ಬಳ್ಳಾರಿಯಲ್ಲಿ ಪಂಚರತ್ನ ಯಾತ್ರೆ: ಪತಿಯನ್ನು ಬದುಕಿಸಿಕೊಂಡುವಂತೆ ಎಚ್ಡಿಕೆ ಕಾಲು ಹಿಡಿದ ಮಹಿಳೆ
ಕ್ಯಾನ್ಸರ್ನಿಂದ ಬಳಲುತ್ತಿರುವ ಪತಿಯನ್ನು ಬದುಕಿಸಿಕೊಡುವಂತೆ ಮಹಿಳೆಯೊಬ್ಬರು ಮಾಜಿ ಸಿಎಂ ಕುಮಾರಸ್ವಾಮಿ ಅವರ ಕಾಲು ಹಿಡಿದು ಬೇಡಿಕೊಂಡ ಘಟನೆ ಕಂಪ್ಲಿ ತಾಲೂಕಿನಲ್ಲಿ ನಡೆಯುತ್ತಿದ್ದ ಪಂಚರತ್ನ ಯಾತ್ರೆ ವೇಳೆ ನಡೆದಿದೆ.
ಬಳ್ಳಾರಿ, ಜನವರಿ 31: ಜೆಡಿಎಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ರೈತರ ಹಿತ ಕಾಯುವ ಹಾಗೂ ರೈತ ಪರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕೆಲಸವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಪಂಚರತ್ನ ಯಾತ್ರೆ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಕುಡಿತಿನಿ ಗ್ರಾಮಕ್ಕೆ ಆಗಮಿಸಿದ ಕುಮಾರಸ್ವಾಮಿ, ಧರಣಿ ನಿರತ ಭೂ ಸಂತ್ರಸ್ತ ರೈತರನ್ನು ಭೇಟಿ ಮಾಡಿ ಅವರ ಬೇಡಿಕೆ ಹಾಗೂ ಸಂಕಷ್ಟಗಳನ್ನು ಆಲಿಸಿದ್ದಾರೆ.
ಈ ವೇಳೆ ರೈತರನುದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ನಮ್ಮದು ರೈತ ಪರ ಸರ್ಕಾರ. ನಮಗೆ ರೈತಾಪಿ ಜನಗಳ ಪರ ಕಾಳಜಿಯಿದೆ. ಆದರೆ, ರಾಜ್ಯ ಸರ್ಕಾರ ರೈತ ವಿರೋಧಿಯಾಗಿ ವರ್ತಿಸುತ್ತಿದೆ. ಕೈಗಾರಿಕೆ ಉದ್ದೇಶಕ್ಕಾಗಿ ನಿಮ್ಮ ಭೂಮಿ ವಶಪಡಿಸಿಕೊಳ್ಳಲಾಗಿದೆ. ಆದರೆ ಕೈಗಾರಿಕೆ ಸ್ಥಾಪನೆ ಮಾಡಲಿಲ್ಲ. ಕುಟುಂಬಗಳಿಗೆ ಉದ್ಯೋಗ ನೀಡಲಿಲ್ಲ. ರೈತರಿಂದ ಕಡಿಮೆ ದರಕ್ಕೆ ಭೂಮಿ ಖರೀದಿಸಿ ಹೆಚ್ಚಿನ ದರಕ್ಕೆ ಮಾರಿಕೊಳ್ಳುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.
ಮಾತು ಮುಂದುವರಿಸಿದ ಅವರು, ರೈತರ ಭೂಮಿ ಕೆಲವರ ಪಾಲಾಗುವ ಸಾಧ್ಯತೆ ಇದೆ. ರೈತರನ್ನು ನಂಬಿಸಿ ಮೋಸ ಎಸಲಾಗುತ್ತಿದೆ. ರಾಜ್ಯ ಸರ್ಕಾರ ರೈತರ ಪರವಾದ ಯಾವುದೇ ಕಾಳಜಿಯಿಂದ ಕಾರ್ಯನಿರ್ವಹಿಸುತ್ತಿಲ್ಲ. ಮುಂದಿನ ಚುನಾವಣೆಯಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ವಿಶ್ವಾಸ ಇದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಒಂದೇ ತಿಂಗಳಲ್ಲಿ ಭೂಸಂತ್ರಸ್ತರ ಸಮಸ್ಯೆ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.
ಕ್ಯಾನ್ಸರ್ ನಿಂದ ಬಳಲುತ್ತಿರುವ ತನ್ನ ಪತಿಯನ್ನು ಬದುಕಿಸಿಕೊಡುವಂತೆ ನನ್ನ ಮುಂದೆ ಕಣ್ಣೀರಿಟ್ಟ ಕಂಪ್ಲಿ ತಾಲೂಕಿನ ಹೊಸ ದರೋಜಿ ಗ್ರಾಮದ ಈ ತಾಯಿಯ ಹೆಸರು ಹನುಮಂತಮ್ಮ. ಕಡು ಬಡತನದಲ್ಲಿರುವ ಅವರಿಗೆ ಔಷಧ ಖರೀದಿಗೆ ಕೂಡ ಕಷ್ಟದ ಸ್ಥಿತಿ ಇದೆ.1/3#ಪಂಚರತ್ನ_ರಥಯಾತ್ರೆ #ಸಂಡೂರು #ಬಳ್ಳಾರಿ pic.twitter.com/CEGkpFlboC
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) January 30, 2023
ಪತಿಯನ್ನು ಬದುಕಿಸಿಕೊಂಡುವಂತೆ ಕುಮಾರಸ್ವಾಮಿ ಬಳಿ ಮಹಿಳೆ ಗೋಳಾಟ
ಕ್ಯಾನ್ಸರ್ನಿಂದ ಬಳಲುತ್ತಿರುವ ಪತಿಯನ್ನು ಬದುಕಿಸಿಕೊಡುವಂತೆ ಮಹಿಳೆಯೊಬ್ಬರು ಕುಮಾರಸ್ವಾಮಿ ಅವರ ಕಾಲು ಹಿಡಿದು ಬೇಡಿಕೊಂಡ ಘಟನೆ ನಡೆದಿದೆ. ಕಂಪ್ಲಿ ತಾಲೂಕಿನ ಹೊಸ ದರೋಜಿ ಗ್ರಾಮದ ಹನುಮಂತಮ್ಮ ಎನ್ನುವ ಮಹಿಳೆ ಪತಿಯನ್ನು ಬದುಕಿಸಿಕೊಡುವಂತೆ ಕುಮಾರಸ್ವಾಮಿಯವರ ಮುಂದೆ ದುಃಖ ತೋಡಿಕೊಂಡರು.
ಮಹಿಳೆಯ ಕಷ್ಟಕಂಡು ಮರುಗಿದ ಕುಮಾರಸ್ವಾಮಿ ಬೆಂಗಳೂರಿಗೆ ಪತಿಯನ್ನು ಕರೆದುಕೊಂಡು ಬಂದರೆ ಚಿಕಿತ್ಸೆ ಕೊಡಿಸುವೆ ಎಂದು ಭರವಸೆ ನೀಡಿದ್ದಾರೆ. ಇದೇ ವೇಳೆ ಮಹಿಳೆಗೆ ಬೆಂಗಳೂರಿಗೆ ಬರುವಂತೆ ಹಣದ ನೆರವನ್ನು ಕೂಡಾ ನೀಡಿದ್ದಾರೆ.
ಕುಷ್ಟಗಿಯಲ್ಲಿ ಪಂಚರತ್ನ ಯಾತ್ರೆ ಮುಗಿಸಿ ಸಂಡೂರಿಗೆ ತೆರಳುವ ಮಾರ್ಗದ ನಡುವೆ ಕಂಪ್ಲಿ ತಾಲೂಕಿನ ದೇವಲಾಪುರ ಎಂಬ ಹಳ್ಳಿಯ ರಸ್ತೆ ಬದಿಯ ಸಣ್ಣ ಹೋಟೆಲ್ನಲ್ಲಿ ಮಂಡಕ್ಕಿ, ಚಹಾ ಸವಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಹೋಟೆಲ್ ಮಾಲೀಕ ನಾಗಪ್ಪ ಅವರ ಜೊತೆ ಕುಶಲೋಪರಿ ವಿಚಾರಿಸಿದರು.