ನೇಮಿರಾಜ್ ನಾಯ್ಕ ಗೆಲ್ಲಲೆಂದು ದೀರ್ಘ ದಂಡ ನಮಸ್ಕಾರ ಹಾಕಿದ ಬೆಂಬಲಿಗರು
ಬಳ್ಳಾರಿ, ಏಪ್ರಿಲ್ 26 : ಹಗರಿಬೊಮ್ಮನಹಳ್ಳಿ ಎಸ್ಸಿ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನೇಮಿರಾಜ್ ನಾಯ್ಕ ಗೆಲ್ಲುವ ಹರಕೆ ಹೊತ್ತು ಕ್ಷೇತ್ರದ ಕ್ಯಾತಾಯನಮರಡಿ ಮತ್ತು ಕೆ. ಓಬಳಾಪುರ ಗ್ರಾಮದಲ್ಲಿನ ಅವರ ಅಭಿಮಾನಿಗಳು ಗ್ರಾಮ ದೇವತೆ ಕರಿಮಯ್ಯ ಮತ್ತು ಆಂಜನೇಯ ಸ್ವಾಮಿಗೆ ಧೀರ್ಘ ದಂಡ ನಮಸ್ಕಾರ ಹಾಕಿ ವಿಶೇಷ ಪೂಜೆ ಸಲ್ಲಿಸಿ, ಶುಭ ಹಾರೈಸಿದರು.
ಕ್ಯಾತಾಯನಮರಡಿ ಗ್ರಾಮದಲ್ಲಿ ಹೆಬ್ಬಾಳ ಸಿದ್ದಯ್ಯ ಎಂಬುವವರು ಗ್ರಾಮದ ಆಂಜನೇಯ ದೇವಸ್ಥಾನದಿಂದ ಗ್ರಾಮದೇವತೆ ಕರಿಯಮ್ಮ ದೇವಸ್ಥಾನದವರೆಗೆ ಪ್ರಮುಖ ಬೀದಿಗಳಲ್ಲಿ ದೀರ್ಘ ದಂಡ ನಮಸ್ಕಾರಗಳನ್ನು ಹಾಕಿ ಬಿಜೆಪಿ ಅಭ್ಯರ್ಥಿ ನೇಮಿರಾಜ್ ಗೆಲ್ಲಬೇಕು ಎಂದು ವಿಶೇಷ ಪೂಜೆ ಸಲ್ಲಿಸಿ, ಗ್ರಾಮಸ್ಥರ ಗಮನ ಸೆಳೆದರು. ಸಿದ್ದಯ್ಯ ಅವರ ದೀರ್ಘದಂಡ ನಮಸ್ಕಾರ ಕಂಡು, ಅನೇಕರು ನಮಸ್ಕಾರ ಹಾಕಲು ಸ್ವಯಂ ಪ್ರೇರಿತರಾಗಿ ಮುಂದಾಗಿದ್ದು ವಿಶೇಷ.
ಕಾಳೇಶ್ವರನಿಗೆ, ತಿಮ್ಮಪ್ಪನಿಗೆ ನಮಿಸಿ ಜನರ ಆಶೀರ್ವಾದ ಬೇಡಿದ ಸೋಮಶೇಖರ
ಗ್ರಾಮದ ಬಿಜೆಪಿ ಮುಖಂಡ ಇಟಗಿ ಈರಣ್ಣ, ನೇಮಿರಾಜ್ ನಾಯ್ಕ ಅವರು ಶಾಸಕರಾಗಿದ್ದಾಗ ಗ್ರಾಮಕ್ಕೆ ಅವಶ್ಯವಿರುವ ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡಿಕೊಟ್ಟಿದ್ದರು. ಕ್ಷೇತ್ರದಲ್ಲಿ ಆರೋಗ್ಯಕರವಾದ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದರು. ಅದಕ್ಕಾಗಿ ಗ್ರಾಮಸ್ಥರು ಅವರ ಗೆಲುವಿಗಾಗಿ ಹರಕೆ ಹೊತ್ತಿದ್ದೇವೆ ಎಂದರು.
ಹೆಬ್ಬಾಳ ಸಿದ್ಧಯ್ಯ ಮಾತನಾಡಿ, ಜನಸಾಮಾನ್ಯರ ಬೇಡಿಕೆಗಳಿಗೆ ಕೂಡಲೇ ಸ್ಪಂದಿಸುವ ಕ್ರೀಯಾಶೀಲ ಗುಣಗಳನ್ನು ಹೊಂದಿರುವ ನೇಮಿರಾಜನಾಯ್ಕ ಎಂದಿಗೂ ದುಡ್ಡಿನ ದರ್ಪವನ್ನು ತೋರಿಸಲಿಲ್ಲ. ಯಾರೊಬ್ಬರೊಂದಿಗೂ ಸೊಕ್ಕಿನಿಂದ ನಡೆದುಕೊಳ್ಳಲಿಲ್ಲ. ಕಾರಣ ಮುಂದಿನ ದಿನಗಳಲ್ಲಿ ಕ್ಷೇತ್ರದ ಶಾಸಕರನ್ನಾಗಿಸುವುದೇ ನಮ್ಮ ಹೆಬ್ಬಯಕೆಯಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮದ ಬಹುತೇಕರು ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸಮಾಡಲು ಉತ್ಸುಕರಾಗಿದ್ದೇವೆ ಎಂದರು.
ಗ್ರಾಮಸ್ಥರು ಮಾತನಾಡಿ, ನಮ್ಮೂರ ಗ್ರಾಮ ದೇವರುಗಳು ನಂಬಿದವರನ್ನು ಎಂದಿಗೂ ಕೈ ಬಿಡುವುದಿಲ್ಲ ಎನ್ನುವ ಮಹತ್ತರವಾದ ನಂಬಿಕೆ ನಮ್ಮಲ್ಲಿದೆ. ಶಕ್ತಿ ದೇವರುಗಳಾದ ಆಂಜನೇಯ ಮತ್ತು ಗ್ರಾಮದೇವತೆ ಕರಿಯಮ್ಮ ನಮ್ಮ ಇಷ್ಟಾರ್ಥಗಳನ್ನು ಖಚಿತವಾಗಿ ಈಡೇರಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.