Hubli violence : ಎಲ್ಲಾ ದೃಷ್ಟಿಕೋನದಿಂದ ಹುಬ್ಬಳ್ಳಿ ಹಿಂಸಾಚಾರದ ಬಗ್ಗೆ ತನಿಖೆ: ಆರಗ ಜ್ಞಾನೇಂದ್ರ
ಹೊಸಪೇಟೆ, ಏಪ್ರಿಲ್ 18: ಹುಬ್ಬಳ್ಳಿಯಲ್ಲಿ ನಡೆದ ಹಿಂಸಾಚಾರದ ಬಗ್ಗೆ ಪೊಲೀಸರು ಎಲ್ಲಾ ದೃಷ್ಟಿಕೋನದಿಂದ ತನಿಖೆ ನಡೆಸಿ ಅಪರಾಧಿಗಳನ್ನು ಬಂಧಿಸಲಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಪೊಲೀಸರು ಈಗಾಗಲೇ 89 ಮಂದಿಯನ್ನು ಬಂಧನ ಮಾಡಿದ್ದಾರೆ ಎಂದು ವರದಿ ಉಲ್ಲೇಖ ಮಾಡಿದೆ.
"ತನಿಖೆ ನಡೆಯುತ್ತಿದೆ. ಹಿಂಸಾಚಾರದ ಸ್ಥಳಗಳ ಬಳಿ ಕಲ್ಲುಗಳ ರಾಶಿಗಳು ಪತ್ತೆಯಾದ ಬಗ್ಗೆ ವಿವರಗಳನ್ನು ಪಡೆಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಕಲ್ಲುಗಳನ್ನು ಯಾರು ತಂದರು ಮತ್ತು ಯಾವ ಉದ್ದೇಶದಿಂದ ತಂದರು ಎಂದು ಶೀಘ್ರವೇ ತನಿಖೆ ನಡೆಸಲಾಗುವುದು," ಎಂದು ತಿಳಿಸಿದರು.
"ಈ ಕಲ್ಲುಗಳನ್ನು ತಂದ ವಿಚಾರದಲ್ಲಿ ಸಮಗ್ರ ತನಿಖೆ ನಡೆಯಲಿದೆ. ಅಪರಾಧಿಗಳು ಯಾವುದೇ ಧರ್ಮಕ್ಕೆ ಸೇರಿದವರಾಗಿದ್ದರೂ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ," ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಭಾನುವಾರ ಹೊಸಪೇಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದರು.

ಪ್ರತಿಭಟನೆಯ ಹೆಸರಿನಲ್ಲಿ ದೇಶದ ಕಾನೂನು ಮುರಿಯಬಾರದು: ಸಚಿವ
ಅನ್ಯಾಯದ ವಿರುದ್ಧ ಪ್ರತಿಭಟಿಸುವ ಜನರ ಹಕ್ಕನ್ನು ಎತ್ತಿಹಿಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಆದರೆ ಪ್ರತಿಭಟನೆಯ ಹೆಸರಿನಲ್ಲಿ ದೇಶದ ಕಾನೂನುಗಳನ್ನು ಮುರಿಯಬಾರದು ಎಂದರು. "ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಆದರೆ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ತಿಭಟನೆಯ ಹೆಸರಿನಲ್ಲಿ ಕಾನೂನನ್ನು ಉಲ್ಲಂಘಿಸುವುದು ಮತ್ತು ಸಾರ್ವಜನಿಕ ಆಸ್ತಿಯನ್ನು ಹಾನಿ ಮಾಡುವುದು, ಜನರಿಗೆ ಹಿಂಸೆ ಮಾಡುವುದು ಅಪರಾಧ," ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಘಟನೆಯು ಸ್ವಯಂಪ್ರೇರಿತವಾಗಿದೆ ಎಂದು ಹೇಳಿದ ಗೃಹ ಸಚಿವರು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ತ್ವರಿತ ಕ್ರಮಕೈಗೊಂಡಿದ್ದಾರೆ. ಪೊಲೀಸರ ತ್ವರಿತ ಕ್ರಮಕ್ಕೆ ಸ್ವಾಗತ ಎಂದು ಶ್ಲಾಘಿಸಿದ್ದಾರೆ. "ಒಂದೂವರೆ ಗಂಟೆಯೊಳಗೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ತ್ವರಿತ ಕ್ರಮ ಕೈಗೊಂಡಿದ್ದಾರೆ. ಪೊಲೀಸರ ಪ್ರಯತ್ನಕ್ಕಾಗಿ ನಾನು ಪೊಲೀಸರಿಗೆ ಧನ್ಯವಾದ ಹೇಳುತ್ತೇನೆ," ಎಂದು ಆರಗ ಜ್ಞಾನೇಂದ್ರ ಹೇಳಿದರು.

ಡಿಜೆ, ಕೆಜೆ ಹಳ್ಳಿ ಪ್ರಕರಣದ ಉಲ್ಲೇಖ ಮಾಡಿದ ಸಚಿವರು
ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟರ್ ಶೇರ್ ಮಾಡಿದವರ ವಿರುದ್ಧ ಕ್ರಮ ಕೈಗೊಂಡಿರುವ ಕುರಿತು ಪ್ರಶ್ನೆ ಮಾಡಿದಾಗ, ದೂರು ದಾಖಲು ಮಾಡಿಕೊಂಡು ಕಾನೂನು ಪ್ರಕಾರ ತನಿಖೆ ಆರಂಭಿಸಲಾಗಿದೆ ಎಂದು ಜ್ಞಾನೇಂದ್ರ ತಿಳಿಸಿದರು.
"ಆದರೆ ಸಾವಿರಕ್ಕೂ ಹೆಚ್ಚು ಜನರು ಪೊಲೀಸ್ ಠಾಣೆಯ ಹೊರಗೆ ಜಮಾಯಿಸಿದರು. ಹಿಂಸಾಚಾರವನ್ನು ನಡೆಸಿದರು. ಪೊಲೀಸ್ ವಾಹನಗಳಿಗೆ ಹಾನಿಯಾಗಿದೆ. ಹಲವು ಪೊಲೀಸರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ," ಎಂದು ವಿವರಿಸಿದರು.
"ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹೆಚ್ಚುವರಿ ಪಡೆಗಳನ್ನು ಕರೆಸಿ ನಿಯೋಜನೆ ಮಾಡಲಾಗಿದೆ. ಕಾನೂನನ್ನು ಉಲ್ಲಂಘಿಸುವ ಯಾರನ್ನೂ ಕೂಡಾ ನಾವು ಬಿಡಲಾರೆವು. ಈಗಾಗಲೇ ಕೆಲವರನ್ನು ಬಂಧನ ಮಾಡಲಾಗಿದೆ," ಎಂದು ಹೇಳಿದರು. ಈ ಸಂದರ್ಭದಲ್ಲೇ ಬೆಂಗಳೂರಿನಲ್ಲಿ ಡಿ.ಜೆ. ಹಳ್ಳಿ, ಕೆಜೆ ಹಳ್ಳಿ ಹಿಂಸಾಚಾರವನ್ನು ಹಾಗೂ ಹುಬ್ಬಳ್ಳಿ ಹಿಂಸಾಚಾರವನ್ನು ಹೋಲಿಕೆ ಮಾಡಿದರು.












Click it and Unblock the Notifications