ಬಳ್ಳಾರಿಯಲ್ಲಿ ಕೆ.ಆರ್.ಪಿ ಪಕ್ಷಕ್ಕೆ ಬೆಂಬಲ ಸೂಚಿಸುವುದಾಗಿ ಹೇಳಿರುವ ಕಾಂಗ್ರೆಸ್ ಮುಖಂಡರ ವಿಡಿಯೋ ವೈರಲ್
ಬಳ್ಳಾರಿ, ಮೇ, 07: ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಎಂ.ದಿವಾಕರ ಬಾಬು ಅವರು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಕೆಆರ್ಪಿ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಹೇಳಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಳ್ಳಾರಿ ನಗರದ ಗಂಗಪ್ಪ ಜಿನ್ನಿನಲ್ಲಿ ಒಂದು ವಾರದ ಹಿಂದೆಯೇ ದಿವಾಕರಬಾಬು ಅವರು ತಮ್ಮ ಬೆಂಬಲಿಗರೊಂದಿಗೆ ಸಭೆ ಸೇರಿ ತಾವು ತಟಸ್ಥರಾಗಿರುವ ಬಗ್ಗೆ, ಬೆಂಬಲಿಗರು ಯಾರನ್ನಾದರೂ ಬೆಂಬಲಿಸಬಹುದು ಎಂಬರ್ಥದ ಮಾತುಗಳನ್ನು ಆಡಿದ್ದರು. ತದನಂತರ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತ ನಾನು ಫುಟ್ಬಾಲ್ ಪ್ಲೇಯರ್, ಫುಟ್ಬಾಲ್ ಆಡುವೆ ಎಂದು ಮಾರ್ಮಿಕವಾಗಿ ಹೇಳಿ ರಾಜಕೀಯ ಚರ್ಚೆ ಹುಟ್ಟು ಹಾಕಿದ್ದರು.

ಈ ಹೇಳಿಕೆ ನೀಡಿದಾಗಿನಿಂದ ದಿವಾಕರಬಾಬು ಅವರು ಅಧಿಕೃತವಾಗಿ ಕೆಆರ್ಪಿ ಪಕ್ಷ ಸೇರುತ್ತಾರೆ ಎನ್ನುವ ವದಂತಿ ಹರಡಿತ್ತು. ತದನಂತರ ಈ ಬಗ್ಗೆ ಅವರು ಸ್ಪಷ್ಟನೆಯನ್ನು ನೀಡಿದ್ದು, ನಾನು ಕಾಂಗ್ರೆಸ್ ಪಕ್ಷದಲ್ಲಿದ್ದೇನೆ. ಯಾವುದೇ ಬೇರೆ ಪಕ್ಷಕ್ಕೆ ಸೇರುವುದಿಲ್ಲ ಎಂದಿದ್ದರು.
ಆದರೆ ಈಗ ಅವರೇ ಮಾತನಾಡಿರುವ ವಿಡಿಯೋವೊಂದು ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ದಿವಾಕರಬಾಬು ಅವರು "ನಾನು ಬಹಳ ದಿನಗಳಿಂದ ರಾಜಕೀಯದಿಂದ ದೂರ ಇದ್ದೆ. ಈಗ ಮಹಿಳೆಯೊಬ್ಬರು ಬಳ್ಳಾರಿ ನಗರದಿಂದ ಸ್ಪರ್ಧೆ ಮಾಡಿದ್ದು, ಅವರ ಪತಿ ಒಳ್ಳೆಯವರೋ ಅಥವಾ ಕೆಟ್ಟವರೋ ಅದು ನಮಗೆ ಬೇಕಿಲ್ಲ. ಹೆಣ್ಣುಮಗಳನ್ನು ಬೆಂಬಲಿಸುವ ಉದ್ದೇಶದಿಂದ ನಾವು ಅವರ ಗುರುತಾದ ಫುಟ್ಬಾಲ್ ಬೆಂಬಲಿಸೋಣ" ಎಂದು ಹೇಳಿದ್ದಾರೆ.
ಬಳ್ಳಾರಿಯಲ್ಲಿ ಮೋದಿ ಘರ್ಜನೆ
ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸದ್ಯ ಕರ್ನಾಟಕ ಪ್ರವಾಸದಲ್ಲಿದ್ದು, (ಮೇ 05) ಬಳ್ಳಾರಿಗೆ ಆಗಮಿಸಿದ್ದರು. ಸಾವಿರಾರು ಜನರು ಪ್ರಧಾನಿ ಮೋದಿ ಸಮಾವೇಶದಲ್ಲಿ ಭಾಗಿಯಾಗಿದ್ದು, ಮೋದಿ ಕೈ ಬೀಸುತ್ತಿದ್ದಂತೆ ಜನರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.
ಬಳ್ಳಾರಿಯಲ್ಲಿ ನಡೆದ ನವ ಕರ್ನಾಟಕ ಸಂಕಲ್ಪ ಸಮಾವೇಶದಲ್ಲಿ ಬಿಜೆಪಿ ನಾಯಕರು ಬಳ್ಳಾರಿ ನಗರದ ಅಧಿದೇವತೆ ಆಗಿರುವ ಕನಕ ದುರ್ಗಮ್ಮ ದೇವಿಯ ಮೂರ್ತಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಗೆ ನೆನಪಿನ ಕಾಣಿಕೆಯಾಗಿ ನೀಡಿದ್ದರು.
ಬಳ್ಳಾರಿ ಸಮಾವೇಶದಲ್ಲಿ ಭಜರಂಗ ಬಲಿ, ಆಂಜನೇಯ ಸ್ವಾಮಿಗೆ ಘೋಷಣೆ ಕೂಗುವುದರ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಷಣ ಆರಂಭಿಸಿದರು. ಬಳ್ಳಾರಿಯ ನನ್ನ ಸಹೋದರರ ಸಹೋದರಿಯರಿಗೆ ನನ್ನ ಸಮಸ್ಕಾರ ಎಂದು ಕನ್ನಡದಲ್ಲಿ ಹೇಳಿದ ಪ್ರಧಾನಿ ಮೋದಿ, ದುರ್ಗಮ್ಮ, ಕುಮಾರಸ್ವಾಮಿ ದೇವರಿಗೆ ನಮಸ್ಕರಿಸಿದರು. ಈ ಜಿಲ್ಲೆಯ ಕ್ಷೇತ್ರಗಳಿಗೆ ಆಂಜನೇಯ ವಿಶೇಷ ಆಶೀರ್ವಾದ ಇದೆ ಎಂದು ಹುಲಿಕುಂಟೆ ಆಂಜನೇಯ ಸ್ವಾಮಿಯನ್ನು ನೆನೆದಿದ್ದರು.
ದೇಶದ ಆಡಳಿತದ ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ಕಾರಣವಾಗಿದೆ. ಸುಳ್ಳು ಸರ್ವೇ ಮತ್ತು ಸುಳ್ಳು ಸುದ್ದಿ ಸೃಷ್ಟಿ ಮಾಡಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ಗೆ ಆಗದು. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯು ನಿಷೇಧ ಮತ್ತು ತುಷ್ಟೀಕರಣ ಬಂಡಲ್ ಆಗಿದೆ. ಪ್ರಣಾಳಿಕೆಯಲ್ಲಿ ರದ್ದು ಮಾಡಬೇಕು, ನಿಷೇಧ ಮಾಡಬೇಕೆಂದು ಎಂದು ಹೇಳಿದೆ. ಆದರೆ ಕಾಂಗ್ರೆಸ್ ಬುಡವು ಅಲುಗಾಡುತ್ತಿದೆ. ದೇಶದ ಜನರು ನೋಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದರು.
ಬಿಜೆಪಿ ಪಕ್ಷಗಳ ಚುನಾವಣೆ ಪ್ರಣಾಳಿಕೆಯು ದೇಶದ ನಂ.1 ಮಾಡುವ ಮಾರ್ಗಸೂಚಿಯಾಗಿದೆ. ರಾಜ್ಯದ ಬಿಜೆಪಿ ಪ್ರಣಾಳಿಕೆಯು ವಚನ ಪತ್ರ, ಸಂಕಲ್ಪ ಪತ್ರವಾಗಿದೆ. ಬಿಜೆಪಿ ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಆಗ ಕಾಂಗ್ರೆಸ್ಗೆ ಹೊಟ್ಟೆ ಉರಿ ಬರುತ್ತದೆ. ಕಾಂಗ್ರೆಸ್ ಮಾನವ ಧರ್ಮ, ವಿಕಾಸದ, ಜೀವನ ಮೌಲ್ಯದ ವಿರೋಧಿಯಾಗಿದೆ. ರಾಜ್ಯದ ಹಿತಾಸಕ್ತಿಯನ್ನು, ನಾಗರೀಕ ಹಿತಾಸಕ್ತಿಯನ್ನು ಕಾಂಗ್ರೆಸ್ ಕಾಯುವುದಿಲ್ಲ ಎಂದಿದ್ದರು.












Click it and Unblock the Notifications