ಬಿಜೆಪಿ ಸೇರಲಿದ್ದಾರೆ ರಾಜಶೇಖರ್ ಮುಲಾಲಿ?
ಬಳ್ಳಾರಿ, ಮೇ 01 : ಮಾಹಿತಿ ಹಕ್ಕು ಕಾರ್ಯಕರ್ತ ರಾಜಶೇಖರ್ ಮುಲಾಲಿ ಬಿಜೆಪಿ ಸೇರಲಿದ್ದಾರೆ?. ಎಚ್.ವೈ.ಮೇಟಿ ರಾಸಲೀಲೆ ಪ್ರಕರಣವನ್ನು ಬಯಲು ಮಾಡುವಲ್ಲಿ ಮುಲಾಲಿ ಪ್ರಮುಖ ಪಾತ್ರ ವಹಿಸಿದ್ದರು.
ಮೇ 3ರಂದು ರಾಜಶೇಖರ್ ಮುಲಾಲಿ ಅವರು ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಮೇ 3ರಂದು ಪ್ರಧಾನಿ ಮೋದಿ ಬಳ್ಳಾರಿಗೆ ಭೇಟಿ ನೀಡಲಿದ್ದು, ಸಮಾವೇಶ ಉದ್ದೇಶಿಸಿ ಮಾಡನಾಡಲಿದ್ದಾರೆ. ಅಂದು ಮುಲಾಲಿ ಬಿಜೆಪಿಗೆ ಸೇರಲಿದ್ದಾರೆ.
ಬಳ್ಳಾರಿಯ ಬಿಜೆಪಿ ನಾಯಕರು ರಾಜಶೇಖರ್ ಮುಲಾಲಿ ಜೊತೆ ಈಗಾಗಲೇ ಈ ಕುರಿತು ಮಾತುಕತೆ ನಡೆಸಿದ್ದಾರೆ. ಮುಲಾಲಿ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿಯೂ ಮಾಧ್ಯಮಗಳಲ್ಲಿ ಬಂದ ವರದಿ ಹಂಚಿಕೊಂಡಿದ್ದಾರೆ.
ಯಾರು ರಾಜಶೇಖರ್ ಮುಲಾಲಿ? : ರಾಜಶೇಖರ್ ಮೂಲತಃ ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲೂಕಿನ ನೀಲಗುಂದದವರು. ಎಂಬಿಎ ಪದವೀಧರರು. ಕಳೆದ ಮೂರು ದಶಕಗಳಿಂದ ಬಳ್ಳಾರಿಯಲ್ಲಿ ನೆಲೆಸಿದ್ದಾರೆ. ಕೆಲವು ವರ್ಷಗಳ ಕಾಲ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡಿದ್ದಾರೆ.

ಅಣ್ಣಾ ಹಜಾರೆ ಅವರ ಬೆಂಬಲಿಗರಾದ ರಾಜಶೇಖರ್ ಮುಲಾಲಿ ಅವರು, ಜನಲೋಕಪಾಲ ಮಸೂದೆ ಜಾರಿ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಅಣ್ಣಾ ಹಜಾರೆ ನೇತೃತ್ವದ 'ಅಣ್ಣಾ ಸಮರ್ಥಕ್ ಗಾಂಧಿವಾದಿ ಸಂಘ'ದ ರಾಷ್ಟ್ರೀಯ ತಂಡಕ್ಕೆ ರಾಜ್ಯದ ಪ್ರತಿನಿಧಿಯಾಗಿ ನೇಮಕಗೊಂಡಿದ್ದಾರೆ.
ಅಧಿಕಾರಿಗಳನ್ನು ಅಮಾನತು ಮಾಡಿಸಿದ್ದರು : ರಾಜಶೇಖರ್ ಮುಲಾಲಿ ಅವರು ಮಾಹಿತಿ ಹಕ್ಕು ಕಾರ್ಯಕರ್ತರು. ಒಮ್ಮೆ ಅವರು ಬೈಕ್ ನೋಂದಣಿಗೆ ಆರ್ಟಿಓ ಕಚೇರಿಗೆ ಹೋಗಿದ್ದರು. ಎಲ್ಲಾ ದಾಖಲೆಗಳು ಸರಿ ಇದ್ದರೂ ಅಧಿಕಾರಿಗಳು 3 ಸಾವಿರ ರೂ. ಲಂಚ ಕೇಳಿದ್ದರು.
ರಾಜಶೇಖರ್ ಮುಲಾಲಿ ಅವರು ಈ ಕುರಿತು ಲೋಕಾಯುಕ್ತರಿಗೆ ದೂರು ನೀಡಿದ್ದರು. ಇಬ್ಬರು ಅಧಿಕಾರಿಗಳನ್ನು ದೂರಿನ ಅನ್ವಯ ಅಮಾನತು ಮಾಡಲಾಗಿತ್ತು. ಕೂಡ್ಲಗಿಯ ಮಾಜಿ ಡಿವೈಎಸ್ಪಿ ಅನುಮಪಾ ಶೆಣೈ ಅವರ ಹೋರಾಟಕ್ಕೆ ಅವರು ಬೆಂಬಲ ನೀಡಿದ್ದರು.












Click it and Unblock the Notifications