ಬಳ್ಳಾರಿ ವರಮಹಾಲಕ್ಷ್ಮಿ ಹಬ್ಬದ ಮುತ್ತೈದೆ ಸುಷ್ಮಾ ಸ್ವರಾಜ್ ನೆನಪು
Recommended Video
1999ರಲ್ಲಿ ಬಳ್ಳಾರಿ ಲೋಕಸಭೆ ಚುನಾವಣೆಯಲ್ಲಿ ಸುಷ್ಮಾ ಸ್ವರಾಜ್ ಸೋಲು ಕಂಡರೂ ಬಿಸಿಲು ನಾಡು ಬಳ್ಳಾರಿ ಜನತೆ ಹೃದಯ ಗೆದ್ದರು. ಶ್ರೀರಾಮುಲು, ಗಾಲಿ ಜನಾರ್ದನ ರೆಡ್ಡಿ ಕುಟುಂಬದೊಡನೆ ಬಾಂಧವ್ಯ ಉಳಿಸಿಕೊಂಡರು. ಬಳ್ಳಾರಿಯ ಮನೆ ಮಗಳು, ಸೊಸೆ, ವರಮಹಾಲಕ್ಷ್ಮಿ ಹಬ್ಬದ ಮುತ್ತೈದೆಯಾಗಿ ಜನ ಮಾನಸದಲ್ಲಿ ಉಳಿದಿದ್ದಾರೆ.
ಮಾಜಿ ವಿದೇಶಾಂಗ ಸಚಿವೆ, ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್(67) ಅವರು ಮಂಗಳವಾರ(ಆಗಸ್ಟ್ 06) ರಾತ್ರಿ ಏಮ್ಸ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಶುಕ್ರವಾರದಂದು ಮತ್ತೊಮ್ಮೆ ವರಮಹಾಲಕ್ಷ್ಮಿಕ್ಕೆ ಬಳ್ಳಾರಿ ಅಣಿಯಾಗುತ್ತಿದೆ. ಆದರೆ, ಪ್ರತಿ ವರ್ಷ ತಪ್ಪದೇ ಬರುತ್ತಿದ್ದ ನಗುಮೊಗದ ಸಾತ್ವಿಕ ಕಳೆಯ ಮುತ್ತೈದೆ ಸುಷ್ಮಾ ಅವರು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.
ಸುಷ್ಮಾ ಸ್ವರಾಜ್ ನೆನಪು ಹಸಿರಾಗಿಸುವ ಸುಂದರ ಚಿತ್ರಗಳು
"ಕೊಟ್ಟ ಮಾತನ್ನು ಆ ತಾಯಿ ತಪ್ಪಲಿಲ್ಲ, ನೀವು ಹಬ್ಬದ ಸಂದರ್ಭದಲ್ಲಿ ಕೊಟ್ಟಿರುವ ಅರಿಶಿನ ಕುಂಕುಮವನ್ನು ಕಾಯ್ದುಕೊಳ್ಳುತ್ತೇನೆ, ಪ್ರತಿ ವರ್ಷ ಬಂದು ಹೋಗುತ್ತೇನೆ ಎಂದು ಮಾತು ಕೊಟ್ಟರು". 13 ವರ್ಷ ಬಂದು ನಮ್ಮ ಜೊತೆ ಪೂಜೆಯಲ್ಲಿ ಪಾಲ್ಗೊಂಡರು. ಎಂದು ಪ್ರೀತಿ ಕೊಟ್ಟ ತಾಯಿ ಸುಷ್ಮಾ ಅಗಲಿಕೆ ನೋವಲ್ಲಿ ಗಾಲಿ ಜನಾರ್ದನ ರೆಡ್ಡಿ ಅವರು ಕೂಡಾ ಸಂತಾಪದ ನಡುವೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದ ಬಗ್ಗೆ ಹಂಚಿಕೊಂಡಿದ್ದಾರೆ.
ಬಳ್ಳಾರಿಯಲ್ಲಿ 1999ರ ಚುನಾವಣೆಯಲ್ಲಿ ದೇಶಿ ವಿರುದ್ಧ ವಿದೇಶಿ ಯುದ್ಧ ಎಂದೇ ಬಿಂಬಿತವಾಗಿತ್ತು. ಗೆಲುವು ಕಂಡ ಸೋನಿಯಾ ಬಳ್ಳಾರಿ ಕಡೆ ಬಂದಿದ್ದು ವಿರಳ, ಸರಳ ಸ್ವಭಾವದ ಸುಷ್ಮಾ ಬಳ್ಳಾರಿಯನ್ನು ಎರಡನೇ ತವರು ಮನೆ ಮಾಡಿಕೊಂಡು ಎಲ್ಲವನ್ನು ರಾಜಕೀಯ ಕಣ್ಣಿನಿಂದ ನೋಡುವವರಿಗೆ ಅಚ್ಚರಿ ಮೂಡಿಸಿದರು. ಸಂಬಂಧ, ಬಾಂಧವ್ಯದ ಪಾಠ ಮಾಡಿದರು.

ಈ ಬಾರಿಯ ಹಬ್ಬಕ್ಕೆ ಸೂತಕದ ಛಾಯೆ ತಟ್ಟಿದೆ.
ಪ್ರತಿ ವರ್ಷದ ವರಮಹಾಲಕ್ಷ್ಮಿ ಪೂಜೆಗೆ ಆಗಮಿಸಿ, ಡಾ. ಬಿ.ಕೆ. ಶ್ರೀನಿವಾಸಮೂರ್ತಿ, ಸುಂದರ್ ಅವರ ಮನೆಯಲ್ಲಿ ಸಾಂಗವಾಗಿ ಪೂಜೆ ಸಲ್ಲಿಸಿ ನಂತರ ಬಿ. ಶ್ರೀರಾಮುಲು ನೇತೃತ್ವದಲ್ಲಿ ಏರ್ಪಡಿಸುವ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡು ನವದಂಪತಿಗಳಿಗೆ ಆಶೀರ್ವದಿಸುತ್ತಿದ್ದರು. ಸುಷ್ಮಾ ಸ್ವರಾಜ್ ಅಮ್ಮ ಅವರು ವರ್ಷಕ್ಕೊಮ್ಮೆ ಬಳ್ಳಾರಿಗೆ ಭೇಟಿ ನೀಡಿ ಕಾರ್ಯಕರ್ತರಲ್ಲಿ ಶಕ್ತಿ, ಸ್ಪೂರ್ತಿ ತುಂಬುತ್ತಿದ್ದರು. ಕೊಟ್ಟ ಮಾತಿಗೆ ತಪ್ಪದೇ ನಡೆಯುತ್ತಿದ್ದರು. ಸತತ 12 ವರ್ಷಗಳ ಕಾಲ ತಪ್ಪದೇ ಪೂಜೆಗೆ ಆಗಮಿಸುತ್ತಿದ್ದರು. 13ನೇ ವರ್ಷ ಅವರ ಮನೆಯಲ್ಲಿ ಆಪ್ತರೊಬ್ಬರು ತೀರಿಕೊಂಡಿದ್ದರಿಂದ ಸೂತಕದ ಕಾರಣ ವ್ರತದಲ್ಲಿ ಪಾಲ್ಗೊಂಡಿರಲಿಲ್ಲ. ಆನಂತರ ಕಾರಣಾಂತರಗಳಿಂದ ಬಳ್ಳಾರಿಯಲ್ಲಿ ಹಬ್ಬಕ್ಕೆ ಬರಲಾಗಲಿಲ್ಲ. ಇಂದು ಈ ಬಾರಿಯ ಹಬ್ಬಕ್ಕೆ ಸೂತಕದ ಛಾಯೆ ತಟ್ಟಿದೆ.

ಶಕ್ತಿಯಾಗಿದ್ದ ಮುತ್ತೈದೆ ಮುನಿಸಿಕೊಂಡಿದ್ದಾಳೆ
ಯಾರಿಟ್ಟ ಶಾಪವೋ ಏನೋ ಮನೆ ಮಗಳು ಸುಷ್ಮಾ ಅವರು ಬಳ್ಳಾರಿಗೆ ಪಾದ ಬೆಳೆಸದಂತಾಗಿದೆ. ಶಾಂತಾ ಹಾಗೂ ಶೋಭಾ ಅವರ ನಡುವೆ ರಾಜಿಗೆ ಕಾರಣವಾಗಿದ್ದ, ರೆಡ್ಡಿ ಸೋದರ ಏಳಿಗೆಯ ಶಕ್ತಿಯಾಗಿದ್ದ ಮುತ್ತೈದೆ ಮುನಿಸಿಕೊಂಡಿದ್ದಾಳೆ.ಶ್ರಾವಣ ಮಾಸದ ನವಮಿ ಶುಕ್ರವಾರದ ಶುಭ ದಿನ ಎಂದಿನಂತೆ ಕಳೆದ ಕೆಲವು ವರ್ಷಗಳಿಂದ ನಡೆದಿಲ್ಲ. ಸುಷ್ಮಾ ಅವರಿಗೂ ಆರೋಗ್ಯದಲ್ಲಿ ತೀವ್ರ ಏರುಪೇರಾಯಿತು, ಕಿಡ್ನಿ ವೈಫಲ್ಯದಿಂದ ಸಾವಿನ ಮನೆ ಕದ ತಟ್ಟಿ ಬಂದರು. ಗಾಲಿ ರೆಡ್ಡಿ ಜೈಲುವಾಸ ಅನುಭವಿಸಿ ಬಂದರೂ ಹುಟ್ಟೂರಿಗೆ ಕಾಲಿಡಲು ಆಗದಂಥ ಸ್ಥಿತಿ, ಶ್ರೀರಾಮುಲು ಸ್ವಂತ ಪಕ್ಷ ಏಳಿಗೆ ಕಾಣಲಿಲ್ಲ, ಆರಕ್ಕೇರದ ಮೂರಕ್ಕಿಳಿದ ರಾಜಕೀಯ ಬದುಕು, ಮಿಕ್ಕ ಸೋದರ, ಸೋದರಿ ರಾಜಕೀಯ ಬದುಕಿನ ಗ್ರಾಫ್ ಕೂಡಾ ಇಳಿಮುಖವಾಯಿತು. ಲಕ್ಷ್ಮಿ ಗಣಿ ಧೂಳಿನಿಂದ ಮೈಕೊಡವಿಗೊಂಡು ಹೊರಗೆ ಕಾಲಿಟ್ಟಳು ಎನ್ನಬಹುದು.

2011ರಲ್ಲೇ ಸುಷ್ಮಾ ಕೃಪೆ ಕಳೆದುಕೊಂಡ ರೆಡ್ಡಿ ಬ್ರದರ್ಸ್
ಗಣಿ ಧಣಿಗಳ ವಿಶೇಷ ಹೆಲಿಕಾಪ್ಟರಿನಲ್ಲಿ ಬಂದು ತವರು ಬಾಗಿನ ತೆಗೆದುಕೊಂಡೂ ಹೋಗುತ್ತಿದ್ದ ತುಂಬು ಮುತ್ತೈದೆ ಆಶೀರ್ವಾದ ಸಿಗದಿರುವುದು ಮಹಾ ಅಪಶಕುನ ಎಂದು ರೆಡ್ಡಿಗಳು ಭಾವಿಸಿದ್ದಾರೆ. ಸುಷ್ಮಾಜೀ ಅವರ ಮನ ಓಲೈಸಿ ಬಳ್ಳಾರಿಗೆ ಕರೆಸಿಕೊಳ್ಳುವ ಸರ್ವ ಪ್ರಯತ್ನಗಳು ನಡೆದಿದೆ. ಆದರೆ, ವೈಯಕ್ತಿಕ ಕಾರಣಗಳಿಂದ ಈ ಬಾರಿ ಬಳ್ಳಾರಿಗೆ ಬರಲಾಗುವುದಿಲ್ಲ ಎಂದು ಸುಷ್ಮಾ 2011ರಲ್ಲಿ ಸ್ಪಷ್ಟಪಡಿಸಿದ್ದರು. ಲೋಕಾಯುಕ್ತ ಗಣಿವರದಿಯಲ್ಲಿ ರೆಡ್ಡಿ ಸೋದರರು ಹಾಗೂ ಶ್ರೀರಾಮುಲು ಹೆಸರು ಪ್ರಸ್ತಾಪವಾದ ಬೆನ್ನಲ್ಲೇ ಅವರ ಸಹವಾಸ ಸಾಕು ಎಂದು ಲೋಕಸಭೆಯಲ್ಲಿ ವಿಪಕ್ಷ ನಾಯಕಿ ಸುಷ್ಮಾ ನಿರ್ಧರಿಸಿದ್ದಂತ್ತಿತ್ತು. ಹೈಕಮಾಂಡ್ ಕೂಡಾ ಭಾವನಾತ್ಮಕ ಸಂಬಂಧಕ್ಕಿಂತ ಪಕ್ಷದ ಇಮೇಜ್ ಮುಖ್ಯ ಎಂದು ತಾಕೀತು ಮಾಡಿತ್ತು. ಹೀಗಾಗಿ ಗಾಡ್ ಮದರ್ ಸುಷ್ಮಾ ಕೃಪೆಯಿಂದ ವಂಚಿತರಾದ ರೆಡ್ಡಿ ಸೋದರರಿಗೆ ಅಂದಿನಿಂದ ಕೇಡುಗಾಲ ಆರಂಭವಾಯಿತು ಎನ್ನಬಹುದು.

ರಾಮುಲು ಕಾರ್ಯಕ್ರಮಕ್ಕೆ ಸುಷ್ಮಾ ಬದಲಿಗೆ ನಿತಿನ್ ಗಡ್ಕರಿ
2011ರಲ್ಲಿ ಬಳ್ಳಾರಿ ಸುಷ್ಮಾ ಬದಲಿಗೆ ಹೆಲಿಕಾಪ್ಟರ್ ಹತ್ತಿ ಜಿಂದಾಲ್ ಏರ್ ಸ್ಟ್ರಿಪ್ ನಲ್ಲಿ ಇಳಿದ ನಿತಿನ್ ಗಡ್ಕರಿ ಅವರು ಡಾಕ್ಟರ್ ಮನೆಯಲ್ಲಿ ವರಮಹಾಲಕ್ಷ್ಮಿ ವ್ರತದಲ್ಲಿ ಪಾಲ್ಗೊಂಡಿದ್ದರು. ನಂತರ ಶ್ರೀರಾಮುಲು ನೇತೃತ್ವದಲ್ಲಿ ಆಯೋಜನೆಗೊಂಡಿರುವ 12ನೇ ವರ್ಷದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ನೂತನ ವಧು ವರರನ್ನು ಆಶೀರ್ವದಿಸಿದರು.
ಅಂದಿನ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ರೇಣುಕಾಚಾರ್ಯ, ಸೋಮಣ್ಣ, ಅನಂತಕುಮಾರ್, ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ, ಸೋಮಶೇಖರ್ ರೆಡ್ಡಿ, ಅನಂದ್ ಸಿಂಗ್ ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮೊದಲ ಬಾರಿಗೆ ಬಳ್ಳಾರಿ ಬಸ್ ಮಿಸ್ ಮಾಡಿಕೊಂಡ ಸುಷ್ಮಾ ಸ್ವರಾಜ್ ವ್ರತಭಂಗ ಮಾಡಿದ್ದರು ಅಥವಾ ವಿಧಿಯಾಟದಂತೆ ಅಂದಿನಿಂದ ಬಳ್ಳಾರಿಗೂ ಸುಷ್ಮಾಗೂ ನಂಟು ಕಳಚುತ್ತಾ ಬಂದಿತು. ನಂತರ ಡಾಕ್ಟರ್ ಸುಂದರ್, ಗಾಲಿ ರೆಡ್ಡಿ ಮನೆ ಕಾರ್ಯಕ್ರಮಕ್ಕೆ ಬಂದರೂ ಬಳ್ಳಾರಿ -ವರಮಹಾಲಕ್ಷ್ಮಿ ಶ್ರಾವಣ ಶುಕ್ರವಾರ ಹೂಮುಡಿದು ಹಣೆ ತುಂಬ ಕಾಸಗಲ ಕುಂಕುಮ ಇಟ್ಟು ಮಂದಹಾಸ ಬೀರುತ್ತಾ ಬರುತ್ತಿದ್ದ ಸುಷ್ಮಾ ತಾಯಿಯನ್ನು ರೆಡ್ಡಿ ಕುಟುಂಬ ಕಳೆದುಕೊಂಡಿದೆ.
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Hardik vs Krunal: ತಮ್ಮ ಹಾರ್ದಿಕ್ ವಿಕೆಟ್ ಕಿತ್ತ ಬೌಲರ್ಗಿಂತ ಹೆಚ್ಚಾಗಿ ಸಂಭ್ರಮಿಸಿದ ಕೃನಾಲ್ ಪಾಂಡ್ಯ, ಭಾರಿ ವೈರಲ್ -
Namma Metro: ಪ್ರಯಾಣಿಕರಿಗೆ ಸಿಹಿ ಸುದ್ದಿ, ಹಳದಿ ಮಾರ್ಗಕ್ಕಾಗಿ ಬಂತು ಹೊಸ ಡ್ರೈವರ್ ಲೆಸ್ ರೈಲು












Click it and Unblock the Notifications