ವಿಜಯನಗರ ಜಿಲ್ಲೆ ಉದ್ಘಾಟನೆ; ಕಾರ್ಯಕ್ರಮದ ವಿಶೇಷತೆಗಳು
ವಿಜಯನಗರ, ಸೆಪ್ಟೆಂಬರ್ 29: ಕರ್ನಾಟಕದ 31ನೇ ಜಿಲ್ಲೆಯಾಗಿ ವಿಜಯನಗರ ಘೋಷಣೆಯಾಗಿದೆ. ಅಕ್ಟೋಬರ್ 2ರಂದು ಅಧಿಕೃತವಾಗಿ ವಿಜಯನಗರ ಜಿಲ್ಲೆ ಉದ್ಘಾಟನೆಯಾಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಕ್ಟೋಬರ್ 2 ಮತ್ತು 3ರಂದು ಎರಡು ದಿನಗಳ ಕಾಲ ಹೊಸಪೇಟೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ವಿಜಯನಗರ ಜಿಲ್ಲೆ ಉದ್ಘಾಟನೆ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ, ಅನೇಕ ಸಚಿವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
ವಿಜಯನಗರ ಜಿಲ್ಲೆ ಉದ್ಘಾಟನೆಗೆ ಕಾರ್ಯಕ್ರಮಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ವಿಜಯನಗರ ಗತ ವೈಭವ ಮರುಕಳಿಸುವ ಮಾದರಿಯಲ್ಲಿ ವಿಜಯನಗರ ಜಿಲ್ಲೆ ಉದ್ಘಾಟನೆಗೆ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. ಉದ್ಘಾಟನೆ ಕಾರ್ಯಕ್ರಮಕ್ಕೆ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಅದ್ಧೂರಿ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ.
'ವಿಜಯನಗರ ಉತ್ಸವ' ನಡೆಯಲಿದ್ದು ಇದಕ್ಕಾಗಿ ಸಿದ್ಧತಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ವಿಜಯನಗರ ಜಿಲ್ಲೆಯ ವಿಶೇಷಾಧಿಕಾರಿಗಳಾದ ಅನಿರುದ್ಧ ಶ್ರವಣ್ ಸಿದ್ಧತೆಗಳನ್ನು ಪರಿಶೀಲಿಸುತ್ತಿದ್ದಾರೆ. ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡುತ್ತಿದ್ದಾರೆ.
"ಕೋವಿಡ್ ನಿಯಮಗಳನ್ನು ಪಾಲನೆ ಮಾಡಿಕೊಂಡು ವಿಜಯನಗರ ಜಿಲ್ಲಾ ಉದ್ಘಾಟನೆ ಕಾರ್ಯಕ್ರಮ ಮಾಡಲಾಗುತ್ತದೆ. ಜನದಟ್ಟಣೆ ಕಡಿಮೆ ಮಾಡಲು ವಿಜಯನಗರ ಜಿಲ್ಲೆಯ ತಾಲೂಕುಗಳಲ್ಲಿ ಕಾರ್ಯಕ್ರಮದ ವೀಕ್ಷಣೆಗೆ ಎಲ್ಇಡಿ ವ್ಯವಸ್ಥೆ ಮಾಡಲಾಗುವುದು" ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.

ಬೃಹತ್ ವೇದಿಕೆ ನಿರ್ಮಾಣ
ವಿಜಯನಗರ ಜಿಲ್ಲೆಯ ಕೇಂದ್ರ ಸ್ಥಾನವಾಗಿರುವ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಂಗಳೂರಿನ ಎಂ. ವಿ. ಕನ್ಸಲ್ಟಂಟ್ ಸಂಸ್ಥೆಯು ಉದ್ಘಾಟನಾ ಕಾರ್ಯಕ್ರಮಕ್ಕೆ ಬೃಹತ್ ವೇದಿಕೆ ನಿರ್ಮಾಣ ಮಾಡುತ್ತಿದೆ. ನೆಲದಿಂದ 7 ಅಡಿ ಎತ್ತರದಲ್ಲಿ ವೇದಿಕೆ ಇರಲಿದ್ದು, 120 ಅಡಿ ಅಗಲ, 130 ಅಡಿ ಉದ್ದ ಇರಲಿದೆ. ವೇದಿಕೆಗೆ ಗಣ್ಯರು ತೆರಳಲು 400 ಅಡಿ ಉದ್ದದ ಮಾರ್ಗ ನಿರ್ಮಿಸಲಾಗುತ್ತಿದೆ.
ಪ್ರವಾಸೋದ್ಯಮ, ಪರಿಸರ, ಜೀವಿಶಾಸ್ತ್ರ ಹಾಗೂ ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದ್ ಸಿಂಗ್ ಮುಖ್ಯಮಂತ್ರಿ ಸೇರಿದಂತೆ ವಿವಿಧ ನಾಯಕರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡುತ್ತಿದ್ದಾರೆ.

ಹಂಪಿ ಸ್ಮಾರಕಗಳ ಮಾದರಿ ನಿರ್ಮಾಣ
250 ನುರಿತ ಕಲಾವಿದರಿಂದ ವೇದಿಕೆಯಲ್ಲಿ ಆಂಜನೇಯ, ಕಲ್ಲಿನತೇರು, ಸಾಸಿವೆ ಕಾಳು ಗಣಪ, ಉಗ್ರನರಸಿಂಹ ಸೇರಿದಂತೆ ವಿವಿಧ ಸ್ಮಾರಕಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ವೇದಿಕೆ ಪ್ರವೇಶ ದ್ವಾರದಲ್ಲೇ ತಾಯಿ ಭುವನೇಶ್ವರಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಮಾತಂಗ ಪರ್ವತದ ವಿಹಂಗಮ ನೋಟ ಹಾಗೂ ಶ್ರೀ ವಿರೂಪಾಕ್ಷೇಶ್ವರ ದೇಗುಲದ ರಾಜ ಗೋಪುರ ನಿರ್ಮಿಸಲಿದ್ದಾರೆ ಕಲಾವಿದರು. ಅಲ್ಲದೇ ಶ್ರೀಕೃಷ್ಣದೇವರಾಯರ 20 ಅಡಿ ಎತ್ತರದ ಪ್ರತಿಮೆಯನ್ನೂ ಕಲಾವಿದರು ತಯಾರು ಮಾಡಲಿದ್ದಾರೆ. ವೇದಿಕೆ ಸುತ್ತ ಹಂಪಿ ಸ್ಮಾರಕಗಳನ್ನು ಹೋಲುವ ಪ್ರತಿಕೃತಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಸುತ್ತಲು ಕನ್ನಡ ನಾಡನ್ನು ಪ್ರತಿಬಿಂಬಿಸುವ ಚಿತ್ರಗಳು ಅನಾವರಣಗೊಳ್ಳಲಿವೆ.

31ನೇ ವಿಜಯನಗರ ಜಿಲ್ಲಾ ಉದ್ಘಾಟನೆ
ವಡಕರಾಯನ ದೇವಸ್ಥಾನದಿಂದ ಜಿಲ್ಲಾ ಕ್ರೀಡಾಂಗಣದವರೆಗೆ ವಿಜಯ ರಥ ಮೆರವಣಿಗೆ ಮೂಲಕ ಕಾರ್ಯಕ್ರಮ ಆರಂಭವಾಗಲಿದೆ. ಈ ಸಾಂಸ್ಕ್ರತಿಕ ಮೆರವಣಿಗೆಯಲ್ಲಿ ಸುಮಾರು 80ರಿಂದ 100 ತಂಡಗಳು ಭಾಗವಹಿಸಲಿವೆ. ರಾಜ್ಯದ 31ನೇ ಜಿಲ್ಲೆಯಾದ ವಿಜಯನಗರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಲಿದ್ದಾರೆ. ಈ ವೇಳೆ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಉಪಸ್ಥಿತರಿರುವರು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ವಿಜಯನಗರ ಜಿಲ್ಲೆ ಘೋಷಣೆ ಮಾಡಿದ್ದರು. ಆದ್ದರಿಂದ ಕಾರ್ಯಕ್ರಮಕ್ಕೆ ಅವರು ಮುಖ್ಯ ಅತಿಥಿಯಾಗಿದ್ದಾರೆ.

ಸಿನಿಮಾ ಹಾಡುಗಳ ರಸದೌತಣ
'ಕಣ್ಣೆ ಅದಿರಿಂದಿ' ಖ್ಯಾತಿಯ ಮಂಗ್ಲಿ, ವಿಜಯ್ ಪ್ರಕಾಶ್ ಅನುರಾಧಾ ಭಟ್ ಮುಂತಾದವರಿಂದ ಸಿನಿಮಾ ಹಾಡುಗಳನ್ನು ಹಾಡುವ ಕಾರ್ಯಕ್ರಮವಿದೆ. ಗಾಯಕಿ ಎಂ. ಡಿ. ಪಲ್ಲವಿ, ಅನನ್ಯ ಭಟ್ ಮೊದಲ ದಿನ ಕಾರ್ಯಕ್ರಮ ನೀಡಲಿದ್ದಾರೆ. ಖ್ಯಾತ ಡ್ರಮ್ ವಾದಕ ಶಿವಮಣಿ, ಪ್ರವೀಣ್ ಗೋಡ್ಕಿಂಡಿ ಸಹ ಆಗಮಿಸಲಿದ್ದು, ಕಾರ್ಯಕ್ರಮ ನೀಡಲಿದ್ದಾರೆ. ನಿರುಪಮಾ ರಾಜೇಂದ್ರ ವಿಜಯನಗರ ನೃತ್ಯರೂಪಕ ಪ್ರದರ್ಶಿಸಲಿದ್ದಾರೆ.
ಇನ್ನೂ ವೇದಿಕೆಯಲ್ಲಿ ಐತಿಹಾಸಿಕ ವಿಜಯನಗರ ಕಿರುಚಿತ್ರ ಮೂಡಿ ಬರಲಿದೆ. ವಿಜಯನಗರ ಜಿಲ್ಲೆಯ ಉದ್ಘಾಟನೆಗೆ ಸ್ಥಳೀಯ 80 ಕಲಾವಿದರ ತಂಡಗಳು ವಿವಿಧ ಕಾರ್ಯಕ್ರಮಗಳನ್ನು ನೀಡಲಿವೆ.












Click it and Unblock the Notifications