ಸಿದ್ದರಾಮಯ್ಯ ಏಳು ಕೆರೆ ನೀರು ಕುಡಿದಿದ್ದಾರೆ, ಅವರು ಸ್ವಾರ್ಥ ರಾಜಕಾರಣಿ : ಮೋದಿ
ಬಳ್ಳಾರಿ, ಮೇ 03: ಬಳ್ಳಾರಿಯು ಕಳ್ಳರ ಪ್ರದೇಶ, ಲೂಟಿಕೋರರ ಪ್ರದೇಶ ಎಂದು ಕಾಂಗ್ರೆಸ್ ಬಳ್ಳಾರಿಯನ್ನು ರಾಷ್ಟ್ರಮಟ್ಟದಲ್ಲಿ ಬಿಂಬಿಸುತ್ತಿದೆ, ಇದು ಇಲ್ಲಿನ ಜನರಿಗೆ ಮಾಡುವ ಅವಮಾನ ಎಂದು ನರೇಂದ್ರ ಮೋದಿ ಅವರು ಬಳ್ಳಾರಿ ಜನತೆಯ ಸ್ವಾಭಿಮಾನವನ್ನು ಬಡಿದೆಬ್ಬಿಸಿದ್ದಾರೆ.
ಬಳ್ಳಾರಿಯಲ್ಲಿ ಗುರುವಾರ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಜಯನಗರ ಸಾಮ್ರಾಜ್ಯದ ಈ ನೆಲವನ್ನು ಕಳ್ಳರ, ಲೂಟಿಕೋರರ ನೆಲ ಎಂದು ಹಂಗಿಸಿದ ಕಾಂಗ್ರೆಸ್ಗೆ ಮತ ಹಾಕಬೇಡಿ ಅವರಿಗೆ ತಕ್ಕ ಪಾಠ ಕಲಿಸಿ ಎಂದು ಮೋದಿ ಕರೆ ನೀಡಿದರು.
ಇಲ್ಲಿನ ಹಂಪಿಯನ್ನು ನಮ್ಮ ಕೇಂದ್ರ ಸರ್ಕಾರ ನೋಟಿನ ಮೇಲೆ ಮುದ್ರಿಸಿದ್ದೇವೆ, ಇಲ್ಲಿನ ವಿಫುಲವಾದ ಪ್ರವಾಸೋದ್ಯಮ ಅವಕಾಶ, ಮೆಡಿಕಲ್ ಟೂರಿಸಂ ಅವಕಾಶ ಇದ್ದರೂ ಕೂಡ ಕರ್ನಾಟಕದ ಸರ್ಕಾರ ತನ್ನ ಸ್ವಾರ್ಥ ರಾಜಕಾರಣಕ್ಕಾಗಿ ಇದನ್ನೆಲ್ಲಾ ನಿರಾಕರಿಸಿದೆ ಎಂದರು.
ಮತ್ತೆ ಸೀದಾ ರುಪಯ್ಯಾ ಬಗ್ಗೆ ಮಾತನಾಡಿದ ಮೋದಿ 'ಕರ್ನಾಟಕದಲ್ಲಿ ಸೀದಾ ರುಪಯ್ಯಾ ಸರ್ಕಾರ ಇದೆ. ಈ ರುಪಯ್ಯಾ ಸರ್ಕಾರ ಕರ್ನಾಟಕವನ್ನು ಸಾಲದ ಹೊಳೆಯಲ್ಲಿ ಮುಳುಗಿಸಿದೆ. ಇಲ್ಲಿ ಯಾವುದೇ ಸರ್ಕಾರಿ ಕಚೇರಿಯಲ್ಲಿ ಹಣ ನೀಡದೆ ಕಾರ್ಯವೇ ಆಗುವುದಿಲ್ಲವಂತೆ' ಎಂದು ಅವರು ಹೇಳಿದರು.

ಮಂತ್ರಿಗಳ ಆದಾಯ ಮಾತ್ರ ಹೆಚ್ಚಳ ಆಗ್ತಿದೆ
ಒಂದು ಕಡೆ ಸಿದ್ದರಾಮಯ್ಯ ಅವರ ಆಡಳಿತದಿಂದಾಗಿ ಸಾಲದಿಂದ ಜನ ಸಾಯುತ್ತಿದ್ದರೆ ಅವರ ಸಂಪುಟದ ಮಂತ್ರಿಗಳು ಮಾತ್ರ ಹೇಗೆ ಶ್ರೀಮಂತರಾಗುತ್ತಿದ್ದಾರೆ ಎಂದು ನೀವು ಪ್ರಶ್ನೆ ಕೇಳಬೇಕು ಎಂದು ಮೋದಿ ಹೇಳಿದರು. ಖೇಣಿಗೆ ಸೀಟು ಕೊಟ್ಟಿರುವ ಬಗ್ಗೆ ಮಾತನಾಡಿದ ಮೋದಿ ರೈತರ ಜಮೀನು ಹೊಡೆದವರಿಗೆ ಸಿದ್ದರಾಮಯ್ಯ ಟಿಕೆಟ್ ನೀಡಿದೆ ಎಂದರು.

ಸೋನಿಯಾ ಬಳ್ಳಾರಿಯನ್ನು ಮರೆತರು
ಸೋನಿಯಾ ಗಾಂಧಿ ಅವರು ಇಲ್ಲಿ ಸ್ಪರ್ಧೆ ಮಾಡಿದ್ದಾಗ ಬಳ್ಳಾರಿಗೆ 3000 ಕೋಟಿ ಪ್ಯಾಕೆಜ್ ಕೊಡುವುದಾಗಿ ಘೋಷಿಸಿದ್ದರು ಆದರೆ ಅವರು ಗೆದ್ದ ನಂತರ ಬಳ್ಳಾರಿಯನ್ನೂ ಮರೆತರು 5000 ಕೋಟಿ ಪ್ಯಾಕೆಜ್ ಅನ್ನೂ ಮರೆತರು ಎಂದು ಮೋದಿ ಟೀಕಿಸಿದರು.

ನಾವು ಬಳ್ಳಾರಿಗೆ 2000 ಕೋಟಿ ಕೊಟ್ಟಿದ್ದೆವು
ಬಳ್ಳಾರಿಯ ಪೃಕೃತಿ ಸಂಪನ್ಮೂಲ, ಪ್ರವಾಸೋದ್ಯಮ, ಜೀನ್ಸ್ ಉದ್ಯಮಗಳ ಬಗ್ಗೆ ಮಾತನಾಡಿದ ಮೋದಿ, ಇಲ್ಲಿನ ಜೀನ್ಸ್ ಉದ್ಯಮಕ್ಕೆ ಸರ್ಕಾರ ಸರಿಯಾಗಿ ಪ್ರೋತ್ಸಾವನ್ನೇ ನೀಡಲಿಲ್ಲ ಎಂದು ಜರಿದರು. ಆದರೆ ನಾವು ಬಳ್ಳಾರಿಗೆ 2000 ಕೋಟಿ ಬಳ್ಳಾರಿಗೆ ನೀಡಿದ್ದೆವು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಿಂಗ್ ರೋಡ್, ಕುಡಿಯುವ ನೀರಿನ ಸೌಲಭ್ಯ ನಾವು ನೀಡಿದ್ದೇವೆ ಎಂದರು.

ಕರ್ನಾಟಕ-ಮಹಾರಾಷ್ಟ್ರ ಹೋಲಿಕೆ
ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮತ್ತು ಮಹಾರಾಷ್ಟ್ರ ಬಿಜೆಪಿ ಸರ್ಕಾರವನ್ನು ಹೋಲಿಸಿದ ಮೋದಿ ಅವರು, ಇಲ್ಲಿನ ಸರ್ಕಾರ ರಚನೆ ಆದ 2 ವರ್ಷದ ನಂತರ ರಚನೆ ಆದ ಮಹಾರಾಷ್ಟ್ರ ಬಿಜೆಪಿ ಸರ್ಕಾರ ನೀರಿನ ಸಮಸ್ಯೆಯನ್ನು ಅದ್ಬುತವಾಗಿ ನಿರ್ವಹಿಸಿದೆ. ಕೇವಲ 6000 ಕೋಟಿ ಖರ್ಚು ಮಾಡಿ ನೀರಿನ ಬರ ನೀಗಿಸಿದೆ. ಕರ್ನಾಟಕ ಸರ್ಕಾರವು ನೀರಿನ ಯೋಜನೆ ಮಾಡುವುದನ್ನು ಮಹಾರಾಷ್ಟ್ರದಿಂದ ಕಲಿಯಬೇಕು ಎಂದರು.

ಕೇವಲ ಮತಕ್ಕಾಗಿ ಓಲೈಕೆ
ಕಾಂಗ್ರೆಸ್ ಪಕ್ಷವು ವರ್ಷಾನುವರ್ಷಗಳಿಂದ ಹಿಂದುಳಿದ ವರ್ಗದವರ, ದಲಿತರನ್ನು ಕೇವಲ ಮತಕ್ಕಾಗಿ ಬಳಸಿದೆ. ಕೇಂದ್ರವು ಓಬಿಸಿ ಪರವಾದ ಕಾಯ್ದೆ ತರಲು ಹೊರಟರೆ ಅದನ್ನು ಕಾಂಗ್ರೆಸ್ ತಡೆ ಹಿಡಿದಿದೆ ಎಂದರು. ಕರ್ನಾಟಕದಲ್ಲಿ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಕೊನೆಗೆ ಅವರಿಗೆ ಅನ್ಯಾಯ ಮಾಡಿ ತನ್ನ ದಲಿತ ವಿರೋಧಿ ನೀತಿಯನ್ನು ತೋರಿಸಿದೆ ಎಂದರು.

ನಾವು ಮುಸ್ಲಿಂ, ದಲಿತ ರಾಷ್ಟ್ರಪತಿ ಕೊಟ್ಟಿದ್ದೇವೆ
ಬಿಜೆಪಿಯು ಬನಿಯಾ ಬ್ರಾಹ್ಮಣರ ಪಕ್ಷ, ಮುಸ್ಲಿಂ ವಿರೋಧಿ, ದಲಿತ ವಿರೋಧಿ ಎನ್ನಲಾಗುತ್ತದೆ ಆದರೆ ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿ ನಾವು ದೇಶಕ್ಕೆ ಮುಸ್ಲಿಂ ರಾಷ್ಟ್ರಪತಿ ಕೊಟ್ಟೆವು (ಅಬ್ದುಲ್ ಕಲಾಂ), ಈಗ ದಲಿತ ರಾಷ್ಟ್ರಪತಿ ಕೊಟ್ಟಿದ್ದೇವೆ (ರಮಾನಾಥ ಕೋವಿಂದ್). ಅಷ್ಟೆ ಅಲ್ಲ ನಾವು ದೇಶದ ಪ್ರಥಮ ರಕ್ಷಣಾ ಮಂತ್ರಿಯನ್ನೂ ಕೊಟ್ಟಿದ್ದೇವೆ. ಬಿಜೆಪಿಯನ್ನು ಉತ್ತರ ಭಾರತದ ಪಕ್ಷ ಎನ್ನಲಾಗುತ್ತದೆ ಆದರೆ ನಾವು ರಾಷ್ಟ್ರದ ಉಪರಾಷ್ಟ್ರಪತಿಯನ್ನಾಗಿ ದಕ್ಷಿಣ ಭಾರತದ ವೆಂಕಯ್ಯ ನಾಯ್ಡು ಅವರನ್ನು ಆಯ್ಕೆ ಮಾಡಿದ್ದೇವೆ ಎಂದು ಮೋದಿ ಉತ್ತರ ನೀಡಿದರು.

ಪಾದ ಯಾತ್ರೆಯ ನಾಟಕ ಮಾಡಿದ್ದರು
ಸಿದ್ದರಾಮಯ್ಯ ಅವರ ಮೇಲೆ ವೈಯಕ್ತಿಕ ಟೀಕೆಗಳನ್ನು ಮಾಡಿದ ಮೋದಿ ಅವರು, 'ಸಿದ್ದರಾಮಯ್ಯ ಏಳು ಕೆರೆ ನೀರು ಕುಡಿದ್ದಾರೆ, ಜನತಾದಳ ಸೇರಿದಂತೆ ಹಲವು ಪಕ್ಷ ನೋಡಿ ಬಂದಿದ್ದಾರೆ, ಬಳ್ಳಾರಿಗೆ ಪಾದಯಾತ್ರೆಯ ನಾಟಕ ಮಾಡಿದ ಅವರು ಅಧಿಕಾರಕ್ಕೆ ಬಂದ ನಂತರ ಗಣಿ ಪಾಲಿಸಿ ಸಹ ಮಾಡಲಿಲ್ಲ, ಅವರೊಬ್ಬ ಸ್ವಾರ್ಥ ರಾಜಕಾರಣಿ, ಎಂದರು ಜೊತೆಗೆ ಅವರು ನಿದ್ದೆ ಮಾಡುವ ಮುಖ್ಯಮಂತ್ರಿ ಹಾಗೂ ನಿದ್ದೆ ಮಾಡುವ ಸರ್ಕಾರ ಅವರದ್ದು ಎಂದು ದೂರಿದರು.












Click it and Unblock the Notifications