ಒರಿಸ್ಸಾ: ಬಳ್ಳಾರಿ ಗಣಿ ಅಧಿಕಾರಿ ಇಬ್ರಾಹಿಂ ಷರೀಫ್ ಪತ್ತೆ
'2013ರ ನವೆಂಬರ್ 25 ರಿಂದ ನಾಪತ್ತೆಯಾಗಿದ್ದ ತಮ್ಮ ಪುತ್ರ ಒರಿಸ್ಸಾದ ಗಣಿ ಅಧಿಕಾರಿ ಇಬ್ರಾಹಿಂ ಷರೀಫ್ ಅವರು ಪತ್ತೆಯಾಗಿದ್ದಾರೆ' ಎಂದು ಇಬ್ರಾಹಿಂ ಅವರ ತಂದೆ ಗಿಡ್ಡುಸಾಬ್ ಅವರು ಬಳ್ಳಾರಿಯ ಸಂಡೂರಿನಿಂದ ಟಿವಿ9ಗೆ ತಿಳಿಸಿದ್ದಾರೆ.
ಇಂದು ಬೆಳಗ್ಗೆ ಡೆಹ್ರಾಡೂನ್ ನಲ್ಲಿ ತಮ್ಮ ಪುತ್ರ ಇಬ್ರಾಹಿಂ ಷರೀಫ್ (Ibrahim Sharief) ಪತ್ತೆಯಾಗಿದ್ದಾರೆ. ಅವರನ್ನು ಭುವನೇಶ್ವರದ ಮನೆಗೆ ಕರೆತರಲಾಗಿದೆ. ತಕ್ಷಣ ತಾನು ಭುವನೇಶ್ವರಕ್ಕೆ ತೆರಳುತ್ತಿರುವಾಗಿ ಗಿಡ್ಡುಸಾಬ್ ಅವರು ಅತೀವ ಸಂತೋಷ ವ್ಯಕ್ತಪಡಿಸಿದ್ದಾರೆ. 'ತಮ್ಮ ಸೊಸೆ ಫೋನ್ ಮಾಡಿ ಸುದ್ದಿಯನ್ನು ಖಚಿತಪಡಿಸಿದ್ದಾರೆ' ಎಂದೂ ಗಿಡ್ಡುಸಾಬ್ ತಿಳಿಸಿದ್ದಾರೆ.
ಇಬ್ರಾಹಿಂ ಷರೀಫ್ ಹೇಗೆ ಪತ್ತೆಯಾದರು? ಪೊಲೀಸರೇ ಪತ್ತೆ ಹಚ್ಚಿದರಾ? ಅಥವಾ ಸಂಬಂಧಿಕರ ತೀವ್ರ ಪ್ರಯತ್ನ ಫಲವಾಗಿ ಸಿಕ್ಕಿದರಾ? ಗಣಿ ಲಾಬಿ ಅವರನ್ನು ಅಪಹರಿಸಿತ್ತಾ? ಸ್ವತಃ ಅವರೇ ಮನೆ ಬಿಟ್ಟು ಹೋಗಿದ್ದರಾ? ಎಂಬ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ನಾಪತ್ತೆಯಾದ ಒಂದು ತಿಂಗಳಲ್ಲಿಯೇ ಇಬ್ರಾಹಿಂ ಷರೀಫ್ ಅವರು ಡೆಹ್ರಾಡೂನ್ ನಲ್ಲಿರುವುದಾಗಿಯೂ, ಅಲ್ಲಿ ತಮ್ಮ ಫೇಸ್ ಬುಕ್ ಖಾತೆಯನ್ನು ಚಾಲೂ ಮಾಡಿದ್ದಾರೆ ಎಂದೂ ಕೆಲ ಮೂಲಗಳು ಹೇಳಿದ್ದವು. ಅದಕ್ಕೆ ಪುಷ್ಠಿ ಕೊಡುವಂತೆ ಇಬ್ರಾಹಿಂ ಇದೀಗ ಡೆಹ್ರಾಡೂನ್ ನಲ್ಲಿಯೇ ಪತ್ತೆಯಾಗಿದ್ದಾರೆ.
ಒರಿಸ್ಸಾದ ಭುವನೇಶ್ವರದಲ್ಲಿ ಸರಕಾರಿ ಗಣಿ ಅಧಿಕಾರಿಯಾಗಿದ್ದ (Aassistant Controller of Mines -Indian Bureau of Mines, Orissa) ಇಬ್ರಾಹಿಂ ಷರೀಫ್ ಅವರು ಉತ್ತರಾಖಂಡ ರಾಜ್ಯದ ಡೆಹ್ರಾಡೂನ್ ನಲ್ಲಿ ಮತ್ತೆಯಾಗಿದ್ದಾರೆ ಎಂದು ಇಬ್ರಾಹಿಂ ಸೋದರ ಜಿಲಾನ್ ಸಹ ಟಿವಿ9ಗೆ ಮಾಹಿತಿ ನೀಡಿದ್ದಾರೆ. 'ತೀವ್ರ ಡಿಪ್ರೆಸ್ ಆಗಿರುವ ಗಣಿ ಅಧಿಕಾರಿ ಇಬ್ರಾಹಿಂ ಷರೀಫ್ ಅವರ ಆರೋಗ್ಯ ಏರುಪೇರಾಗಿದೆ' ಎಂದು ಸೋದರರು ತಿಳಿಸಿದ್ದಾರೆ.
ಇದೇ ವೇಳೆ ಇಬ್ರಾಹಿಂ ಷರೀಫ್ ಅವರ ನಾಪತ್ತೆ ಹಿಂದೆ ಭುವನೇಶ್ವರದ ಗಣಿ ಉದ್ಯಮಿಗಳ ಕೈವಾಡವಿತ್ತು ಎಂದು ಷರೀಫ್ ಕುಟುಂಬಸ್ಥರು ಈ ಹಿಂದೆ ಆರೋಪಿಸಿದ್ದರು. ಅಕ್ರಮ ಮೈನಿಂಗ್ ವಿರುದ್ಧ ಕ್ರಮಕ್ಕೆ ಮುಂದಾಗಿದ್ದ ಷರೀಫ್ ಅವರನ್ನು ಗಣಿ ಉದ್ಯಮಿಗಳೇ ಅಪಹರಿಸಿರಬಹುದು ಎಂದು ಕುಟುಂಬಸ್ಥರು ಆರೋಪಿಸಿದ್ದರು. ಈ ಸಂಬಂದ ಭುವನೇಶ್ವರದ ಇಂಪೋಸಿಟಿ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು.
ಅಲ್ಲದೆ ತಮ್ಮ ಮಗ ಇಬ್ರಾಹಿಂ ಷರೀಫ್ ಅವರನ್ನು ಹುಡುಕಿ ಕೊಡುವಂತೆ ಷರೀಫ್ ಅವರ ತಂದೆ ಗಿಡ್ಡು ಸಾಬ್ ಅವರು ಕರ್ನಾಟಕ ಸರ್ಕಾರದ ಮೊರೆ ಹೋಗಿದ್ದರು. ಅಂತೆಯೇ ಕೇಂದ್ರದ ಗಣಿ ಇಲಾಖೆಯನ್ನು ಕೂಡ ಸಂಪರ್ಕಿಸಿ ತಮ್ಮ ಮಗನ ನಾಪತ್ತೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಮನವಿ ಮಾಡಿದ್ದರು.