ಭವಿಷ್ಯ ನುಡಿದ ಗೊರವಯ್ಯ ಮಾಲತೇಶಪ್ಪ ಬದುಕ ಕಷ್ಟ, ನಷ್ಟಗಳು
ವಿಜಯನಗರ, ಜೂನ್ 22; 'ಸದ್ದಲೇ ಪಾರಕ್'... 31 ವರ್ಷಗಳ ಕಾಲ ಶ್ರೀ ಮೈಲಾರ ಕಾರ್ಣಿಕೋತ್ಸವದಲ್ಲಿ 'ಸದ್ದಲೇ' ಎಂದು ಭಕ್ತರಿಗೆ ಹೇಳುತ್ತಿದ್ದ ಗೊರವಯ್ಯ ಮಾಲತೇಶಪ್ಪ ವಿಧಿವಶರಾಗಿದ್ದಾರೆ. ಬದುಕಿನ ಪಯಣ ಮುಗಿಸಿ ಲಿಂಗೈಕ್ಯರಾಗಿದ್ದಾರೆ. ಕಾರ್ಣಿಕ ನುಡಿಯುವಾಗ 'ಸದ್ದಲೇ ಪಾರಕ್' ಎಂಬ ಘೋಷಣೆ ಮೊಳಗುತ್ತಿದ್ದಂತೆ ಇಡೀ ಭಕ್ತರ ಸಮೂಹ ಸ್ತಬ್ದವಾಗಿಬಿಡುತ್ತಿತ್ತು.
Recommended Video
ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ಮೈಲಾರದ ಕಾರ್ಣಿಕ ನುಡಿಯುತ್ತಿದ್ದ ಮಾಲತೇಶಪ್ಪ ಗೊರವಯ್ಯ (75) ಮಂಗಳವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ. ಕಂಚಿನ ಕಂಠದಿಂದ ಕಾರ್ಣಿಕ ನುಡಿಯುತ್ತಿದ್ದ ಮಾಲತೇಶಪ್ಪ ನಿಧನಕ್ಕೆ ಭಕ್ತರು ಕಂಬನಿ ಮಿಡಿದಿದ್ದಾರೆ.
ವಿಜಯನಗರ; ಕಾರ್ಣಿಕ ಹೇಳುತ್ತಿದ್ದ ಗೊರವಯ್ಯ ಮಾಲತೇಶಪ್ಪ ನಿಧನ
ಸುಕ್ಷೇತ್ರ ಶ್ರೀ ಮೈಲಾರ ಲಿಂಗೇಶ್ವರ ದೇವಾಲಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಶ್ರೇಷ್ಠ ಮುನಿಗಳು 1990ರ ದಶಕದಲ್ಲಿ ಕಪಿಲಮುನಿಗಳ ಪೀಠದ ಗುರುಗಳಿಂದ ದೀಕ್ಷೆ ಪಡೆದು ಮುನಿಗಳ ಪಾತ್ರಕ್ಕೆ ಭಾಜನರಾದರು.
ಈ ಬಾರಿ ಮೈಲಾರ ಕಾರ್ಣಿಕ ಅನುಮಾನ: ಕಳೆದ ವರ್ಷ ಭವಿಷ್ಯ ನುಡಿದಿದ್ದೇನು, ಆಗಿದ್ದೇನು?
ಗೊರವಯ್ಯ ಜಗತ್ತಿನ ಏಳುಬೀಳು, ರಾಜಕೀಯ ಬೆಳವಣಿಗೆ ಹಾಗೂ ಪ್ರಕೃತಿ ವಿಕೋಪಗಳು ಕುರಿತಂತೆ ದೇವವಾಣಿ ನುಡಿಯುತ್ತಾರೆ ಎನ್ನುವುದು ಭಕ್ತರ ಬಲವಾದ ನಂಬಿಕೆ. ಇದಕ್ಕಾಗಿ ಪ್ರತಿವರ್ಷ ಲಕ್ಷಾಂತರ ಭಕ್ತರು ಮೈಲಾರಕ್ಕೆ ಆಗಮಿಸುತ್ತಾರೆ. ಗೊರವಯ್ಯ ನುಡಿಯುವ ಕಾರ್ಣಿಕವನ್ನು ಕೇಳಿ ಆ ವರ್ಷದ ಮಳೆ-ಬೆಳೆಯನ್ನು ಅಳೆಯುತ್ತಾರೆ.
ಮೈತ್ರಿ ಸರ್ಕಾರ ಖತಂ: ನಿಜವಾಯ್ತೆ ಮೈಲಾರಲಿಂಗ ಕಾರ್ಣಿಕ ಭವಿಷ್ಯ?
ಗೊರವಯ್ಯನ ಕಷ್ಟದ ಬದುಕು
ಶ್ರೀ ಮೈಲಾರ ಲಿಂಗೇಶ್ವರನ ಭಕ್ತರಿಗೆ 31 ವರ್ಷಗಳ ಕಾಲ ಕಾರ್ಣಿಕ ಹೇಳಿದ್ದ ಗೊರವಯ್ಯ ಮಾಲತೇಶಪ್ಪ ಹೆಂಡತಿ ಮಕ್ಕಳೊಂದಿಗೆ ನೆಮ್ಮದಿ ಜೀವನ ನಡೆಸುತ್ತಿದ್ದರು. ಅದು ಯಾಕೋ ತಾನು ಪೂಜಿಸುತ್ತಿದ್ದ ಶ್ರೀ ಮೈಲಾರಲಿಂಗೇಶ್ವರ ಮುನಿಸಿಕೊಂಡೊನೋ ಗೊತ್ತಿಲ್ಲ. 2010ರಲ್ಲಿ ಚೆಂದದ ಸಂಸಾರದಲ್ಲಿ ಬರ ಸಿಡಿಲು ಬಡಿದಂತೆ ಪಾರ್ಶ್ವವಾಯು ಬಂದು ಅಪ್ಪಳಿಸಿತು. ಅಂದಿನಿಂದ ಬದುಕಿನ ಚಿತ್ರಣವೇ ಬದಲಾಗಿ ಹೋಯಿತು. ಕಾರ್ಣಿಕ ನುಡಿಯುವುದನ್ನು ಅನಿವಾರ್ಯವಾಗಿ ನಿಲ್ಲಿಸಬೇಕಾಯಿತು.
ಕಷ್ಟದ ದಿನಗಳನ್ನು ಕಳೆದ ಗೊರವಯ್ಯ
ಉತ್ತರ ಕರ್ನಾಟಕದಲ್ಲೇ ಪ್ರಸಿದ್ಧಿ ಹೊಂದಿರುವ ಶ್ರೀ ಮೈಲಾರ ಲಿಂಗೇಶ್ವರನ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರ ಸಮೂಹದಲ್ಲಿ ಕಾರ್ಣಿಕ ನುಡಿಯುವಾಗ 'ಸದ್ದಲೇ ಪಾರಕ್' ಎಂಬ ಘೋಷಣೆ ಮೊಳಗುತ್ತಿದ್ದಂತೆ ಇಡೀ ಭಕ್ತರ ಸಮೂಹ ಸ್ತಬ್ದವಾಗಿಬಿಡುತ್ತದೆ. ಇಂತಹ ಮೈಲಾರನ ಗೊರವಯ್ಯ ಕಾಯಿಲೆಗೆ ತುತ್ತಾದ ನಂತರ ಒಂದು ಹೊತ್ತಿನ ಊಟಕ್ಕೂ ಕಷ್ಟಪಡಬೇಕಾಯಿತು.
ಸ್ವಂತ ಸೂರು ಇಲ್ಲದೇ ಗೊರವಯ್ಯ ಮಾಲತೇಶಪ್ಪ ಕಷ್ಟಪಡಬೇಕಾಯಿತು. ಶ್ರೀ ಮೈಲಾರ ಲಿಂಗೇಶ್ವರ ದೇವಾಲಯ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುತ್ತದೆ. 31 ವರ್ಷಗಳ ಕಾಲ ಅವರ ಸೇವೆಯನ್ನು ದೇವಾಲಯ ಬಳಸಿಕೊಂಡಿದೆ. ಆದರೆ ಅವರಿಗೆ ಜೀವನೋಪಾಯಕ್ಕೆ ಏನೂ ನೀಡಿಲ್ಲ ಎಂಬ ಮಾತುಗಳು ಇವೆ. ಯಾವುದೇ ಫಲಾಪೇಕ್ಷೆ ಇಲ್ಲದೆ ದೇವಾಲಯದ ಕಾರ್ಯಗಳನ್ನು ಮಾಡಿದ್ದಾರೆ. ಆದರೆ ಅವರಿಗೆ ಉದ್ಯೋಗ ಭದ್ರತೆ ನೀಡಿಲ್ಲ ಅನ್ನುವುದು ಸ್ಥಳೀಯರ ಆರೋಪ.
ಗೊರವಯ್ಯ ಮಾಲತೇಶಪ್ಪಗೆ ಸ್ವಂತ ಸೂರಿಲ್ಲ
ಪಾರ್ಶ್ವವಾಯುಗೆ ತುತ್ತಾದ ಬಳಿಕ ಗೊರವಯ್ಯ ಮಾಲತೇಶಪ್ಪ ಕುಟುಂಬಕ್ಕೆ ಆಸರೆ ಇಲ್ಲದಂತಾಯಿತು. ಎದ್ದು ಓಡಾಡಲು ಬಾರದ ಗೊರವಯ್ಯ ತನ್ನ ಪರಿಸ್ಥಿತಿ ನೆನೆದು ಕಣ್ಣೀರಿಡುತ್ತಿದ್ದರು. ಇಂತಹ ಸಂದರ್ಭದಲ್ಲಿ ಸ್ವಂತ ಮನೆ ಇಲ್ಲದೇ ಪರಿತಪಿಸುತ್ತಿದ್ದ ಇವರ ಕಷ್ಟವನ್ನು ನೋಡಿ ಭಕ್ತರ ಸಮೂಹ ಸಹಾಯ ಹಸ್ತ ಚಾಚಿದರು. ಭಕ್ತರು ಸಹಾಯ ಮಾಡಿದ್ದರಿಂದ ಸುಂದರ ಮನೆ ನಿರ್ಮಾಣ ಮಾಡಿಕೊಂಡು ನೆಮ್ಮದಿಯಾಗಿ ಇರೋಣ ಎನ್ನುವಷ್ಟರಲ್ಲಿ ವಿಧಿ ಲಿಖಿತವೇ ಬೇರೆಯಾಗಿತ್ತು. ಮನೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಮೊದಲೇ ಗೊರವಯ್ಯ ಮಾಲತೇಶಪ್ಪ ವಿಧಿವಶರಾಗಿದ್ದಾರೆ.
ಮಕ್ಕಳ ಮರಣ, ಪತ್ನಿಗೆ ಸಂಕಷ್ಟ
ಕಾರ್ಣಿಕ ನುಡಿಯುತ್ತಿದ್ದ ಗೊರವಯ್ಯ ಮಾಲತೇಶಪ್ಪಗೆ ಇಬ್ಬರು ಗಂಡು ಮಕ್ಕಳಿದ್ದರು. ದೊಡ್ಡ ಮಗ ನಾಲ್ಕು ವರ್ಷಗಳ ಹಿಂದೆ ಅನಾರೋಗ್ಯದಿಂದ ಸಾವನ್ನಪ್ಪಿದರು. 2ನೇ ಮಗನನ್ನು ಸಹ ಕಾಯಿಲೆ ಬಲಿ ತೆಗೆದುಕೊಂಡಿತು.
"ಓಡಾಡಲಾಗದ ಪತಿಯನ್ನು ನೋಡಿಕೊಳ್ಳುತ್ತಿದ್ದೇನೆ. ಬದುಕು ನಡೆಸಲು ನನಗೆ ಯಾವ ಕೆಲಸವೂ ಇಲ್ಲ, ಕೂಲಿ ಹುಡುಕಿಕೊಂಡು ಹೊದರೇ ಪತಿಯನ್ನು ನೋಡಿಕೊಳ್ಳುವವರು ಯಾರು ಇಲ್ಲ. ಮನೆಯಲ್ಲಿಯೇ ಇರುವ ಸ್ಥಿತಿ ನನ್ನದಾಗಿದೆ. ಅವರಿವರು ಕೊಟ್ಟಿದ್ದರಲ್ಲಿ ಜೀವನ ನಡೆಸುತ್ತಿದ್ದೇವೆ" ಎಂದು ಗೊರವಯ್ಯ ಮಾಲತೇಶಪ್ಪ ಪತ್ನಿ ಪರಿತಪಿಸುತ್ತಿದ್ದರು.
ಸರ್ಕಾರದಿಂದ ಮಾಸಾಶನ ನೀಡಲಿಲ್ಲ
31 ವರ್ಷಗಳಿಂದ ಯಾವ ಫಲಪೇಕ್ಷಗಳಿಲ್ಲದೇ ಶ್ರೀ ಮೈಲಾರ ಲಿಂಗೇಶ್ವರನ ಸೇವೆ ಮಾಡಿದ ಗೊರವಯ್ಯ ಮಾಲತೇಶಪ್ಪ ಬದುಕಿನ ಕೊನೆಯ ದಿನಗಳಲ್ಲಿ ಸರ್ಕಾರದಿಂದ ಮಾಸಾಶನ ಸಿಗಲಿಲ್ಲ. ಇನ್ನಾದರು ಅವರ ಮಡದಿಗೆ ಗೊರವಯ್ಯ ಸೇವೆ ಸಲ್ಲಿಸಿರುವುದನ್ನು ಪರಿಗಣಿಸಿ ಆರ್ಥಿಕ ಭದ್ರತೆ ನೀಡಬೇಕು ಎನ್ನುವುದು ಭಕ್ತರ ಬೇಡಿಕೆ. ಶ್ರೀ ಮೈಲಾರಲಿಂಗೇಶ್ವರನ ಭಕ್ತರು ಸ್ವಾಮಿಗೆ ಕಾಣಿಕೆ, ಮುಡುಪು ಸಲ್ಲಿಸುವುದರ ಜೊತೆಗೆ ಸ್ವಲ್ಪ ಈ ಗೊರವಯ್ಯನ ಕುಟುಂಬಕ್ಕೂ ನೀಡುತ್ತಿರುವುದರಿಂದ ಇವರಿಗೆ ಆಸರೆಯಾಗಿದೆ.