ಹೊಸಪೇಟೆ-ಕೊಟ್ಟೂರು ರೈಲು ಸಂಚಾರಕ್ಕೆ ಆಯುಕ್ತರ ಒಪ್ಪಿಗೆ
ಬಳ್ಳಾರಿ, ಸೆಪ್ಟೆಂಬರ್ 28 : ಹೊಸಪೇಟೆ-ಕೊಟ್ಟೂರು ನಡುವಿನ ಪ್ರಯಾಣಿಕರ ರೈಲು ಸೇವೆ ಆರಂಭಿಸಲು ಇಲಾಖೆ ಒಪ್ಪಿಗೆ ನೀಡಿದೆ. ಶೀಘ್ರದಲ್ಲಿಯೇ ರೈಲುಗಳ ವಾಣಿಜ್ಯ ಸಂಚಾರಕ್ಕೆ ದಿನಾಂಕ ನಿಗದಿಯಾಗಲಿದೆ.
ಜನರ ಹಲವು ವರ್ಷಗಳ ಬೇಡಿಕೆಗೆ ಒಪ್ಪಿಗೆ ಸಿಕ್ಕಿದೆ. 65 ಕಿ.ಮೀ. ಉದ್ದದ ಹೊಸಪೇಟೆ-ಕೊಟ್ಟೂರು ಮಾರ್ಗದಲ್ಲಿ ರೈಲ್ವೆ ಸುರಕ್ಷತಾ ಆಯುಕ್ತರು ಕೆಲವು ದಿನಗಳ ಹಿಂದೆ ಪರಿಶೀಲನೆ ಮುಕ್ತಾಯಗೊಳಿಸಿದ್ದರು.
ಎರಡು ದಿನಗಳ ಕಾಲ ಪರಿಶೀಲನೆ ನಡೆಸಿದ ಆಯುಕ್ತರು ಮಾರ್ಗ ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳಿಸಲು ಪೂರಕವಾಗಿದೆ ಎಂದು ವರದಿ ನೀಡಿದ್ದಾರೆ. ರೈಲುಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲು ದಿನಾಂಕವನ್ನು ನಿಗದಿ ಮಾಡಬೇಕಿದೆ.

ಹೊಸಪೇಟೆ-ವ್ಯಾಸನಕೆರೆ ನಡುವೆ ಬೆಟ್ಟಗುಡ್ಡಗಳಿದ್ದು ಮಾರ್ಗದಲ್ಲಿ ತಿರುವು ಇದೆ. ಇಲ್ಲಿ ಪ್ರತಿ ಗಂಟೆಗೆ 40 ಕಿ. ಮೀ. ವೇಗದಲ್ಲಿ ರೈಲು ಸಂಚರಿಸಲು ಸೂಚನೆ ನೀಡಲಾಗಿದೆ. ಸುರಕ್ಷತಾ ಪರಿಶೀಲನೆ ವೇಳೆ ಆಯುಕ್ತರು ಈ ಕುರಿತು ಸೂಚನೆ ನೀಡಿದ್ದರು.
ವ್ಯಾಸನಕೆರೆ-ಹಗರಿಬೊಮ್ಮನಹಳ್ಳಿ ನಡುವೆ 50 ಕಿ. ಮೀ. ಮತ್ತು ಹಗರಿಬೊಮ್ಮನಹಳ್ಳಿ-ಕೊಟ್ಟೂರು ನಡುವೆ 60 ಕಿ. ಮೀ. ವೇಗದಲ್ಲಿ ರೈಲು ಸಾಗಬೇಕಾಗಿದೆ ಎಂದು ಆಯುಕ್ತರು ವರದಿಯಲ್ಲಿ ಹೇಳಿದ್ದಾರೆ.
ರೈಲ್ವೆ ಹೋರಾಟ ಸಮಿತಿ ಆಗಸ್ಟ್ 15ರಿಂದ ಹೊಸಪೇಟೆ-ಕೊಟ್ಟೂರು ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸಬೇಕು ಎಂದು ಒತ್ತಾಯಿಸಿತ್ತು. ಆದರೆ, ಸುರಕ್ಷತಾ ಪರಿಶೀಲನೆ ಕಾರ್ಯ ಸೆ. 16 ಮತ್ತು 17ರಂದು ನಡೆದಿದ್ದು ಈಗ ಸಂಚಾರಕ್ಕೆ ಒಪ್ಪಿಗೆ ಕೊಡಲಾಗಿದೆ.
ಬಳ್ಳಾರಿ ಜಿಲ್ಲೆಯ ಹೊಸಪೇಟೆಯಿಂದ ಹೊರಡುವ ರೈಲು ಕೊಟ್ಟೂರು ಮೂಲಕ ದಾವಣಗೆರೆ ಜಿಲ್ಲೆಯ ಹರಿಹರದ ಅಮರಾವತಿ ಕಾಲೋನಿ ತನಕ ಸಂಚಾರ ನಡೆಸಲಿದೆ. ಇದರಿಂದಾಗಿ ಸಾವಿರಾರು ಜನರಿಗೆ ಅನುಕೂಲವಾಗಲಿದೆ.












Click it and Unblock the Notifications