುದ್ದಿ ಮಲ್ಲಯ್ಯ, ಜರಾಲ್ಡ್ ಜೆರ್ರಿ, ಚಿನ್ನ, ಹಗರಿ ಗೋವಿಂದ ಸೇರಿದಂತೆ ಹಲವರು ಹಾಜರಿದ್ದರು.
ಸಾಮೂಹಿಕ ಅಂತ್ಯಕ್ರಿಯೆ
ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಕುರುಬೂರು ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಸಂಗನಕಲ್ಲು ಗ್ರಾಮದ 9 ಜನರ ಮೃತದೇಹಗಳನ್ನು ಮೇ 30ರಂದು ಸಾಮೂಹಿಕವಾಗಿ ಅಂತ್ಯಕ್ರಿಯೆ ನಡೆಸಲಾಗಿತ್ತು.
ಸಂಗನಕಲ್ಲು ಗ್ರಾಮದ ವೀರಶೈವ ರುದ್ರಭೂಮಿಯಲ್ಲಿ ವೀರಶೈವ ವಿಧಿವಿಧಾನಗಳಿಂದ ಒಂದೇ ಸಾಲಿನಲ್ಲಿ ಗುಂಡಿಗಳನ್ನು ಅಗೆದು, ಏಕಕಾಲದಲ್ಲಿ ಮೃತದೇಹಗಳನ್ನು ಮಣ್ಣು ಮಾಡಲಾಗಿತ್ತು. ಮೈಸೂರಿನಿಂದ ನಾಲ್ಕು ಆಂಬ್ಯುಲೆನ್ಸ್ಗಳಲ್ಲಿ 9 ಜನರ ಮೃತದೇಹಗಳನ್ನು ತರಲಾಯಿತು. ಮೃತದೇಹಗಳನ್ನು ಕೆಲಹೊತ್ತು ಮನೆ ಅಂಗಳದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಯಿತು. ಈ ವೇಳೆ ಕೆಲವರು ಹೂಮಾಲೆ ಹಾಕಿ ನಮಸ್ಕರಿಸಿ ಅಂತಿಮ ದರ್ಶನ ಪಡೆದಿದ್ದರು.
ಆಂಬ್ಯುಲೆನ್ಸ್ಗಳಲ್ಲಿ ಮೃತದೇಹಗಳನ್ನು ಸಮೀಪದ ವೀರಶೈವ ರುದ್ರಭೂಮಿಗೆ ತಂದು ಸಾಮೂಹಿಕವಾಗಿ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಕೊನೆಗೆ ಸಾರ್ವಜನಿಕರು ಮಣ್ಣು ನೀಡಿದ ಬಳಿಕ ಜೆಸಿಬಿ ಯಂತ್ರದಿಂದ ಕುಣಿಗಳನ್ನು ಮುಚ್ಚಲಾಗಿತ್ತು. ಸ್ಥಳಕ್ಕೆ ಮಾಜಿ ಸಚಿವ ಬಿ.ಶ್ರೀರಾಮುಲು, ಸಚಿವ ಬಿ.ನಾಗೇಂದ್ರ ಅವರ ಸಹೋದರ ಬಿ.ವೆಂಕಟೇಶ್ ಪ್ರಸಾದ್, ಡಿಸಿ ಪವನ್ ಕುಮಾರ್ ಮಾಲಪಾಟಿ, ಎಡಿಸಿ ಮೊಹಮ್ಮದ್ ಝುಬೇರಾ, ಡಿಹೆಚ್ಒ ಹೆಚ್.ಎಲ್.ಜನಾರ್ಧನ ಸೇರಿ ಹಲವರು ಆಗಮಿಸಿದ್ದರು. ಅಲ್ಲದೆ ಅಂತ್ಯಕ್ರಿಯೆ ನೆರವೇರಿಸಲು ಅನುವು ಮಾಡಿಕೊಟ್ಟಿದ್ದರು.












Click it and Unblock the Notifications