ನೂರು ಟನ್ ತೂಕದ ಕೊಟ್ಟೂರೇಶ್ವರ ರಥ ಉತ್ಸವಕ್ಕೆ ಸಿದ್ಧ
ಬಳ್ಳಾರಿ, ಜನವರಿ 20 : ಕೊಟ್ಟೂರೇಶ್ವರ ಸ್ವಾಮಿಯ ನೂತನ ರಥಗಡ್ಡೆಯನ್ನು 'ರಥಾಂಗ ಹೋಮ'ದ ಮೂಲಕ ಶಿಲ್ಪಿಗಳು ಸನ್ನಿಧಾನಕ್ಕೆ ಶುಕ್ರವಾರ ಸಮರ್ಪಿಸಿದ್ದಾರೆ. ಕೊಟ್ಟೂರೇಶ್ವರನ ನೂರು ಟನ್ ತೂಕದ ನೂತನ ರಥ ಉತ್ಸವಕ್ಕೆ ಸಿದ್ಧವಾಗಿದೆ.
ಕೊಟ್ಟೂರೇಶ್ವರ ಸ್ವಾಮಿಯ ನೂತನ ರಥಗಡ್ಡೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ನಿರ್ಮಾಣ ಮಾಡಿದ ಶಿಲ್ಪಿಗಳು ರಥಾಂಗ ಹೋಮವನ್ನು ಧಾರ್ಮಿಕ ವಿಧಿ ವಿಧಾನದ ಮೂಲಕ ನೆರವೇರಿಸಿ, ಕೊಟ್ಟೂರೇಶ್ವರನಿಗೆ ಸಮರ್ಪಿಸಿದರು. ರಥದ ಗಡ್ಡೆ ಹದಿನೆಂಟೂವರೆ ಅಡಿ ಎತ್ತರವಿದ್ದು, ಶಿಲ್ಪಿ ಜಿ.ಬಿ.ಹಂಸಾನಂದ ಆಚಾರ್ ನೇತೃತ್ವದಲ್ಲಿ ಇಪ್ಪತ್ತಕ್ಕೂ ಹೆಚ್ಚು ಶಿಲ್ಪಿಗಳು ಕೇವಲ ಎಂಟು ತಿಂಗಳಲ್ಲಿ ರಥ ಸಿದ್ಧಪಡಿಸಿದ್ದಾರೆ.
ರಥದ ಗಡ್ಡೆಯನ್ನು ಸಾಗುವಾನಿ ಹಾಗೂ ಹೊನ್ನೆ ಕಟ್ಟಿಗೆಯಿಂದ ನಿರ್ಮಿಸಲಾಗಿದೆ. ಹಳೆಯ ರಥದ ಆಕಾರದಲ್ಲಿ ಹೊಸದನ್ನು ಶಿಲ್ಪಿಗಳು ಪುನರ್ ನಿರ್ಮಾಣ ಮಾಡಿದ್ದು, ಶ್ರದ್ಧೆ - ಭಕ್ತಿಯನ್ನು ಮೂಡಿಸುತ್ತಿದೆ. ಇದರ ನಿರ್ಮಾಣಕ್ಕೆ ಮುಜರಾಯಿ ಇಲಾಖೆ ಎರಡು ಕೋಟಿ ರುಪಾಯಿ ಅನುದಾನ ನೀಡಿದೆ.
ಬೆಂಗಳೂರಿನ ರಾಘವಶರ್ಮ ನೇತೃತ್ವದ ಹದಿನಾರು ಋತ್ವಿಜರ ತಂಡ ಬೆಳಿಗ್ಗೆ ಆರು ಮೂವತ್ತರಿಂದ ಮಧ್ಯಾಹ್ನ ಒಂದು ಮೂವತ್ತರವರೆಗೆ ಗಣಪತಿ ಹೋಮ, ವಾಸ್ತುಹೋಮ, ವಿಶ್ವಕರ್ಮಹೋಮ, ರಥಹೋಮ, ಮಹಾಲಕ್ಷ್ಮೀ, ಕಾಳೀಕಾಂಬ, ಗಾಯತ್ರಿ, ಲಕ್ಷ್ಮೀ, ಸರಸ್ವತಿ, ಚೌಡೇಶ್ವರಿ, ಷಣ್ಮುಖ, ಅಷ್ಟದಿಕ್ಪಾಲಕರು, ಕಾಮಧೇನು= ಕಲ್ಪವೃಕ್ಷ, ನವಗ್ರಹ ಹೋಮಗಳನ್ನು ನೆರವೇರಿಸಿತು.
ಮಹಲ್ ಮಠದ ಶಂಕರ ಸ್ವಾಮೀಜಿ ಪೂರ್ಣಾಹುತಿ ನೀಡಿದರು. ಹಿರೇಮಠದ ಕ್ರಿಯಾಮೂರ್ತಿ ಶಂಕರ ಸ್ವಾಮೀಜಿ, ಪಟ್ಟಣದ ಮುಖಂಡರಾದ ಕನ್ನಿಹಳ್ಳಿ ಮಂಜುನಾಥಗೌಡ, ಸಕ್ರಿಗೌಡ, ಬಿ.ಎಸ್.ಕೊಟ್ರೇಶ್, ಕೆ.ಗುರುಸಿದ್ದನಗೌಡ, ಧರ್ಮಕರ್ತ ಎ.ಎಂ.ಬಿ.ಕೊಟ್ರಯ್ಯ, ಸಹ ಧರ್ಮಕರ್ತ ಸಿ.ಎಚ್.ಎಂ.ಗಂಗಾಧರ, ದೇವರಮನಿ ಕರಿಯಪ್ಪ, ಕರಡಿ ಕೊಟ್ರಯ್ಯ, ಬಾವಿಕಟ್ಟಿ ಶಿವಾನಂದ, ಹಾಗೂ ಆಯಗಾರ ಬಳಗದವರು ಪಾಲ್ಗೊಂಡಿದ್ದರು.ವೀರರಾಘವಶರ್ಮ ನಂತರ ನಡೆದ ಸಭೆಯಲ್ಲಿ ಮಾತನಾಡಿದರು.