ರಾಜೀನಾಮೆ ವಾಪಸ್ ಬಗ್ಗೆ ಆನಂದ್ ಸಿಂಗ್ ಹೇಳಿದ್ದೇನು?
ಬಳ್ಳಾರಿ, ಜುಲೈ 08 : 'ಮತ್ತೊಮ್ಮೆ ರಾಜೀನಾಮೆ ಅಂಗೀಕರಿಸುವಂತೆ ಸ್ಪೀಕರ್ಗೆ ಮನವಿ ಮಾಡುತ್ತೇನೆ. ನನ್ನ ಬೇಡಿಕೆ ಈಡೇರಿಸುವ ತನಕ ರಾಜೀನಾಮೆ ವಾಪಸ್ ಪಡೆಯುವುದಿಲ್ಲ' ಎಂದು ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಹೇಳಿದರು.
ಬಳ್ಳಾರಿಯಲ್ಲಿ ಸೋಮವಾರ ಮಾತನಾಡಿದ ಆನಂದ್ ಸಿಂಗ್ ಅವರು, 'ನಾನು ಎಲ್ಲಿಯೂ ಹೋಗಿಲ್ಲ. ಕ್ಷೇತ್ರದಲ್ಲಿಯೇ ಇದ್ದೇನೆ. ನಾನು ಸರ್ಕಾರಕ್ಕೆ ಎರಡು ಬೇಡಿಕೆ ಇಟ್ಟಿದ್ದೇನೆ. ಇದನ್ನು ಈಡೇರಿಸುವ ತನಕ ನನ್ನ ನಿಲುವು ಬದಲಾವಣೆಯಾಗಲ್ಲ' ಎಂದರು.
ಜುಲೈ 1ರಂದು ಶಾಸಕ ಆನಂದ್ ಸಿಂಗ್ ರಾಜೀನಾಮೆ ನೀಡಿದ್ದಾರೆ. ಇದುವರೆಗೂ ಸ್ಪೀಕರ್ ರಮೇಶ್ ಕುಮಾರ್ ಅವರು ರಾಜೀನಾಮೆಯನ್ನು ಅಂಗೀಕಾರ ಮಾಡಿಲ್ಲ. 'ರಾಜೀನಾಮೆ ಅಂಗೀಕರಿಸುವಂತೆ ಮತ್ತೊಮ್ಮೆ ಮನವಿ ಮಾಡುತ್ತೇನೆ' ಎಂದು ಆನಂದ್ ಸಿಂಗ್ ಹೇಳಿದರು.
ಸ್ಪೀಕರ್ ಭೇಟಿ ಮಾಡಿ ಆನಂದ್ ಸಿಂಗ್ ಅವರು ರಾಜೀನಾಮೆ ನೀಡಿದ್ದರು. ಬಳಿಕ ಶನಿವಾರ ಕಾಂಗ್ರೆಸ್ನ 9, ಜೆಡಿಎಸ್ನ 3 ಶಾಸಕರು ರಾಜೀನಾಮೆ ನೀಡಿದ್ದಾರೆ. ಆನಂದ್ ಸಿಂಗ್ ಆಪರೇಷನ್ ಕಮಲಕ್ಕೆ ಒಳಗಾಗಿ ರಾಜೀನಾಮೆ ನೀಡಿದ್ದಾರೆಯೇ? ಎಂಬ ಪ್ರಶ್ನೆ ಎಲ್ಲವರನ್ನು ಕಾಡುತ್ತಿದೆ.

ಆನಂದ್ ಸಿಂಗ್ ಬೇಡಿಕೆ ಏನು?
ಜಿಂದಾಲ್ ಸಂಸ್ಥೆ ಸೇರಿದಂತೆ ಯಾವುದೇ ಕಾರ್ಖನೆಗಳಿಗೆ ಲೀಸ್ ಕಂ ಸೇಲ್ ಕೊಡಬಾರದು. ಉದ್ಯೋಗ ಸೃಷ್ಟಿ ಮಾಡುವ ನೆಪದಲ್ಲಿ ಭೂಮಿ ಕಡಿಮೆ ಬೆಲೆಗೆ ಕೊಡುವುದು ಸೂಕ್ತವಲ್ಲ. ಲೀಸ್ ಮಾತ್ರ ಕೊಡಿ ಎಂಬುದು ಆನಂದ್ ಸಿಂಗ್ ಅವರ ಬೇಡಿಕೆಯಾಗಿದೆ.

ವಿಜಯನಗರವನ್ನು ಜಿಲ್ಲೆ ಮಾಡಿ
ಬಳ್ಳಾರಿ ಜಿಲ್ಲೆಯ ವಿಜಯನಗರವನ್ನು ಜಿಲ್ಲೆಯನ್ನಾಗಿ ಮಾಡಬೇಕು ಎಂದು ಆನಂದ್ ಸಿಂಗ್ ಅವರು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ. ಆದರೆ, ಆನಂದ್ ಸಿಂಗ್ ಅವರ ಬೇಡಿಕೆ ಕುರಿತು ಸರ್ಕಾರ ಇದುವರೆಗೂ ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ.

ಮುಖ್ಯಮಂತ್ರಿಗಳು ಕರೆ ಮಾಡಿದ್ದರು
'ಮುಖ್ಯಮಂತ್ರಿಗಳು ವಿದೇಶದಿಂದ ನನಗೆ ಕರೆ ಮಾಡಿ ಭರವಸೆ ನೀಡಿದರು. ಯಾವ ನಾಯಕರ ಜೊತೆಗೂ ಚರ್ಚೆಗೆ ನಾನು ಹೋಗುವುದಿಲ್ಲ. ಸರ್ಕಾರ ಏನು ಆದೇಶ ಹೊರಡಿಸುತ್ತದೆ ಎಂಬುದನ್ನು ಕಾದು ನೋಡುತ್ತೇನೆ' ಎಂದು ಆನಂದ್ ಸಿಂಗ್ ಹೇಳಿದರು.

ನಾನು ಮುಂಬೈಗೆ ಹೋಗಿಲ್ಲ
ಶನಿವಾರ ಕಾಂಗ್ರೆಸ್ನ 9, ಜೆಡಿಎಸ್ನ 3 ಶಾಸಕರು ರಾಜೀನಾಮೆ ನೀಡಿದ್ದಾರೆ. ರಾಮಲಿಂಗಾ ರೆಡ್ಡಿ ಮತ್ತು ಮುನಿರತ್ನ ಹೊರತುಪಡಿಸಿ ಉಳಿದ ಶಾಸಕರು ಮುಂಬೈಗೆ ಹೋಗಿದ್ದಾರೆ. ಆನಂದ್ ಸಿಂಗ್ ಅವರು ಮುಂಬೈಗೆ ಹೋಗಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು. ಆದರೆ, ಅವರು ನಾನು ಬಳ್ಳಾರಿಯಲ್ಲಿದ್ದೇನೆ ಎಂದು ಸ್ಪಷ್ಟಪಡಿಸಿದರು.












Click it and Unblock the Notifications