ಶ್ರೀರಾಮುಲುಗೆ ಮುತ್ತಿಟ್ಟ ಸಂತೋಷ್ ಲಾಡ್: ಅಚ್ಚರಿ ಮೂಡಿಸಿದ ಉಭಯ ನಾಯಕರ ನಡೆ
ರಾಜಕೀಯದಲ್ಲಿ ಯಾರೂ ಶಾಶ್ವತ ಮಿತ್ರರಲ್ಲ, ಯಾರೂ ಶಾಶ್ವತ ಶತ್ರುಗಳಲ್ಲ ಎನ್ನುವ ಮಾತಿಗೆ ನಿದರ್ಶನ ಎನ್ನುವಂತೆ ಮಾಜಿ ಸಚಿವ ಸಂತೋಷ್ ಲಾಡ್ ಹಾಗೂ ಸಚಿವ ಶ್ರೀರಾಮುಲು ನಡೆದುಕೊಂಡಿದ್ದು, ಅವರ ಪರಸ್ಪರ ಆಲಿಂಗನದ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಬಳ್ಳಾರಿ, ಫೆಬ್ರವರಿ 3: ರಾಜಕೀಯದಲ್ಲಿ ಯಾರೂ ಶಾಶ್ವತ ಮಿತ್ರರಲ್ಲ, ಯಾರೂ ಶಾಶ್ವತ ಶತ್ರುಗಳಲ್ಲ ಎಂಬ ಮಾತಿದೆ. ಹಾಗೆಯೇ ರಾಜಕೀಯವೇ ಬೇರೆ ವೈಯಕ್ತಿಕ ಸಂಬಂಧಗಳ ಆತ್ಮೀಯತೆಯೇ ಬೇರೆ ಎನ್ನುವುದು ಕೂಡಾ ಸತ್ಯ.
ಈ ಮಾತುಗಳಿಗೆ ನಿದರ್ಶನ ಎನ್ನುವಂತೆ ಕಾಂಗ್ರೆಸ್ನ ಮಾಜಿ ಸಚಿವ ಸಂತೋಷ್ ಲಾಡ್ ಹಾಗೂ ಸಚಿವ ಶ್ರೀರಾಮುಲು ಅವರ ಪರಸ್ಪರ ಪ್ರೀತಿ ಆಲಿಂಗನದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಒಬ್ಬರು ಬಿಜೆಪಿ ಪ್ರಮುಖ ಸಚಿವರು ಮತ್ತೊಬ್ಬರು ಕಾಂಗ್ರೆಸ್ ಪ್ರಮುಖ ನಾಯಕರು ತಮ್ಮ ರಾಜಕೀಯ ನೆಲೆಯನ್ನು ಮೀರಿಯೂ ಸ್ನೇಹ ಸಂಬಂಧವನ್ನು ಕಾಯ್ದುಕೊಂಡಿದ್ದಾರೆ.
ಶ್ರೀರಾಮುಲು ಮತ್ತು ಸಂತೋಷ್ ಲಾಡ್ ರಾಜಕೀಯವಾಗಿ ವೈರಿಗಳಾಗಿದ್ದಾರೆ. ಆದರೆ ಬಹಳ ದಿನಗಳ ನಂತರ ಭೇಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಪರಸ್ಪರ ಆಲಂಗಿಸಿಕೊಂಡು ಸುತ್ತ ನೆರೆದವರಿಗೆ ಅಚ್ಚರಿ ಮೂಡಿಸಿದ್ದಾರೆ. ಸಂಡೂರು ತಾಲೂಕಿನ ಬನ್ನಿಹಟ್ಟಿ ಗ್ರಾಮದ ಉಡುಸುಲಮ್ಮ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದ ಉಭಯ ನಾಯಕರು ತಮ್ಮ ನಡುವಿನ ಆತ್ಮೀಯತೆಯನ್ನು ಪ್ರದರ್ಶಿಸಿದರು. ಪರಸ್ಪರ ಎದುರಾದಾಗ ಆತ್ಮೀಯತೆಯಿಂದ ಆಲಂಗಿಸಿಕೊಂಡಿದಲ್ಲದೇ, ಸಂತೋಷ್ ಲಾಡ್ , ಬಿಜೆಪಿ ನಾಯಕ ಶ್ರೀರಾಮುಲುಗೆ ಮುತ್ತಿಟ್ಟಿದ್ದಾರೆ. ಈ ಭೇಟಿಯ ಹರ್ಷ ವ್ಯಕ್ತಪಡಿಸುತ್ತಾ ಯೋಗಕ್ಷೇಮ ವಿಚಾರಿಸಿಕೊಂಡಿದ್ದಾರೆ.
ಮಾಜಿ ಸಚಿವ ಸಂತೋಷ್ ಲಾಡ್ ಹಾಗೂ ಸಚಿವ ಶ್ರೀರಾಮುಲು ಬಹಿರಂಗ ಆಲಿಂಗನ, ಪ್ರೀತಿ ಆತ್ಮೀಯತೆಯ ನಡವಳಿಕೆ ಎರಡು ಪಕ್ಷದ ಕಾರ್ಯಕರ್ತರನ್ನು ಗೊಂದಲಕ್ಕೀಡು ಮಾಡಿದೆ.
ಕಾಂಗ್ರೆಸ್ ಪಕ್ಷದಿಂದ ಮಾಜಿ ಸಚಿವ ಸಂತೋಷ್ ಲಾಡ್ ಹಾಗೂ ಬಿಜೆಪಿಯಿಂದ ಸಚಿವ ಶ್ರೀರಾಮುಲು, ತಮ್ಮ ತಮ್ಮ ವಲಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ಆರಂಭಿಸಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಸಂಡೂರು ಕ್ಷೇತ್ರದ ಟಿಕೆಟ್ ಮೇಲೆ ಕಣ್ಣಿಟ್ಟಿರುವ ಸಚಿವ ಶ್ರೀರಾಮುಲು, ಕ್ಷೇತ್ರದಲ್ಲಿ ಸತತ ಓಡಾಟ ನಡೆಸುತ್ತಿದ್ದು, ಪಕ್ಷ ಸಂಘಟನೆ ಜೊತೆಗೆ ಮತದಾರರನ್ನು ಸೆಳೆಯುತ್ತಿದ್ದಾರೆ.
ಇನ್ನು ಧಾರವಾಡ ಜಿಲ್ಲೆಯ ಕಲಘಟಗಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಸಂತೋಷ್ ಲಾಡ್ 2023ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಇನ್ನು ಈ ರಾಜಕೀಯ ಬದ್ಧ ವಿರೋಧಿಗಳು ಈ ರೀತಿಯಲ್ಲಿ ಬಹಿರಂಗವಾಗಿ ಅಲಿಂಗನ ಮಾಡಿಕೊಂಡಿರುವ ಘಟನೆ ರಾಜಕೀಯ ಚರ್ಚೆಗೂ ಕಾರಣವಾಗಿದೆ.