Sandur By Election Result: 6, 7ನೇ ಸುತ್ತಿನ ಬಳಿಕ ಎಡವಿದ ಬಿಜೆಪಿ, ಸಂಡೂರು 'ಕೈ' ವಶ!
ಬಳ್ಳಾರಿ, ನವೆಂಬರ್ 23: ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ-2024ರ ಫಲಿತಾಂಶ ಘೋಷಣೆಯಾಗಿದೆ. ಉಪ ಚುನಾವಣಾ ಕಣದಲ್ಲಿ 6 ಅಭ್ಯರ್ಥಿಗಳಿದ್ದರು. ಕಾಂಗ್ರೆಸ್ ಅಭ್ಯರ್ಥಿ ಇ. ಅನ್ನಪೂರ್ಣ ಅವರು 93,616 ಮತಗಳನ್ನು ಪಡೆದು, 9,649 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ. ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಬಂಗಾರ ಹನುಮಂತ 83,967 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.
ಶನಿವಾರ ಬಳ್ಳಾರಿ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ನಲ್ಲಿ ಸಂಡೂರು ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆ ನಡೆಯಿತು. ಬೆಳಗ್ಗೆ 7.30ಕ್ಕೆ ಚುನಾವಣಾ ಸಾಮಾನ್ಯ ವೀಕ್ಷಕರಾದ ಡಾ. ದಿವ್ಯಾ ಎಸ್. ಅಯ್ಯರ್, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ. ಜೆ. ಸೇರಿದಂತೆ ಚುನಾವಣಾ ಏಜೆಂಟ್ ಹಾಗೂ ಭದ್ರತಾ ಸಿಬ್ಬಂದಿಗಳ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ತೆರೆಯಲಾಯಿತು.

253 ಮತಗಟ್ಟೆಗಳಲ್ಲಿನ ಮತಯಂತ್ರಗಳಲ್ಲಿ ದಾಖಲಾದ ಮತಗಳನ್ನು ಎಣಿಕೆ ಮಾಡಲು ಒಟ್ಟು 14 ಟೇಬಲ್ಗಳ ವ್ಯವಸ್ಥೆ ಮಾಡಲಾಗಿತ್ತು. ಒಟ್ಟು 19 ಸುತ್ತುಗಳಲ್ಲಿ ಮತಗಳ ಎಣಿಕೆ ಕಾರ್ಯ ನಡೆಯಿತು. ಅಂಚೆ ಮತದಾನಕ್ಕೆ ಸಂಬಂಧಿಸಿದಂತೆ ಒಟ್ಟು 20 ಮತಗಳು ಚಲಾವಣೆಯಾಗಿದ್ದವು. ಈ ಪೈಕಿ ಕಾಂಗ್ರೆಸ್ನ ಇ. ಅನ್ನಪೂರ್ಣ 10, ಬಿಜೆಪಿ ಅಭ್ಯರ್ಥಿ ಬಂಗಾರ ಹನುಮಂತ 6 ಮತಗಳನ್ನು ಪಡೆದರು. 4 ಅಂಚೆ ಮತಗಳು ತಿರಸ್ಕಾರವಾದವು.
6 & 7ನೇ ಸುತ್ತುಗಳ ಏಣಿಕೆ: ಅಂಚೆ ಮತಗಳ ಎಣಿಕೆ ಬಳಿಕ ವಿದ್ಯುನ್ಮಾನ ಮತಯಂತ್ರಗಳ ಮತ ಎಣಿಕೆ ಆರಂಭವಾಯಿತು. ಮೊದಲ ಸುತ್ತಿನಿಂದ 6 ಸುತ್ತಿನವರೆಗೂ ಕಾಂಗ್ರೆಸ್ನ ಇ.ಅನ್ನಪೂರ್ಣ ಬಿಜೆಪಿಯ ಬಂಗಾರ ಹನುಮಂತ ಅವರಿಗಿಂತಲೂ ಮುನ್ನಡೆ ಕಾಯ್ದುಕೊಂಡರು. ಬಂಗಾರ ಹನುಮಂತ ಆರನೇ ಸುತ್ತಿನಲ್ಲಿ 253 ಮತ ಮತ್ತು ಏಳನೇ ಸುತ್ತಿನಲ್ಲಿ 867 ಮತಗಳ ಅಂತರದಿಂದ ಇ.ಅನ್ನಪೂರ್ಣ ಅವರಿಗಿಂತ ಮುನ್ನಡೆ ಕಾಯ್ದುಕೊಂಡಿದ್ದರು. ನಂತರ ಉಳಿದ ಎಲ್ಲ ಸುತ್ತುಗಳಲ್ಲಿ ಇ.ಅನ್ನಪೂರ್ಣ ಅವರೇ ಮುನ್ನಡೆ ಪಡೆದರು. ಅಂತಿಮವಾಗಿ ಗೆಲುವು ಸಾಧಿಸಿದರು.
ಚುನಾವಣಾ ಕಣದಲ್ಲಿದ್ದ ಕರ್ನಾಟಕ ಜನತಾ ಪಕ್ಷದ ಅಂಜಿನಪ್ಪ ಎನ್. 632 ಮತ, ಪಕ್ಷೇತರ ಅಭ್ಯರ್ಥಿಗಳಾದ ಟಿ. ಎಂ. ಮಾರುತಿ 211, ಟಿ. ಎರ್ರಿಸ್ವಾಮಿ 271 ಮತ್ತು ಎನ್. ವೆಂಕಣ್ಣ 461 ಮತ ಗಳಿಸಿದ್ದಾರೆ. ನೋಟಾದಲ್ಲಿ ಒಟ್ಟು 1,040 ಮತಗಳು ದಾಖಲಾಗಿವೆ.
14+1 ಟೇಬಲ್ನಲ್ಲಿ ಮತ ಎಣಿಕೆ ನಡೆಯಿತು. ಪ್ರತಿ ಟೇಬಲ್ಗೆ ಒಬ್ಬರು ಎಣಿಕಾ ಮೇಲ್ವಿಚಾರಕರು, ಒಬ್ಬರು ಎಣಿಕಾ ಸಹಾಯಕರು, ಒಬ್ಬರು ಮೈಕ್ರೋ ಅಬ್ಸವರ್ಗಳನ್ನು ನಿಯೋಜಿಸಲಾಗಿತ್ತು. 19 ಎಣಿಕಾ ಮೇಲ್ವಿಚಾರಕರು, 21 ಎಣಿಕಾ ಸಹಾಯಕರು ಮತ್ತು 20 ಎಣಿಕಾ ಮೈಕ್ರೋ ಅಬ್ಸವರ್ಗಳನ್ನು ನೇಮಿಸಿದ್ದು, ಸಂಡೂರು ಕ್ಷೇತ್ರದ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಚುನಾವಣಾ ಏಜೆಂಟರುಗಳು ಮತ ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದರು.
ಮಾಧ್ಯಮ ಕೇಂದ್ರದ ಮೂಲಕ ಮತ ಎಣಿಕೆಯ ಪ್ರತಿ ಸುತ್ತಿನ ಮಾಹಿತಿಯನ್ನು ಜನರಿಗೆ ತಲುಪಿಸಲು ಧ್ವನಿವರ್ಧಕದ ವ್ಯವಸ್ಥೆ ಮಾಡಲಾಗಿತ್ತು. ಮತ ಎಣಿಕೆಯ ಹಿನ್ನೆಲೆಯಲ್ಲಿ ಕೇಂದ್ರದ ಹೊರಗಡೆ ಮತ್ತು ಒಳಗಡೆ ಸೂಕ್ತವಾದ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಮಧ್ಯಾಹ್ನದ ವೇಳೆಗೆ ಮತ ಎಣಿಕೆ ಮುಕ್ತಾಯಗೊಂಡ ನಂತರ ಸಂಡೂರು ವಿಧಾನಸಭೆಯ ಉಪಚುನಾವಣೆಯ ಚುನಾವಣಾಧಿಕಾರಿಗಳು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಇ. ಅನ್ನಪೂರ್ಣಗೆ ಪ್ರಮಾಣ ಪತ್ರ ವಿತರಿಸಿದರು.












Click it and Unblock the Notifications