ಮೈಲಾರ,ಕುರುವತ್ತಿಯಲ್ಲಿ ಸಾರ್ವಜನಿಕರ ದರ್ಶನಕ್ಕೆ ನಿಷೇಧ
ಬಳ್ಳಾರಿ,ಫೆಬ್ರವರಿ 04: ಕೊರೊನಾ ಸೋಂಕಿನಿಂದಾಗಿ ಮೈಲಾರ ಹಾಗೂ ಕುರುವತ್ತಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ನಿಷೇಧ ಹೇರಲಾಗಿದೆ.
ಹೂವಿನಹಡಗಲಿ ತಾಲೂಕಿನ ಮೈಲಾರ ಕ್ಷೇತ್ರದಲ್ಲಿ ಮೈಲಾರಲಿಂಗ ಸ್ವಾಮಿ ದೇವಸ್ಥಾನ ಹಾಗೂ ಕುರುವತ್ತಿ ಗ್ರಾಮದ ಮಲ್ಲಿಕಾರ್ಜುನ ಸ್ವಾಮಿ, ಬಸವೇಶ್ವರ ಸ್ವಾಮಿ ದೇವಸ್ಥಾನಗಳಿಗೆ ಫೆ.19ರಿಂದ ಮಾ.2 ಹಾಗೂ ಮಾ.7ರಿಂದ 15ರವರೆಗೆ ಕಾರ್ಣಿಕೋತ್ಸವ, ರಥೋತ್ಸವ, ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ನಡೆಯಲಿದೆ.
ಸಾರ್ವಜನಿಕರು ಮತ್ತು ಭಕ್ತಾಧಿಗಳ ಆರೋಗ್ಯದ ಹಿತದೃಷ್ಟಿಯಿಂದ ಕೋವಿಡ್-19 ಹರಡದಂತೆ ತಡೆಯುವ ಕುರಿತು ಮುಂಜಾಗೃತಾ ಕ್ರಮವಾಗಿ ಸಾರ್ವಜನಿಕ ದರ್ಶನವನ್ನು ಹಾಗೂ ಸಾರ್ವಜನಿಕರಿಗೆ ನಿಷೇಧಿಸಿ ಜಿಲ್ಲಾದಂಡಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಪವನಕುಮಾರ ಮಾಲಪಾಟಿ ಅವರು ಆದೇಶ ಹೊರಡಿಸಿದ್ದಾರೆ.
ಆದರೆ ಸದರಿ ದೇವಸ್ಥಾನಗಳ ಆಡಳಿತ ಮಂಡಳಿಯವರು ದೇವಸ್ಥಾನಗಳಲ್ಲಿ ಕೊರೊನಾ ಸಂಬಂಧಿಸಿದ ಮುಂಜಾಗೃತಾ ಕ್ರಮವನ್ನು ವಹಿಸುವ ಷರತ್ತಿಗೊಳಪಟ್ಟು ದಿನನಿತ್ಯದ ಪೂಜಾ ಧಾರ್ಮಿಕ ವಿಧಿ ವಿಧಾನಗಳನ್ನು ನಿರ್ವಹಿಸಲು ಅನುಮತಿ ನೀಡಿದ್ದಾರೆ.
ಜಾತ್ರಾ ಪ್ರದೇಶದಲ್ಲಿ, ರಸ್ತೆಯ ಬದಿಗಳಲ್ಲಿ, ಜಮೀನುಗಳಲ್ಲಿ ಯಾವುದೆ ವಾಣಿಜ್ಯದ ಚಟುವಟಿಕೆಗಳನ್ನು ನಡೆಸಲು ಅವಕಾಶ ಇರುವುದಿಲ್ಲ. ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ಭಾರತೀಯ ದಂಡ ಸಂಹಿತೆ 188 ರ ಪ್ರಕಾರ ಕ್ರಮ ಜರುಗಿಸಲಾಗುವುದು. ಈ ವಿಷಯವಾಗಿ ಆದೇಶವನ್ನು ಜಾರಿಗೊಳಿಸಲು ಅಧಿಕಾರಿಗಳಿಗೆ ಕ್ರಮಕೈಗೊಳ್ಳಲು ಸೂಚಿಸಿದ್ದಾರೆ.