ಉರುಳಿ ಬೀಳುತ್ತಿವೆ ಹಂಪಿ ಸ್ಮಾರಕಗಳು, ಬೇಕಿದೆ ರಕ್ಷಣೆ
ವಿಜಯನಗರ, ಮಾರ್ಚ್ 18; ವಿಶ್ವವಿಖ್ಯಾತ ಹಂಪಿಗೆ ಪ್ರತಿದಿನ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಹಂಪಿಯಲ್ಲಿನ ಸ್ಮಾರಕಗಳ ರಕ್ಷಣೆಗಾಗಿ ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ಕೂಡಾ ಇದೆ. ಸ್ಮಾರಕಗಳು ಕುಸಿದು ಬೀಳುವ ಪ್ರಕರಣ ವರದಿಯಾಗುತ್ತಿದ್ದು, ಸ್ಮಾರಕಗಳಿಗೆ ರಕ್ಷಣೆ ಬೇಕಿದೆ.
ಹಂಪಿಯ ಅಳಿಯ ರಾಮರಾಯ ಕಾಲದಲ್ಲಿ ನಿರ್ಮಿಸಿದ ಕೋಟೆಯ ಗೋಡೆ ಕೆಲವು ದಿನಗಳ ಹಿಂದೆ ಕುಸಿತವಾಗಿದೆ. ಕಮಲ್ ಮಹಲ್ ಬಳಿ ಇರುವ ಅರಮನೆಯ ಕೋಟೆ ಇದಾಗಿದ್ದು, 500-600ಗಳ ವರ್ಷಗಳ ಹಿಂದೆ ಅಳಿಯ ರಾಮರಾಯ ನಿರ್ಮಿಸಿದ್ದ ಎನ್ನುತ್ತದೆ ಇತಿಹಾಸ.
ವಿಶ್ವ ಪರಂಪರೆ ತಾಣಗಳಲ್ಲಿ ಒಂದಾದ ಹಂಪಿ ಸ್ಮಾರಕಗಳಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಪದೇ ಪದೇ ಸ್ಮಾರಕಗಳು ಉರುಳಿ ಬೀಳುತ್ತಿರುವ ಪ್ರಕರಣಗಳು ಇದಕ್ಕೆ ಸಾಕ್ಷಿಯಾಗಿದೆ. ಹಂಪಿ ಸಂರಕ್ಷಣೆಗಾಗಿ ಮೂರು ಇಲಾಖೆ, ನೂರಾರು ಅಧಿಕಾರಿ-ಸಿಬ್ಬಂದಿಗಳು ಇದ್ದರೂ ಸ್ಮಾರಕಗಳಿಗೆ ಧಕ್ಕೆಯಾಗುವಂತ ಪ್ರಕರಣಗಳು ನಡೆಯುತ್ತಲೇ ಇದೆ.
ಅರಮನೆಯ ಕೋಟೆ ಗೋಡೆ ಬಿದ್ದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ವಿಜಯನಗರ ಅರಸರ ವಂಶಸ್ಥರು, ಒಂದು ಭಾಗ ಉರುಳಿ ಬಿದ್ದಿದೆ. ಅದು ಬಿಸಿಲು, ಮಳೆಗೆ ಕುಸಿದಿರಬಹುದು ಅಥಾವ ಇತ್ತೀಚಿಗೆ ಹತ್ತಿರದಲ್ಲಿ ಕೊಳೆವೆ ಬಾವಿ ಕೊರೆಸಲಾಗಿದೆ. ಅದರ ಕಂಪನದಿಂದ ಉರುಳಿ ಬಿದ್ದಿರುವ ಸಾಧ್ಯತೆ ಇದೆ. ಸ್ಮಾರಕಗಳು ಉರುಳಿ ಬೀಳುವ ಮುನ್ನ ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಅವುಗಳ ಸಂರಕ್ಷಣೆ ಮಾಡಬೇಕು ಎಂದು ಹೇಳಿದರು.

ಮೂರು ಇಲಾಖೆಗಳಿಂದ ನಿರ್ವಹಣೆ
ಕೇಂದ್ರ ಹಾಗೂ ರಾಜ್ಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಹಂಪಿ ವಿಶ್ವ ಪರಂಪರೆ ನಿರ್ವಾಹಣಾ ಪ್ರಾಧಿಕಾರ ಇದ್ದರೂ ಹಂಪಿ ಸ್ಮಾರಕಗಳಿಗೆ ರಕ್ಷಣೆ ಕೊರತೆ ಕಾಡುತ್ತಿದೆ. ಹಂಪಿ ಅಭಿವೃದ್ದಿಗಾಗಿ ಸಾವಿರಾರು ಕೋಟಿ ಖರ್ಚು ಆಗುತ್ತಿದ್ದರೂ ಸ್ಮಾರಕಗಳು ರಕ್ಷಣೆಯಾಗುತ್ತಿಲ್ಲ, ದಿನಗಳು ಉರುಳಿದ ಹಾಗೆ ಸ್ಮಾರಕಗಳು ಉರುಳಿ ಬೀಳುತ್ತಿವೆ.

ಕೋಟೆ ಶಿಥಲವಾಗಿದೆ
ಹಂಪಿ ಸ್ಮಾರಕಗಳ ರಕ್ಷಣೆ ವಿಚಾರದಲ್ಲಿ ಅಧಿಕಾರಿಗಳಿ ನಿರ್ಲಕ್ಷ್ಯ ಮಾಡುತ್ತಿದ್ದಾರೆಯೇ? ಎಂಬ ಅನುಮಾನ ಕಾಡುತ್ತಿದೆ. ಪದೇ ಪದೆ ಸ್ಮಾರಕಗಳು ಬೀಳುತ್ತಿವೆ. ಕಮಲ ಮಹಲ್ ಬಳಿಯ ಅರಮನೆಯ ಗೋಡೆ ಕುಸಿದು ಬಿದ್ದಿರುವ ಪ್ರಕರಣ ತಾಜ ಉದಾರಣೆಯಾಗಿದೆ. ಇದಕ್ಕೆ ಅಂಟಿಕೊಂಡಿರುವ ಕೋಟೆಯ ಕಾವಲು ಗೋಪುರದ ಹತ್ತಿರದ ಒಂದು ಭಾಗ ಕೋಟೆ ಶಿಥಿಲವಾಗಿದ್ದು, ಅದು ಕೂಡ ಬೀಳುವ ಹಂತದಲ್ಲಿದೆ.

ಸ್ಥಳೀಯರು ಹೇಳುವುದೇನು?
ಸ್ಮಾರಕಗಳ ಕುರಿತು ಮಹೇಶ್ ಎನ್ನುವ ಸ್ಥಳೀಯರು ಮಾತನಾಡಿದ್ದಾರೆ. "ಹಜಾರರಾಮ ದೇವಾಲಯದ ಹಿಂಭಾಗದ ದಂಡನಾಯಕ ಕೋಟೆ, ಕಡಲೆಕಾಳು ಗಣಪತಿ ದೇವಾಲಯದ ಹತ್ತಿರದ ಶಿವರಾಮಧೂತ ಮಠಕ್ಕೆ ಅಂಟಿಕೊಂಡಿರುವ ಕೋಟೆ ಸೇರಿದಂತೆ ಇತರೆ ಸ್ಮಾರಕಗಳು ಶಿಥಲಾವ್ಯಸ್ಥೆ ತಲುಪಿದೆ. ವಿರೂಪಾಕ್ಷೇಶ್ವರ ದೇವಾಲಯದ ರಥ ಬೀದಿಯ ಕೆಲ ಸಾಲು ಮಂಟಪ, ವಿರೂಪಾಕ್ಷ ದೇವಾಲಯ ಹಿಂಭಾಗದಲ್ಲಿರುವ ಪುಷ್ಕರಣಿ ಬಳಿಯ ಶಿವ ಮಂದಿರದ ಗೋಡೆ, ತುಲಭಾರ ಮಂಟಪದ ಬಲ ಭಾಗದಲ್ಲಿರುವ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದ ಮುಂದಿನ ಗೋಡೆ, ಕುದರೆ ಮಂಟಪ, ಕೃಷ್ಣ ಬಜಾರ್ನ ಸಾಲು ಮಂಟಪ ಸೇರಿ ಅಪರೂಪದ ಸ್ಮಾರಕಗಳು ಈ ಹಿಂದೆ ಕುಸಿದು ಬಿದ್ದಿವೆ" ಎಂದು ಹೇಳಿದ್ದಾರೆ.

ನಿಧಿ ಚೋರರ ದಾಳಿಯಿಂದ ಹಾನಿ
ಕೆಲವು ಕಡೆ ಕುಸಿದು ಬಿದ್ದ ಸ್ಮಾರಕಗಳ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ. ಕೆಲವು ಕಡೆ ನೆಲದ ಮೇಲೆ ಉರುಳಿ ಬಿದ್ದ ಅವಶೇಷಗಳು ಮೂಕ ವೇದನೆ ಅನುಭವಿಸುತ್ತಿವೆ. ಇನ್ನೂ ನಿಧಿ ಚೋರರ ದಾಳಿಗೆ ಹಲವು ದೇವಾಲಯಗಳನ್ನು ಅಗೆದು ಹಾನಿ ಮಾಡಲಾಗಿದೆ. ಕೆಲ ವಿಗ್ರಹಗಳನ್ನು ವಿರೂಪಗೊಳಿಸಲಾಗಿದೆ. ಈ ಹಿಂದೆ ನಿಧಿ ಆಸೆಗಾಗಿ ಮಲ್ಯಾವಂತ ರಘುನಾಥ ದೇವಾಲಯದ ಗಾಳಿಗೋಪುರವನ್ನು ದುಷ್ಕರ್ಮಿಗಳು ದ್ವಂಸಗೊಳಿಸಿದ್ದರು ಎಂದು ಸ್ಥಳೀಯರು ಹೇಳುತ್ತಾರೆ.












Click it and Unblock the Notifications