ಮತ್ತಷ್ಟು ತಾರಕ್ಕಕೇರಿದ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳ ಭಿನ್ನಮತ
ಬಳ್ಳಾರಿ, ಏಪ್ರಿಲ್ 18 : ಕರ್ನಾಟಕ ವಿಧಾನಸಭಾ ಚುನಾವಣೆ 2018 ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದು, ಟಿಕೆಟ್ ಆಕಾಂಕ್ಷಿಗಳ ಬಂಡಾಯದ ಬಿಸಿ ತಾರಕಕ್ಕೇರಿದೆ. ಇದಕ್ಕೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪ್ರತಿಕ್ರಯಿಸುತ್ತಿದ್ದಾರೆ. ಹೂವಿನಹಡಗಲಿಯಲ್ಲಂತೂ ಟಿಕೆಟ್ ಆಕಾಂಕ್ಷಿಗಳು ಸ್ವಲ್ಪ ಮಂದೆ ಹೋಗಿ ಪಕ್ಷೇತರರಾಗಿ ನಿಲ್ಲಲು ಹವಣಿಸುತ್ತಿದ್ದಾರೆ.
ಹೌದು, ಹೂವಿನಹಡಗಲಿ ಎಸ್ಟಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿಗಳ ಭಿನ್ನಮತ ಭುಗಿಲೆದ್ದಿದ್ದು,ಎರಡೂ ಪಕ್ಷಗಳ ಅಭ್ಯರ್ಥಿಗಳು ಬಂಡಾಯ ಎದುರಿಸುತ್ತಿದ್ದಾರೆ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದ ಓದೋ ಗಂಗಪ್ಪ ಪಕ್ಷೇತರರಾಗಿ ಸ್ಪರ್ಧಿಸಿದಲ್ಲಿ, ಗೆಲ್ಲುವ ಅಭ್ಯರ್ಥಿಗೆ ಅಡ್ಡಗಾಲು ಆಗುವುದು ಖಂಡಿತ. ಮಂಗಳವಾರ ಮತ್ತು ಬುಧವಾರ ಹಗಲು - ರಾತ್ರಿ ಎನ್ನದೇ ಓದೋ ಗಂಗಪ್ಪ ಅವರು ತಮ್ಮ ಆಪ್ತರು, ಬೆಂಬಲಿಗರು ಮತ್ತು ವಿಶ್ವಾಸಾರ್ಹರ ಜೊತೆಯಲ್ಲಿ ನಿರಂತರ ಸಭೆಗಳನ್ನು ನಡೆಸಿ, ಟಿಕೆಟ್ ನೀಡದ ಬಿಜೆಪಿಗೆ ಪಾಠ ಕಲಿಸಲು ಪಕ್ಷೇತರರಾಗಿ ಸ್ಪರ್ಧಿಸುವ ಕುರಿತು ಚರ್ಚೆ ನಡೆಸಿ, ಸೋಲು - ಗೆಲುವಿನ ಲೆಕ್ಕಾಚಾರ ಹಾಕುತ್ತಿದ್ದಾರೆ.

ಅಷ್ಟೇ ಅಲ್ಲ, ಮಂಗಳವಾರದ ನಾಟಕೀಯ ಬೆಳವಣಿಗೆಯಲ್ಲಿ ಎಂ.ಪಿ. ಪ್ರಕಾಶ್ ಅವರ ಪತ್ನಿ ರುದ್ರಾಂಬ ಪ್ರಕಾಶ್ ಅವರಲ್ಲಿ ತೆರಳಿ, ಕಾಲಿಗೆರಗಿ, ನಮಸ್ಕರಿಸಿ, ಆಶೀರ್ವಾದ ಪಡೆದು, ಎಂ.ಪಿ. ಪ್ರಕಾಶ್ ಅವರ ಕರ್ತುಗದ್ದುಗೆಗೆ ಹೋಗಿ, ನಮಸ್ಕಾರ ಮಾಡಿದ್ದಾರೆ.
ಅಲ್ಲದೇ, ಬಿಜೆಪಿ ಟಿಕೆಟ್ ಆಕಾಂಕ್ಷಿ ಎಸ್. ದೂದನಾಯ್ಕ, ಶಿವಪುರ ಸುರೇಶ ಅವರೊಂದಿಗೆ ಜಿಲ್ಲಾ ಪಂಚಾಯಿತಿ ಸದಸ್ಯ ಪಿ. ವಿಜಯಕುಮಾರ್ ಅವರ ಮನೆಯಲ್ಲಿ ಸುದೀರ್ಘ ಚರ್ಚೆ ನಡೆಸಿದ್ದಾರೆ.
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಹೂವಿನಹಡಗಲಿ ತಾಲೂಕು ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಜೆ. ಶಿವರಾಜ್ , ಕೃಷ್ಣಾನಾಯ್ಕ ಅವರೂ ಪ್ರತ್ಯೇಕವಾಗಿ ತಮ್ಮ ಸ್ನೇಹಿತರು, ಆಪ್ತರು, ಹಿತೈಷಿಗಳ ಸಭೆ ನಡೆಸಿ ತಮ್ಮ ತಮ್ಮ ರಾಜಕೀಯ ಲೆಕ್ಕಾಚಾರ ಹಾಕುತ್ತಿದ್ದಾರೆ.
ಮತ್ತೊಬ್ಬ ಅಭ್ಯರ್ಥಿ ಎಚ್. ಪೂಜಪ್ಪ ಅವರನ್ನು ಬಿಜೆಪಿ ಅಭ್ಯರ್ಥಿ ಬಿ. ಚಂದ್ರಾನಾಯ್ಕ ಮನವೊಲಿಸಿದ್ದಾರೆ. ಕೆಪಿಜೆಪಿ, ಜೆಡಿಯು, ಜೆಡಿಎಸ್ ಸೇರಿದಂತೆ ಅನುಪಮ ಶೆಣೈ ಅವರ ಪಕ್ಷದ ಅಭ್ಯರ್ಥಿಗಳೂ ಕಣಕ್ಕಿಳಿಯುವ ಸಾಧ್ಯತೆಗಳು ಹೆಚ್ಚಿವೆ.











Click it and Unblock the Notifications