3 ವರ್ಷ ಹೋರಾಡಿ, ಮೀಸಲಾತಿ ವಿಚಾರದಲ್ಲಿ ನುಡಿದಂತೆ ನಡೆದುಕೊಂಡಿದ್ದೇನೆ: ಶ್ರೀರಾಮುಲು
ಬಳ್ಳಾರಿ, ಅಕ್ಟೋಬರ್ 10: ''ನಾನು 151 ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸುತ್ತೇನೆ ಎಂದು ಮಾತು ಕೊಟ್ಟಿದ್ದೆ, ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ'' ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಅಭಿವೃದ್ಧಿ ಇಲಾಖೆ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಬಳ್ಳಾರಿಯ ಎಸ್ಪಿ ವೃತ್ತದಲ್ಲಿ ಶ್ರೀರಾಮುಲು ಅಭಿಮಾನಿಗಳು ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಿಸಿ ರಾಜ್ಯ ಸರ್ಕಾರದ ತೀರ್ಮಾನದ ಹಿನ್ನೆಲೆ ಹಮ್ಮಿಕೊಂಡಿದ್ದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇವರಿಗಾಗಿ ಜನರ ಕಿತ್ತಾಟ; ಬಳ್ಳಾರಿ ಗಡಿಭಾಗದಲ್ಲೊಂದು ವಿಚಿತ್ರ ಆಚರಣೆ
ಮೀಸಲಾತಿ ಹೆಚ್ಚಿಸುವುದಾಗಿ ಮಾತು ಕೊಟ್ಟ ವ್ಯಕ್ತಿ ಶ್ರೀರಾಮುಲು ಮೂರು ವರ್ಷಗಳಿಂದ ಎಷ್ಟು ಕಷ್ಟಪಟ್ಟಿರಬಹುದು ಎಂದು ಆಲೋಚನೆ ಮಾಡಿ. ಶ್ರೀರಾಮುಲು ಮೀಸಲಾತಿ ಕೊಡ್ತೀನಿ ಅಂತಾ ಹೇಳಿದ್ದರು, ಇನ್ನೂ ಏನು ಮಾಡುತ್ತಿದ್ದಾರೆ? ಎಂದೆಲ್ಲಾ ತಮಾಷೆ ಮಾಡಿದರು. ಆದರೆ ಇವತ್ತು ಮೀಸಲಾತಿ ಹೆಚ್ಚಾಗಿದೆ, ಬುದ್ಧ, ಬಸವ, ಅಂಬೇಡ್ಕರ್, ವಾಲ್ಮೀಕಿ ಅವರ ಆದರ್ಶಕ್ಕೆ ತಕ್ಕಂತೆ ಕೆಲಸ ಮಾಡಿದ್ದೇನೆ, ಎಸ್ಸಿಗೆ ಶೇ.15 ರಿಂದ 17 ಮಾಡಿದ್ದೇವೆ, ಎಸ್ಟಿಗೆ ಶೇ.3 ರಿಂದ 7 ಮೀಸಲಾತಿ ಮಾಡಿರುವುದು ನನ್ನ ಸರಕಾರ ಎಂದು ಹೇಳಿದರು.
2016ರಲ್ಲಿ ಸಿದ್ದರಾಮಯ್ಯ ಅಹಿಂದ ಮುಖವಾಡ ಹಾಕಿ ಲಾಭ ಪಡೆದುಕೊಂಡರು. ಅವರಿಗೂ ಮೀಸಲಾತಿ ಕೊಡಿಸಲು ಆಗಲಿಲ್ಲ. ನಾನು ತಾಳ್ಮೆ ಕಳೆದುಕೊಳ್ಳದೇ ಮೀಸಲಾತಿ ಕೊಡಿಸಲು ಹೋರಾಟ ಮಾಡಿದ್ದೇನೆ. ನಾನು ಕೊಟ್ಟ ಮಾತು ಈಡೇರಿಸಿದ್ದೇನೆ. ಕೆಲಸದ ಮೂಲಕ ಉತ್ತರ ಕೊಟ್ಟಿದ್ದೇನೆ ಎಂದರು.
ಎಸ್ಟಿಗೆ 7, ಎಸ್ಸಿಗೆ 17 ರಷ್ಟು ಉದ್ಯೋಗ
ಈ ಮೀಸಲಾತಿಯಿಂದ ನಮ್ಮ ಮಕ್ಕಳಿಗೆ ಶಿಕ್ಷಣದಲ್ಲಿ ಮೀಸಲಾತಿ ಸಿಕ್ಕರೆ ಡಾಕ್ಟರ್, ಎಂಜಿನಿಯರ್ಗಳಾಗುತ್ತಾರೆ, ಎಸ್ಪಿ, ಡಿಸಿಗಳಾಗುತ್ತಾರೆ. ನಮ್ಮ ಮಕ್ಕಳಿಗೆ ಮುಂಬರುವ ದಿನಗಳಲ್ಲಿ ಎಸ್ಟಿ ಸಮುದಾಯದವರಿಗೆ ನೂರಕ್ಕೆ 7 ಕೆಲಸಗಳು ಸಿಗುತ್ತವೆ, ಪರಿಶಿಷ್ಟ ಜಾತಿಯ ನಮ್ಮ ಜನರಿಗೆ ನೂರಕ್ಕೆ 17 ಜನರಿಗೆ ಉದ್ಯೋಗ ಸಿಗುತ್ತವೆ ಎಂದು ಹೇಳಿದ ಶ್ರೀರಾಮುಲು, ನಮ್ಮ ಸರ್ಕಾರ ಕೊಟ್ಟ ಮಾತು ಉಳಿಸಿಕೊಂಡಿದೆ, ಗೇಲಿ ಮಾಡಿದ ಜನ ನೀವೆಲ್ಲಿದ್ದೀರಿ? ಎಂದು ಪ್ರಶ್ನಿಸಿದರು.
ಸಾರಿಗೆ ನೌಕರರ ಮರಳಿ ನೇಮಕ
ಇನ್ನು ಸಾರಿಗೆ ನೌಕರರರಿಂದ ಸೋಮವಾರ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನಲೆಯಲ್ಲಿ ಮಾತನಾಡಿ, ವಜಾಗೊಂಡ ನೌಕರರ ಬಳಿ ನಾನು ಮನವಿ ಮಾಡುವೆ. ಅವರು ಪತ್ರ ಬರೆದುಕೊಟ್ಟಲ್ಲಿ ಅವರನ್ನ ಮರಳಿ ನೇಮಕ ಮಾಡಿಕೊಳ್ಳಲಾಗುವುದು. ಕೋವಿಡ್ ನಿಂದ ವೇತನ ಹಂಚಿಕೆಗೆ ಸಾಕಷ್ಟು ಸಮಸ್ಯೆ ಆಯ್ತು. ಆದರೂ ತೊಂದರೆ ಆಗದಂತೆ ಸಾರಿಗೆ ಇಲಾಖೆ ಸೇವೆ ಕೊಟ್ಟಿದೆ. ವೇತನಕ್ಕೆ ತೊಂದರೆ ಆಗದಂತೆ ವೇತನ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಶ್ರೀರಾಮುಲು ಪ್ರಶಂಸಿಸಿದ ಸೋಮಶೇಖರ್ ರೆಡ್ಡಿ
ಶ್ರೀರಾಮುಲು ಕರ್ನಾಟಕದ ಹುಲಿ, ಗಂಡುಗಲಿ, ನಾಯಕ ಅಲ್ಲ, ನುಡಿದಂತೆ ನಡೆದ ಒಬ್ಬ ಮಹಾನಾಯಕ. ಇಂದು ವಾಲ್ಮೀಕಿ ಜಯಂತಿ ಇದೆ, ಜಯಂತಿಗೆ ಮೊದಲೇ ಎಸ್ಟಿ ಸಮುದಾಯಕ್ಕೆ ಶೇ.4 ರಷ್ಟು ಮೀಸಲಾತಿ ಜಾಸ್ತಿ ಮಾಡಿಯೇ ಬಳ್ಳಾರಿಗೆ ಬರುತ್ತೇನೆ ಎಂದು ಹೇಳಿದ್ದರು. ಅದೇ ಕಾರಣಕ್ಕೆ ನಾವಿಂದು ಒಬ್ಬ ದೇಶದ ನಾಯಕನನ್ನು ಬರಮಾಡಿಕೊಂಡಂತೆ ಬರಮಾಡಿಕೊಂಡಿದ್ದೇವೆ. ನಿಮ್ಮೆಲ್ಲರ ಆಶೀರ್ವಾದದಿಂದ ಶ್ರೀರಾಮುಲು ಗಲ್ಲಿಯಿಂದ ಡೆಲ್ಲಿವರೆಗೆ ಮನೆ ಮಾತಾಗಿದ್ದಾರೆ. ನೀವು ಎಷ್ಟು ಪ್ರೀತಿ ತೋರಿಸಿದ್ದೀರೆಂದರೆ ನಿಮ್ಮ ಋಣ ತೀರಿಸಲು ನಾವು ಇನ್ನೊಂದು ಜನ್ಮ ಹುಟ್ಟಿ ಬರಬೇಕು ಎಂದು ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಹೇಳಿದರು.
ಶ್ರೀರಾಮುಲು ಮಾತು ಕೊಟ್ಟರೆ ತಪ್ಪಲ್ಲ
ಶ್ರೀರಾಮುಲು ಅವರನ್ನು ಮೂವತ್ತು ವರ್ಷಗಳಿಂದ ನೋಡುತ್ತಿದ್ದೇವೆ. ಮಾತು ಕೊಟ್ಟರೆ ತಪ್ಪುವುದಿಲ್ಲ. ನಿಮ್ಮೆಲ್ಲರ ಆಶೀರ್ವಾದದಿಂದ ಶ್ರೀರಾಮುಲು ಗಲ್ಲಿಯಿಂದ ದೆಹಲಿಯವರೆಗೆ ಮನೆ ಮಾತಾಗಿದ್ದಾರೆ. ನೀವು ಎಷ್ಟು ಪ್ರೀತಿ ತೋರಿಸಿದ್ದೀರೆಂದರೆ ನಿಮ್ಮ ಋಣ ತೀರಿಸಲು ನಾವು ಇನ್ನೊಂದು ಜನ್ಮ ಹುಟ್ಟಿ ಬರಬೇಕು ಎಂದು ಹೇಳಿದ ಶಾಸಕ ರೆಡ್ಡಿ, ವಿಜಯದಶಮಿ ದಿನ ರಾಮ, ರಾವಣನಿಗೆ ಒಂದು ಬಾಣ ಹೊಡೆದ. ರಾವಣ ಸುಟ್ಟು ಹೋದ. ಅದೇ ರೀತಿ ಕಾಂಗ್ರೆಸ್ಗೆ ಬಾಣ ಹಾಕಬೇಕು. ಬಾಣ ಹಾಕಿದ್ರೆ ಫಿನಿಷ್ ಎಂದು ಸೋಮಶೇಖರ್ ರೆಡ್ಡಿ ಹೇಳಿದರು.
ಮಾಜಿ ಸಂಸದರಾದ ಜೆ.ಶಾಂತಾ, ಸಣ್ಣಫಕೀರಪ್ಪ, ಮಾಜಿ ಶಾಸಕ ಸುರೇಶ್ಬಾಬು, ಬುಡಾ ಅಧ್ಯಕ್ಷ ಮಾರುತಿಪ್ರಸಾದ್, ಪಾಲಿಕೆ ಸದಸ್ಯರಾದ ಮೋತ್ಕರ್ ಶ್ರೀನಿವಾಸ್, ಗೋವಿಂದರಾಜುಲು ಸೇರಿದಂತೆ ಹಲವರು ಹಾಜರಿದ್ದರು.