ಮರಳು ಮಾಫಿಯಾದಿಂದ ತಹಶೀಲ್ದಾರ್ ಹತ್ಯೆ ಯತ್ನ
ಬಳ್ಳಾರಿ, ಮಾ. 19 : ದಕ್ಷ ಐಎಎಸ್ ಅಧಿಕಾರಿ ಡಿಕೆ ರವಿ ಸಾವಿನ ಬಗ್ಗೆ ರಾಜ್ಯದಲ್ಲಿ ಚರ್ಚೆಗಳು ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಅಕ್ರಮ ಮರಳು ಸಾಗಣೆ ತಡೆಯಲು ಹೋಗಿದ್ದ ತಹಶೀಲ್ದಾರ್ಗೆ ಲಾರಿ ಡಿಕ್ಕಿ ಹೊಡೆಸಲು ಪ್ರಯತ್ನ ನಡೆಸಲಾಗಿದೆ.
ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಬ್ಯಾಲಹುಣಸಿ ಗ್ರಾಮದ ಬಳಿ ಮಂಗಳವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ. ಮರಳು ಅಕ್ರಮ ಸಾಗಣೆ ತಡೆಯಲು ಗಸ್ತು ತಿರುಗುತ್ತಿದ್ದ ತಹಶೀಲ್ದಾರ್ ಹಾಗೂ ಸಿಬ್ಬಂದಿಯಿದ್ದ ವಾಹನಕ್ಕೆ ಲಾರಿ ಡಿಕ್ಕಿ ಹೊಡೆಸಲು ಯತ್ನಿಸಲಾಗಿದೆ. [ಮರಳು ಮಾಫಿಯಾ ಎಂದರೇನು? ಏನಿದರ ಮರ್ಮ?]

ಘಟನೆ ವಿವರ : ಬ್ಯಾಲಹುಣಸಿ ಗ್ರಾಮದ ಬಳಿಯ ತುಂಗಭದ್ರಾ ನದಿ ತೀರದಲ್ಲಿ ಮಧ್ಯರಾತ್ರಿ 12.30ರ ವೇಳೆಗೆ ತಹಶೀಲ್ದಾರ್ ಎಚ್.ವಿಶ್ವನಾಥ ಗಸ್ತು ತಿರುಗುತ್ತಿದ್ದರು. ಈ ಸಂದರ್ಭದಲ್ಲಿ ಬ್ಯಾಲಹುಣಸಿಯಿಂದ ಹಾವೇರಿ ಕಡೆ ಹೊರಟಿದ್ದ ಮರಳು ತುಂಬಿದ ಲಾರಿ ನಿಲ್ಲಿಸುವಂತೆ ಸೂಚನೆ ನೀಡಿದರು. [ಮರಳು ಮಾಫಿಯಾದಿಂದ ಡಿವೈಎಸ್ಪಿ ಹತ್ಯೆ ಯತ್ನ]
ಆಗ ಕೆ.ಎ. 27-0597 ನಂಬರ್ನ ಲಾರಿ ಚಾಲಕ ಲಾರಿಯನ್ನು ಸರ್ಕಾರಿ ಜೀಪ್ಗೆ ಲಾರಿ ಡಿಕ್ಕಿ ಹೊಡೆಸಲು ಮುಂದಾದ. ಜೀಪ್ ಚಾಲಕನ ಸಮಯಪ್ರಜ್ಞೆಯಿಂದಾಗಿ ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾದರು.[ಡಿಕೆ ರವಿ ಸಾವು : ಪ್ರಮುಖ ಘಟನಾವಳಿಗಳು]
ಘಟನೆ ನಡೆದ ನಂತರ ಚಾಲಕ ಲಾರಿಯನ್ನು ಮಾರ್ಗಮಧ್ಯೆ ಬಿಟ್ಟು ಪರಾರಿಯಾಗಿದ್ದಾನೆ. ವಿಶ್ವನಾಥ್ ಒಂದು ತಿಂಗಳ ಹಿಂದೆ ಹೂವಿನ ಹಡಗಲಿ ತಹಶೀಲ್ದಾರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅಕ್ರಮ ಮರಳು ಸಾಗಣೆ ತಡೆಯಲು ನದಿ ತೀರ ಆಗಾಗ ದಾಳಿ ನಡೆಸುತ್ತಿದ್ದಾರೆ.
ಕಳೆದ 5 ದಿನಗಳಿಂದ ತಾಲೂಕಿನ ಸೋವೇನಹಳ್ಳಿ, ಕಾಳೇನಹಳ್ಳಿ, ಡೊಂಬ್ರಹಳ್ಳಿ, ನವಲಿ, ಮೈಲಾರ, ಹಿರೇಬನ್ನಿಮಟ್ಟಿ ಮುಂತಾದ ಕಡೆ ದಾಳಿ ನಡೆಸಿ 19 ಟ್ರ್ಯಾಕ್ಟರ್, 5 ಲಾರಿ ವಶಕ್ಕೆ ಪಡೆದು 1.20 ಲಕ್ಷ ರೂ. ದಂಡ ಹಾಕಿದ್ದಾರೆ.
ಮಂಡ್ಯದಲ್ಲಿಯೂ ನಡೆದಿತ್ತು : ಸೆಪ್ಟೆಂಬರ್ನಲ್ಲಿ ಅಕ್ರಮ ಮರಳು ಸಾಗಾಣಿಕೆ ಘಟಕದ ಮೇಲೆ ದಾಳಿ ಮಾಡಿದ್ದ ಡಿವೈಎಸ್ಪಿ ಅವರನ್ನು ಲಾರಿ ಹತ್ತಿಸಿ ಕೊಲೆ ಮಾಡಲು ಯತ್ನಿಸಿದ ಘಟನೆ ಮಂಡ್ಯದಲ್ಲಿ ನಡೆದಿತ್ತು. ದಾಳಿ ನಡೆಸಿದ ಡಿವೈಎಸ್ಪಿ ಸವಿತಾ ಹೂಗಾರ್ ಮೇಲೆ ಲಾರಿ ಹತ್ತಿಸಿ ಕೊಲೆ ಮಾಡಲು ಪ್ರಯತ್ನಿಸಲಾಗಿತ್ತು.












Click it and Unblock the Notifications