ಚಿಹ್ನೆ ಬದಲು; ಬಳ್ಳಾರಿಯಲ್ಲಿ ಡಿಸೆಂಬರ್ 24ರಂದು ಮರು ಮತದಾನ
ಬಳ್ಳಾರಿ, ಡಿಸೆಂಬರ್ 24: ರಾಜ್ಯ ಚುನಾವಣಾ ಆಯೋಗದ ಆದೇಶದಂತೆ ಬಳ್ಳಾರಿ ತಾಲೂಕಿನ ಶಂಕರಬಂಡೆ ಗ್ರಾಮ ಪಂಚಾಯಿತಿಯ ತೊಲಮಾಮಿಡಿ ಕ್ಷೇತ್ರದಲ್ಲಿ ಡಿಸೆಂಬರ್ 24ರಂದು ಮರು ಮತದಾನ ನಡೆಯಲಿದೆ. ಬಳ್ಳಾರಿ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಶೇ. 81.22ರಷ್ಟು ಮತದಾನ ನಡೆದಿತ್ತು.
ಬಳ್ಳಾರಿ ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ಈ ಕುರಿತು ಮಾಹಿತಿ ನೀಡಿದ್ದಾರೆ. "ಡಿಸೆಂಬರ್ 22 ರಂದು ಬಳ್ಳಾರಿ ತಾಲೂಕಿನ 22 ಶಂಕರಬಂಡೆ ಗ್ರಾಮ ಪಂಚಾಯಿತಿಯ 7 ಶಂಕರಬಂಡೆ (ತೊಲಮಾಮಿಡಿ) ಕ್ಷೇತ್ರದ ಚಿಹ್ನೆ ಬದಲಾವಣೆಯಾಗಿರುವ ಹಿನ್ನಲೆಯಲ್ಲಿ ಅಂದು ನಡೆದ ಮತದಾನವನ್ನು ಅಸಿಂಧುವೆಂದು ಘೋಷಿಸಲಾಗಿದೆ" ಎಂದು ಹೇಳಿದ್ದಾರೆ.
"ಚುನಾವಣಾ ಆಯೋಗದ ಆದೇಶದಂತೆ ಇದೇ ಡಿಸೆಂಬರ್ 24ರಂದು ಮರು ಮತದಾನವನ್ನು ನಡೆಸಲಾಗುತ್ತದೆ. ಜನರು ಕೋವಿಡ್ ನಿಯಮ ಉಲ್ಲಂಘನೆ ಮಾಡದಂತೆ ಆಗಮಿಸಿ ಮತ ಚಲಾವಣೆ ಮಾಡಬೇಕು" ಎಂದು ಎಸ್. ಎಸ್. ನಕುಲ್ ಮನವಿ ಮಾಡಿದ್ದಾರೆ.

ಡಿಸೆಂಬರ್ 22ರ ಮಂಗಳವಾರ ಚಿಹ್ನೆ ಮುದ್ರಣ ದೋಷದಿಂದಾಗಿ ತೊಲಮಾಮಡಿ ಮತಗಟ್ಟೆಯಲ್ಲಿ ಮತದಾನ ಸ್ಥಗಿತವಾಗಿತ್ತು. ಸುದ್ದಿ ತಿಳಿಯುತ್ತಲೇ ಜಿಲ್ಲಾ ಚುನಾವಣಾಧಿಕಾರಿ ಎಸ್. ಎಸ್. ನಕುಲ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದಲು ಅಡಾವತ್ ಮತಗಟ್ಟೆಗೆ ಭೇಟಿ ನೀಡಿದ್ದರು.
ಮುದ್ರಣದೋಷದಿಂದಾಗಿ ತೊಲಮಾಮಡಿ ಮತಗಟ್ಟೆಯ ಅಭ್ಯರ್ಥಿ ಪದ್ಮಾವತಿ ಅವರ ಚಿಹ್ನೆ 'ಮಡಿಕೆ'ಯ ಬದಲಿಗೆ ಸಿಲಿಂಡರ್ ಚಿಹ್ನೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಮತದಾನ ಸ್ಥಗಿತಗೊಳಿಸಿ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲಾಗಿತ್ತು.











Click it and Unblock the Notifications