ಬೇರೆ ಪಕ್ಷಗಳ ಇಪ್ಪತ್ತು ಶಾಸಕರು 'ಕೈ' ಸೇರ್ತಾರೆ, ನೋಡ್ತಿರಿ ಎಂದ ಪರಂ
ಬಳ್ಳಾರಿ, ಫೆಬ್ರವರಿ 10 : ಇಂದಿನ (ಶನಿವಾರ) ಸಮಾವೇಶದಲ್ಲಿ ಕಾಂಗ್ರೆಸ್ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಆನಂದ್ ಸಿಂಗ್ ಹಾಗೂ ನಾಗೇಂದ್ರ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಇತರ ಪಕ್ಷಗಳ ಇಪ್ಪತ್ತು ಶಾಸಕರು ಕಾಂಗ್ರೆಸ್ ಗೆ ಸೇರ್ಪಡೆ ಆಗಲಿದ್ದಾರೆ ಎಂದು ಮತ್ತೊಮ್ಮೆ ಹುಳ ಬಿಟ್ಟಿದ್ದಾರೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ.
ಈ ಹಿಂದೆ ಕೂಡ ಹಲವು ಬಾರಿ ಈ ಬಗ್ಗೆ ಮಾತನಾಡಿದ್ದ ಅವರು, ಶನಿವಾರ ಬಳ್ಳಾರಿಯಲ್ಲಿ ಮಾಧ್ಯಮದವರ ಜತೆ ಮಾತನಾಡಿ, ಬೇರೆ ಪಕ್ಷಗಳ ಇಪ್ಪತ್ತು ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ರಾಜ್ಯದಲ್ಲಿ ನಾವು ಮತ್ತೆ ಅಧಿಕಾರ ಹಿಡಿಯುವುದು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ ಇಪ್ಪತ್ತು ಶಾಸಕರು ಕೈ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎಂಬ ಸಂಗತಿ ಅಚ್ಚರಿಗೆ ಕಾರಣವಾಗಿದೆ.
ರಾಹುಲ್ ದೇವಸ್ಥಾನ ಭೇಟಿಗೂ ಕಾಂಗ್ರೆಸ್ ರಣತಂತ್ರಕ್ಕೂ ಸಂಬಂಧವಿಲ್ಲ: ಪರಮೇಶ್ವರ್
ಚುನಾವಣೆ ವರ್ಷವಾದ್ದರಿಂದ ಪಕ್ಷಾಂತರ, ನಿಷ್ಠಾಂತರ ಯಾವುದೇ ಕುತೂಹಲ ಮೂಡಿಸುವುದಿಲ್ಲ. ಆದರೆ ಏಕಾಏಕಿ ಇಪ್ಪತ್ತು ಶಾಸಕರು ಪಕ್ಷವನ್ನೇ ಬದಲಿಸುವುದು ಅಂದರೆ ಅಚ್ಚರಿಯೂ ಹೌದು, ಅನುಮಾನವೂ ಹೌದು. ಆದರೆ ಈ ಬಗ್ಗೆ ಹೇಳಿಕೆ ನೀಡಿದವರು ಪರಮೇಶ್ವರ್ ಆದ್ದರಿಂದ ಅನಿರೀಕ್ಷಿತವನ್ನು ನಿರೀಕ್ಷಿಸಬಹುದು.